Dandeli: ಸಾರಿಗೆ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್: ಸವಾರರಿಗೆ ಗಾಯ
Team Udayavani, Sep 5, 2023, 11:56 AM IST
ದಾಂಡೇಲಿ: ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಸ್ ನಿಲ್ದಾಣದೊಳಗಡೆ ಪ್ರವೇಶಿಸುತ್ತಿದ್ದ ಸಾರಿಗೆ ಬಸ್ ಮತ್ತು ಹಿಂಬದಿಯಿಂದ ಬರುತ್ತಿದ್ದ ದ್ವಿಚಕ್ರ ವಾಹನದ ನಡುವೆ ಅಪಘಾತವಾಗಿದ್ದು, ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಿಗೆ ಗಾಯವಾದ ಘಟನೆ ನಡೆದಿದೆ.
ಹಳೆದಾಂಡೇಲಿಯ ನಿವಾಸಿಗಳಾದ ಪುರುಷೋತ್ತಮ.ಎನ್.ನಾಯ್ಕ ಮತ್ತು ಅನಿಲ್.ಎ.ಬೌರಾ ಗಾಯಗೊಂಡ ದ್ವಿಚಕ್ರ ವಾಹನ ಸವಾರರಾಗಿದ್ದಾರೆ. ನಗರದ ಬಸ್ ನಿಲ್ದಾಣದೊಳಗಡೆ ಬರುತ್ತಿದ್ದ ಕೆಎ: 25, ಎಸ್:3215 ಸಂಖ್ಯೆಯ ಸಾರಿಗೆ ಬಸ್ಸಿಗೆ ಹಿಂಬದಿಯಿಂದ ಬಂದ ಕೆಎ: 31, ಎಸ್: 1412 ಸಂಖ್ಯೆಯ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಶ್ರೀ.ಕ್ಷೇತ್ರ ಉಳವಿಗೆ ಹೋಗುವ ಮತ್ತು ಶ್ರೀ.ಕ್ಷೇತ್ರ ಉಳವಿಯಿಂದ ಬಂದಿದ್ದ ಭಕ್ತರು ಬಸ್ ನಿಲ್ದಾಣದ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಪರಿಣಾಮವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಗಾಯಗೊಂಡ ಪುರುಷೋತ್ತಮ ಮತ್ತು ಅನಿಲ್ ಅವರನ್ನು ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಗಿದ್ದು, ಇವರಲ್ಲಿ ಪುರುಷೋತ್ತಮ ಎಂಬವರಿಗೆ ತಲೆಗೆ ಗಾಯವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: Road Mishap: ಬೈಕ್ ಗಳ ಮುಖಾಮುಖಿ… ತಂದೆ, ಮಗಳಿಗೆ ಗಾಯ