UV Fusion: ನಿನ್ನ ನೀನು ಮರೆತರೇನು ಸುಖವಿದೆ..?
Team Udayavani, Mar 12, 2024, 11:23 AM IST
ಇಂದು ಜಗತ್ತೇ ಜನರ ಅಂಗೈನಲ್ಲಿದೆ. ಸಾಮಾಜಿಕ ಮಾಧ್ಯಮಗಳು ಜನರ ಜೀವನ ಕ್ರಮ, ವೈವಿಧ್ಯತೆ, ವಿಶಿಷ್ಟ ಹಾವ ಭಾವಗಳನ್ನು ಎಲ್ಲರೆದುರಿಗೆ ತೆರೆದಿಡುತ್ತಿವೆ. ನಮ್ಮ ಯಶಸ್ಸು ಮತ್ತು ಸಂತೋಷವನ್ನು ಇತರರ ವಿರುದ್ಧ ಅಳೆಯುವುದನ್ನು ನಾವು ಹೆಚ್ಚಾಗಿ ಕಾಣುತ್ತೇವೆ.
ನಿರಂತರವಾಗಿ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ನಮ್ಮ ಮಾನಸಿಕ ಯೋಗ ಕ್ಷೇಮ ಮತ್ತು ವೈಯಕ್ತಿಕ ಬೆಳವಣಿಗೆಗೆ ಹಾನಿಕರವಾಗಿದೆ. ಬೇರೆಯವರಿಗಿಂತ ನಾನು ಕುಳ್ಳ, ದಪ್ಪ, ಗಿಡ್ಡ, ಬೊಕ್ಕ ತಲೆಯವ, ಸಣಕಲ, ಕಪ್ಪು, ಬಿಳಿ ಕೂದಲವ, ಬೊಜ್ಜು ಹೊಟ್ಟೆ ಹೀಗೆ.. ಜೀವನದ ಬಹುಪಾಲು ಭಾಗವನ್ನು ಕೊರಗುವುದರಲ್ಲಿಯೇ ಕಳೆದಿರುತ್ತೇವೆ.
ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಸಾಮರ್ಥ್ಯಗಳು, ದೌರ್ಬಲ್ಯಗಳು, ಅನುಭವಗಳು ಮತ್ತು ಆಕಾಂಕ್ಷೆಗಳೊಂದಿಗೆ ಅನನ್ಯನಾಗಿದ್ದಾನೆ. ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು,ಈ ಮೂಲಭೂತ ಸತ್ಯವನ್ನು ಕಡೆಗಣಿಸುತ್ತದೆ ಮತ್ತು ಸ್ವಾಭಿಮಾನದ ಪ್ರಜ್ಞೆಯನ್ನು ದುರ್ಬಲಗೊಳಿಸುತ್ತದೆ.
ನಾವು ಬೇರೊಬ್ಬರ ಮಾನದಂಡಗಳು ಮತ್ತು ಆದರ್ಶಗಳನ್ನು ಪೂರೈಸಲು ಪ್ರಯತ್ನಿಸುತ್ತೇವೆ, ಇದು ಅಸಮರ್ಪಕತೆ ಮತ್ತು ಅಭದ್ರತೆಯ ಭಾವನೆಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ ನವಿಲನ್ನು ನೋಡಿ ಕೆಂಬೂತ ತನ್ನ ಪುಕ್ಕವನ್ನು ಕೆದರಿಕೊಂಡ ಹಾಗೆ.
ಇತರರೊಂದಿಗೆ ಹೋಲಿಸಿಕೊಳ್ಳುವುದು ಅಸಮಾಧಾನ, ಆತಂಕ, ಖನ್ನತೆ ಹಾಗೂ ಅಸೂಯೆಗಳನ್ನು ಬೆಳೆಸುತ್ತದೆ,ಕಹಿಯ ಅನುಭವಗಳನ್ನು ನೀಡುತ್ತದೆ. ಸಂಬಂಧಗಳನ್ನು ಕಲುಷಿತಗೊಳಿಸಿ ಪರಸ್ಪರ ಸಹಕರಿಸುವ ಮತ್ತು ಬೆಂಬಲಿಸುವ ನಮ್ಮ ಸಾಮರ್ಥ್ಯವನ್ನು ತಡೆಯುತ್ತದೆ.
ನಿರಂತರ ಹೋಲಿಕೆಯು ಅತೃಪ್ತಿಯನ್ನು ಶಾಶ್ವತಗೊಳಿಸುತ್ತದೆ. ನಮ್ಮ ಸ್ವಂತ ಪ್ರಗತಿ ಮತ್ತು ಸಾಧನೆಗಳನ್ನು ಪ್ರಶಂಸಿಸಲು ನಾವು ವಿಫಲರಾಗುತ್ತೇವೆ. ಈ ಮನಸ್ಥಿತಿಯು ನಮ್ಮ ಸಂತೋಷವನ್ನು ನಾಶಪಡಿಸುವುದಲ್ಲದೆ, ಜೀವನದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದನ್ನು ತಡೆಯುತ್ತದೆ.
ನಾವು ಯಶಸ್ವಿ ವ್ಯಕ್ತಿಗಳ ಅಂದರೆ ಸಿನೆಮಾ ನಟರ, ಗಾಯಕರ, ಕ್ರಿಕೆಟಿಗರ, ಉದ್ಯಮಿಗಳ, ಸಾಧನೆಗಳನ್ನು ಮಾತ್ರ ನೋಡುತ್ತೇವೆ. ಅವರ ಹಾದಿಯಲ್ಲಿ ಸವೆಸಿದ ಕಷ್ಟ-ನೋವುಗಳು, ಪರಿತಪಿಸಿದ ದಿನಗಳನ್ನು ನೋಡಿರುವುದಿಲ್ಲ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅದೆಷ್ಟೋ ಹಬ್ಬ ಹರಿದಿನಗಳನ್ನು ಆಚರಿಸಿರುವುದಿಲ್ಲ,. ಡಾಕ್ಟರ್ ರಾಜಕುಮಾರ್, ಅಮಿತಾಬ್ ಬಚ್ಚನ್, ಎಷ್ಟೊಂದು ವೈಯಕ್ತಿಕ ಬದುಕಿನ ಕ್ಷಣಗಳನ್ನು ತಪ್ಪಿಸಿಕೊಂಡಿರುವರೋ ಲೆಕ್ಕವಿಟ್ಟವರಾರು?, ಆದರೆ ನಮಗೆ ಕಾಣುವುದು ಅವರ ಯಶಸ್ಸು ಮಾತ್ರ ಸವೆಸಿದ ಹಾದಿ ಅಗೋಚರವಾಗಿಯೇ ಉಳಿದುಬಿಟ್ಟಿರುತ್ತದೆ.
ನಾನು ಬೇರೆಯವನಲ್ಲ,ನಾನು ನಾನೇ
ನಮ್ಮನ್ನು ಇತರರೊಂದಿಗೆ ಹೋಲಿಸುವುದು, ಸ್ವಯಂ ಸೋಲಿಸುವ ನಡವಳಿಕೆಯಾಗಿದ್ದು, ನಮ್ಮ ಸ್ವಾಭಿಮಾನ, ಸಂತೋಷ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ. ಬಾಹ್ಯ ಆದರ್ಶಗಳ ವಿರುದ್ಧ ನಮ್ಮನ್ನು ಅಳೆಯುವ ಬದಲು ನಮ್ಮ ಅನನ್ಯತೆಯನ್ನು ನಾವು ಕಾಪಾಡಿಕೊಳ್ಳಬೇಕು. ಸ್ವಯಂ ಸಹಾನುಭೂತಿ, ಕೃತಜ್ಞತೆ ಬೆಳೆಸಿಕೊಳ್ಳಬೇಕು.
ಓಟದ ಸ್ಪರ್ಧೆಗೆ ಬಿಟ್ಟ ಓಟಗಾರನಿಗೆ ಕಾಣಬೇಕಾಗಿರುವುದು ತನ್ನ ಸ್ಪಷ್ಟ ಪಥ ಹಾಗೂ ಗುರಿ ಮಾತ್ರ, ಈ ಮಟ್ಟದ ನಿಲುವನ್ನು ತಳೆಯಬೇಕು. ಬೇರೆಯವರ ಖುಷಿ, ಗೆಲುವು, ಸಂತೋಷಗಳಲ್ಲಿ ನಾವು ಭಾಗಿಯಾಗಬೇಕು. ಅಸೂಯೆ ದೂರವಿಟ್ಟು ಆತ್ಮತೃಪ್ತಿಯನ್ನು ಹೊಂದಬೇಕು. ನಮ್ಮ ದೌರ್ಬಲ್ಯಗಳ ವಿರುದ್ಧ ನಮ್ಮ ಹೋರಾಟವಿರಬೇಕೆ ಹೊರತು, ಬೇರೆಯವರ ಬಗ್ಗೆ ಅಲ್ಲ. ನಿಮ್ಮಂತೆ ನೀವು ಸಾಕು ನಿಮ್ಮ ಪಯಣ ನಿಮ್ಮದೇ.
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು,ಕಷ್ಟಗಳ ಮಳೆಯ ವಿಧಿ ಸುರಿಯೆ
ಕಲ್ಲು ಸಕ್ಕರೆಯಾಗು, ದೀನದುರ್ಬಲರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ. ನಮ್ಮತನವನ್ನು ಉಳಿಸಿಕೊಂಡು, ಬೇರೆಯವರ ಬದುಕಿಗೂ ಬೆಳಕಾಗೋಣವಲ್ಲವೇ..
- ಕೆ.ಟಿ. ಮಲ್ಲಿಕಾರ್ಜುನಯ್ಯ,
ಶಿಕ್ಷಕರು., ಸೀಗಲಹಳ್ಳಿ.ಶಿರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ