ರಂಜಾನ್ಗೆ ಜನ ಸೇರುವುದನ್ನು ನಿಷೇಧಿಸಿ ಎಂದು ಪ್ರಧಾನಿಗೆ ನಟಿ ಕಂಗನಾ ಒತ್ತಾಯ
Team Udayavani, Apr 18, 2021, 9:29 PM IST
ನವದೆಹಲಿ: ನೇರ ನಿಷ್ಠುರತೆಗೆ ಹೆಸರಾಗಿರುವ ಬಾಲಿವುಡ್ ನಟಿ ಕಂಗನಾ ರನೌತ್ ಇದೀಗ ಮತ್ತೊಂದು ವಿಚಾರಕ್ಕೆ ಸಖತ್ ಸುದ್ದಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ರಂಜಾನ್ ಕುರಿತಾದ ಸಭೆ-ಸಮಾರಂಭಗಳನ್ನು ನಿಷೇಧಿಸಬೇಕೆಂದು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.
ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಕುಂಭಮೇಳದ ನಂತರ ಗೌರವಾನ್ವಿತ ಪ್ರಧಾನಿ ಜೀ ದಯವಿಟ್ಟು ರಂಜಾನ್ ಸಭೆಯನ್ನು ಸಹ ನಿಲ್ಲಿಸುವಂತೆ ವಿನಂತಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ಹಬ್ಬುತ್ತಿರುವ ಸಂದರ್ಭದಲ್ಲಿ ಹರಿದ್ವಾರದಲ್ಲಿ ನಡೆಯುತ್ತಿದ್ದ ಮಹಾ ಕುಂಭಮೇಳಕ್ಕೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಶನಿವಾರವಷ್ಟೇ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿಯವರು, ಈ ವರ್ಷ ಕುಂಭಮೇಳ ಸಂಭ್ರಮಾಚರಣೆಯನ್ನು’ಸಾಂಕೇತಿಕವಾಗಿ ಆಚರಿಸುವಂತೆ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಕುಂಭಮೇಳದ ಕುರಿತು ಮಾಡಿಕೊಂಡ ಮನವಿ ಬೆನ್ನಲ್ಲೇ ಕಂಗನಾ ರಂಜಾನ್ ಗೆ ಜನ ಸೇರುವುದಕ್ಕೆ ನಿಷೇಧ ಹೇರಬೇಕೆಂದು ಹೇಳಿ ಟ್ವೀಟ್ ಮಾಡಿದ್ದರು.
ಟ್ವೀಟ್ ಅಳಿಸಿದ ಕಂಗನಾ:
ಇನ್ನು ರಂಜಾನ್ಗೆ ಜನಗಳು ಸೇರುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ತಾವು ಮಾಡಿದ ಟ್ವೀಟ್ನ್ನು ಕೆಲವೇ ಗಂಟೆಗಳಲ್ಲಿ ಕಂಗನಾ ಅಳಸಿ ಹಾಕಿದ್ದಾರೆ.