ರತ್ನಪುರಿಯಲ್ಲಿ ಆಂಜನೇಯಸ್ವಾಮಿ ಜಾತ್ರೆ, ಜಮಾಲ್ ಬೀಬಿ ಮಾ ಸಾಹೇಬರ ಉರುಸ್
ಆಂಜನೆಯಸ್ವಾಮಿಯ ಪಲ್ಲಕ್ಕಿ ಉತ್ಸವ, ದರ್ಗಾಕ್ಕೆ ದೂಪ ಹಾಕಿ, ತುಪ್ಪದ ದೀಪ ಹಚ್ಚುವ ವಿಶೇಷತಾತ್ರೆ
Team Udayavani, Mar 17, 2022, 9:05 PM IST
ಹುಣಸೂರು : ಹಿಂದೂ-ಮುಸ್ಲಿಮರ ಭಾವೈಕ್ಯತೆ ಮೆರೆವ ರತ್ನಪುರಿ(ದರ್ಗ)ಯ ಶ್ರೀ ಅಂಜನೇಯಸ್ವಾಮಿಯ ಮಹಾಭಿಷೇಕ, ಪಲ್ಲಕಿ ಉತ್ಸವ ಹಾಗೂ ಜಮಾಲ್ ಬೀಬೀ ಮಾ ಸಾಹೇಬರ ಗಂಧೋತ್ಸವ(ಉರುಸ್) ಮಾ.18ರಿಂದ 21ರವರೆಗೆ ಜರುಗಲಿದೆ.
ನೂರಾರು ವರ್ಷಗಳ ಐತಿಹ್ಯವಿರುವ ಈ ಜಾತ್ರೆ-ಉರುಸ್ಗೆ ಜಾನುವಾರುಗಳ ಪರಿಷೆಯೇ ಪ್ರಮುಖ ಆಕರ್ಷಣೆ. ತಾಲೂಕಿನ ಉದ್ದೂರ್ ಕಾವಲ್, ಉಯಿಗೊಂಡನಹಳ್ಳಿ, ಧರ್ಮಾಪುರ, ಅಸ್ಪತ್ರೆಕಾವಲ್ ಗ್ರಾಮಪಂಚಾಯತಿ ವ್ಯಾಪ್ತಿಯ 50ಕ್ಕೂ ಹಳ್ಳಿಗರು ಜಾತ್ರಾಯಶಸ್ಸಿಗೆ ದುಡಿವರು. ರಾಜ್ಯದ ವಿವಿಧೆಡೆಯಿಂದ ಭಕ್ತರು ಭಾಗವಹಿಸಲಿರುವ ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದು, ಉಳಿದಂತೆ ಉತ್ಸವ, ಕೊಂಡೋತ್ಸವ, ಗಂಧೋತ್ಸವ ಹಾಗೂ ಕ್ರೀಡಾಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳದ್ದೇ ಮತ್ತೊಂದು ವಿಶೇಷ, ಆಂಜನೇಯಸ್ವಾಮಿ ದೇವಾಲಯ ಹಾಗೂ ಜಮಾಲ್ ಬೀಬಿಮಾ ಸಾಹೇಬರ ದರ್ಗಾವು ಜಾತ್ರಾಮಾಳದಲ್ಲಿರುವುದು ಭಾವೈಕ್ಯತೆಯ ಪ್ರತೀಕ..
ಅಂಜನೇಯ ಮಹಾಭಿಷೇಕ: ಶ್ರೀಅಂಜನೇಯಸ್ವಾಮಿ ದೇಗುಲ ಸಮಿತಿವತಿಯಿಂದ ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಕೊಂಡೋತ್ಸವ ನಡೆಯಲಿದೆ. ಉತ್ಸವದಂದು ಅನ್ನದಾನ ಆಯೋಜಿಸಲಾಗಿದೆ. ಜಾತ್ರಾಮಾಳ ಪಕ್ಕದಲ್ಲೆ ಇರುವ ಸಂತೆಕೆರೆಯ ದೊಡ್ಡಕೆರೆಯಲ್ಲಿ ಸ್ನಾನ ಮಾಡಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಾಂಸ್ಕೃತಿಕ ಕಲಾತಂಡಗಳ ವೈಭವ ಇಡೀ ಜಾತ್ರೆಗೆ ಕಳೆಕಟ್ಟಲಿದೆ.
ಭಾನುವಾರ ಗಂಧೋತ್ಸವ: ಜಮಾಲ್ಬೀಬೀಮಾಸಾಹೇಬರ ದರ್ಗಾಕ್ಕೆ ಮುಸ್ಲಿಂ ಬಾಂಧವರು ಹುಣಸೂರು, ಕುಡಿನೀರುಮುದ್ದನಹಳ್ಳಿಗಳಿಂದ ಗಂಧವನ್ನು ಮೆರವಣಿಗೆಯಲ್ಲಿ ತಂದು ಗೋರಿಗೆಪೂಜೆಸಲ್ಲಿಸಿ, ಗಂಧೋತ್ಸವ ನೆರವೇರಿಸುವರು.
ಇದನ್ನೂ ಓದಿ : ಬಿಡದಿಯ ತೋಟದಲ್ಲಿ 3,000 ನಾಟಿ ಕೋಳಿಗಳನ್ನು ಸಾಕುತ್ತಿದ್ದೇನೆ : ಎಚ್ಡಿಕೆ
ಧೂಪ-ದೀಪ: ಹಿಂದೂ-ಮುಸ್ಲಿಂ ಎನ್ನದೆ ಗೋರಿ ಬಳಿ ದೂಪ ಹಾಕಿ, ತುಪ್ಪದ ದೀಪ ಹಚ್ಚಿ ಹರಕೆ ತೀರಿಸುವುದು ಇಲ್ಲಿನ ವಾಡಿಕೆ, ಜರಬ್ ಸಾಹಸ ಪ್ರದರ್ಶನವಿರಲಿದೆ.
ಕಾರ್ಯಕ್ರಮ ವಿವರ: ಮಾ.18ರ ಶುಕ್ರವಾರ ಮುಂಜಾನೆ 5ರಿಂದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹೋಮ, ಹವನ, ಮಹಾಭಿಷೇಕ. ಮಾ 19.ಶನಿವಾರ, ಬೆಳಿಗ್ಗೆ 6ಕ್ಕೆ ಅಂಜನೇಯಸ್ವಾಮಿಗೆ ಮಹಾಮಂಗಳಾರತಿ, ಮದ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ವಿವಿಧ ಕಲಾ ತಂಡದೊಂದಿಗೆ ಅಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ, ಮಾ.20 .ಬಾನುವಾರ ರಾತ್ರಿ 7ಕ್ಕೆ ಜಮಾಲ್ ಬೀಬೀ ಮಾಸಾಹೇಬರ ಗಂಧೋತ್ಸವ ಹಾಗೂ ರಾತ್ರಿ 8 ಕ್ಕೆ ನಟ ದಿ.ಪುನೀತ್ರಾಜ್ಕುಮಾರ್ರಿಗೆ ನಮನ-ರಸಮಂಜರಿ ಮಾ.21 ಸೋಮವಾರ ಉತ್ತಮರಾಸುಗಳಿಗೆ ಎ.ಪಿ.ಎಂ.ಸಿವತಿಯಿಂದ ಬಹುಮಾನ ವಿತರಣೆ.
ಕ್ರೀಡಾ ಸ್ಪರ್ಧೆಗಳು;
ಸಮಿತಿವತಿಯಿಂದ ಫೆ.18 ಶುಕ್ರವಾರದಂದು ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ರಾಜ್ಯಮಟ್ಟದ ಹಗ್ಗಜಗ್ಗಾಟ ಆಯೋಜಿಸಿದೆ. 9 ಮಂದಿಯ ತಂಡದೊಂದಿಗೆ ಸಾವಿರರೂ ನೀಡಿ ಮಾ.18 ರ ಬೆಳಗ್ಗೆ10ರೊಳಗೆ ನೊಂದಾಯಿಸಿಕೊಳ್ಳಬೇಕು, ವಿಜೇತರಿಗೆ ಪ್ರಥಮ 20ಸಾವಿರ, ದ್ವಿತೀಯ 10 ಸಾವಿರ, ತೃತೀಯ 5 ಸಾವಿರರೂ ಬಹುಮಾನದ ಜೊತೆಗೆ ಟ್ರೋಫಿ ಹಾಗೂ 3 ಸಾವಿರ ಸಮಾದಾನಕರ ಬಹುಮಾನವಿರಲಿದೆ. ಮಹಿಳೆಯರ ಸ್ಪರ್ಧೆಗೆ ನೋಂದಣಿ ಶುಲ್ಕವಿಲ್ಲ, ಪ್ರಥಮ 10 ಸಾವಿರ, ದ್ವೀತೀಯ 5 ಸಾವಿರ ಬಹುಮಾನ ಹಾಗೂ ಟ್ರೋಫಿ, ಫೆ. 19 ರ ಶನಿವಾರ ಹಗ್ಗ-ಜಗ್ಗಾಟದ ಸೆಮಿಫೈನಲ್, ಅಂತಿಮ ಪಂದ್ಯ ನಡೆಯಲಿದೆ. ಆನಂತರ ಚಿತ್ರನಟರಿಗೆ ಸನ್ಮಾನ. ಹಗ್ಗಜಗ್ಗಾಟದ ಸಮಿಪೈನಲ್,ಫೈನಲ್ ಪಂದ್ಯ ನಡೆಯುತ್ತದೆ ಎಂದು ಜಾತ್ರಾಸಮಿತಿ ಅಧ್ಯಕ್ಷ ಪ್ರಭಾಕರ್ ಮತ್ತು ಕಾರ್ಯದರ್ಶಿ ರಾಜು ತಿಳಿಸಿದ್ದಾರೆ.