ಗಣರಾಜ್ಯೋತ್ಸವಕ್ಕೆ ಅತಿಥಿ ಆಯ್ಕೆ ಹೇಗೆ? ಇಲ್ಲಿದೆ ಮಾಹಿತಿ…
Team Udayavani, Nov 30, 2022, 8:15 AM IST
2023ರ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಅತಿಥಿಯಾಗಿ ಈಜಿಪ್ಟ್ ನ ಅಧ್ಯಕ್ಷ ಅದ್ದೇಹ್ ಫತೇಹ್ ಅಲ್-ಸಿಸಿ ಅವರನ್ನು ಆಹ್ವಾನಿಸಲಾಗಿದ್ದು, ಅವರೂ ಬರಲು ಒಪ್ಪಿದ್ದಾರೆ. ಹಾಗಾದರೆ, ಗಣರಾಜ್ಯೋತ್ಸವಕ್ಕೆ ಹೇಗೆ ಅತಿಥಿಗಳನ್ನು ಆಯ್ಕೆ ಮಾಡಲಾಗುತ್ತದೆ? ಮಾನದಂಡಗಳೇನು? ಇಲ್ಲಿದೆ ಮಾಹಿತಿ…
ಯಾರಿವರು ಅಲ್-ಸಿಸಿ?
ಗಣರಾಜ್ಯೋತ್ಸವಕ್ಕೆ ಆಗಮಿಸುತ್ತಿರುವ ಮೊದಲ ಈಜಿಪ್ಟ್ ನಾಯಕ ಇವರು. 2013ರಲ್ಲಿ ಮೊಹಮ್ಮದ್ ಮೋರ್ಸಿ ಅವರನ್ನು ಮಿಲಿಟರಿ ದಂಗೆ ಮೂಲಕ ಕೆಳಗಿಳಿಸಿ ಅಧ್ಯಕ್ಷರಾಗಿ ಆಯ್ಕೆಯಾದವರು ಅದ್ದೇಹ್ ಫತೇಹ್ ಅಲ್-ಸಿಸಿ. 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ಇವರ ಪಕ್ಷ ಗೆಲುವು ಸಾಧಿಸಿ ಅಧಿಕಾರವನ್ನು ಉಳಿಸಿಕೊಂಡಿತು. ಸದ್ಯ ಈಜಿಪ್ಟ್ನಲ್ಲಿ ಆರ್ಥಿಕ ಸಂಕಷ್ಟವೇರ್ಪಟ್ಟಿದ್ದು, ವಿಪಕ್ಷಗಳ ಧ್ವನಿಯನ್ನು ಅಡಗಿಸಲಾಗಿದೆ ಎಂಬ ಧ್ವನಿ ಕೇಳಿಬಂದಿದೆ.
ಗಣರಾಜ್ಯೋತ್ಸವ ಅತಿಥಿ, ಏನಿದರ ಮಹತ್ವ?
ಗಣರಾಜ್ಯೋತ್ಸವ ಭಾರತದಲ್ಲಿ ನಡೆಯುವ ಅತ್ಯುನ್ನತ ಸಮಾರಂಭವಾಗಿದ್ದು, ಇದರಲ್ಲಿ ಭಾಗಿಯಾಗುವ ವಿದೇಶಿ ಅತಿಥಿಗೆ ಅಷ್ಟೇ ಅತ್ಯುನ್ನತ ಗೌರವ ನೀಡಲಾಗುತ್ತದೆ. ಪ್ರೊಟೋ ಕಾಲ್ ವಿಚಾರದಲ್ಲಿಯೂ ವಿದೇಶಿ ಅತಿಥಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತದೆ. ಅಲ್ಲದೆ, ಇವರ ಮುಂದೆಯೇ ಗಣರಾಜ್ಯೋತ್ಸವ ಸಮಾರಂಭ ನಡೆಯುತ್ತದೆ.
ಅತಿಥಿಗಳನ್ನು ಆರಿಸುವುದು ಹೇಗೆ?
ಗಣರಾಜ್ಯೋತ್ಸವಕ್ಕೆ ಆರು ತಿಂಗಳು ಮೊದಲೇ ಈ ಪ್ರಕ್ರಿಯೆ ಆರಂಭವಾಗುತ್ತದೆ. ಮೊದಲಿಗೆ ಯಾವ ದೇಶದ ನಾಯಕರಿಗೆ ಆಹ್ವಾನ ನೀಡುವುದು ಎಂಬ ಬಗ್ಗೆ ವಿದೇಶಾಂಗ ಇಲಾಖೆಯಲ್ಲಿ ಚರ್ಚೆಯಾಗುತ್ತದೆ. ಹಾಗೆಯೇ ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಿರುವ, ರಾಜಕೀಯ, ಆರ್ಥಿಕ, ವಾಣಿಜ್ಯ, ಮಿಲಿಟರಿ ಕ್ಷೇತ್ರಗಳಲ್ಲಿ ಉತ್ತಮ ಸಂಬಂಧವಿರಿಸಿಕೊಂಡಿರುವ ನಾಯಕರನ್ನೇ ಆರಿಸಲಾಗುತ್ತದೆ. ಈ ಮೂಲಕವೇ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸಲು ಈ ಮೂಲಕ ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಯಾವುದೇ ಅತಿಥಿ ಸಿಗದಿದ್ದರೆ ಪ್ರಧಾನಿ ಮತ್ತು ರಾಷ್ಟ್ರಪತಿಯವರ ಸಲಹೆ ಕೇಳಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.