ಇಂದು ವಿಶ್ವ ಏಡ್ಸ್ ದಿನಾಚರಣೆ; ದ.ಕ. ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ಪ್ರಮಾಣ ಗಣನೀಯ ಇಳಿಮುಖ
Team Udayavani, Dec 1, 2022, 11:50 AM IST
ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಎಚ್ಐವಿ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆ.
ಎಚ್ಐವಿ ಸೋಂಕಿನ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯಿಂದ ತಿಳಿವಳಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಗಣನೀಯ ಇಳಿಮುಖಕಂಡಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶದ ಪ್ರಕಾರ ಕಳೆದ 10 ವರ್ಷದ ಹಿಂದೆ ಶೇ.1.48 ರಷ್ಟಿದ್ದ ಸಾಮಾನ್ಯ ಸೋಂಕಿತರ ಪ್ರಮಾಣ ಶೇ.0.45ಕ್ಕೆ ಇಳಿಕೆಯಾಗಿದೆ. ಅದೇ ರೀತಿ, ಶೇ.0.10ರಷ್ಟಿದ್ದ ಗರ್ಭಿಣಿಯರಲ್ಲಿ ಸೋಂಕಿನ ಪ್ರಮಾಣ ಶೇ.0.02ಗೆ ಇಳಿಮುಖಗೊಂಡಿದೆ.
ಸೋಂಕಿಗೆ ಕಾರಣ? ತಡೆಗಟ್ಟುವಿಕೆ
ಸೋಂಕಿತ ವ್ಯಕ್ತಿಯ ಜತೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿದಾಗ ಎಚ್ ಐವಿ ಸೋಂಕು ಹರಡುತ್ತದೆ. ಪರೀಕ್ಷೆ ಮಾಡದ ರಕ್ತ ಪಡೆಯುವುದರಿಂದ ಹರಡುವ ಸಾಧ್ಯತೆ ಹೆಚ್ಚಿದೆ. ಎಚ್ಐವಿ ಸೋಂಕಿನ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲಿನ ಮೂಲಕವೂ ಹರಡುವ ಸಾಧ್ಯತೆ ಇದೆ. ಎಚ್ಐವಿ ಸೋಂಕಿನ ಸಿರೆಂಜ್ಗಳನ್ನು ಸಂಸ್ಕರಿಸದೆ ಬಳಸುವುದರಿಂದ ಹರಡುವ ಪ್ರಮಾಣ ಹೆಚ್ಚು.
ಎಚ್ಐವಿ ಸೋಂಕಿನ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವುದು, ಅಪಾಯ ಕಾರಿ ನಡವಳಿಕೆಯಿಂದ ದೂರ ಇರು ವುದು, ಎಚ್ಐವಿ ಸೋಂಕಿತರೆಂದು ತಿಳಿದ ಕೂಡಲೇ ಕಡ್ಡಾಯವಾಗಿ ಎಆರ್ಟಿ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಈ ಸೋಂಕು ಹರಡುವುದನ್ನು ತಡೆಯಬಹುದು.
ಆತ್ಮ ಸ್ಥೈರ್ಯ ತುಂಬಬೇಕು
ಎಚ್ಐವಿ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವುದು ಅತ್ಯಗತ್ಯ. ಎಚ್ಐವಿ/ ಏಡ್ಸ್ ಬಗ್ಗೆ ತಪ್ಪು ಕಲ್ಪನೆಗಳಿದ್ದು, ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಎಚ್ಐವಿ ಸೋಂಕಿತರಿರೊಂದಿಗೆ ಸಮಾಲೋಚನೆ ನಡೆಸಿ ಎಆರ್ಟಿ ಚಿಕಿತ್ಸೆ ನೀಡಬೇಕು. ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿ. 1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ’ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಅರಿವು ಮುಖ್ಯ: ಎಚ್ಐವಿ/ ಏಡ್ಸ್ ನಿಯಂತ್ರಿಸಲು ಈ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಎಚ್ಐವಿ ಸೋಂಕು ಇಳಿಮುಖಗೊಳ್ಳುತ್ತಿದೆ. ಎಚ್ಐವಿ ಸೋಂಕಿತರಿಗೆ ಕಳಂಕ, ತಾರತಮ್ಯ ಮಾಡದಿರುವುದು ಕೂಡ ಮುಖ್ಯ. – ಡಾ| ಬದ್ರುದ್ದಿನ್ ಎಂ.ಎನ್., ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು