ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಕಾರು ನೋಂದಣಿ: ದೂರು ದಾಖಲು
Team Udayavani, Jan 20, 2023, 5:40 AM IST
ಮಂಗಳೂರು: ರಾಜೇಶ್ ಕುಮಾರ್ ಶೆಟ್ಟಿ ಮೋಸದಿಂದ 24 ಲ.ರೂ. ಮೌಲ್ಯದ ಕಾರನ್ನು ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ದರ್ಶನ್ ರೈ ಅವರು ದೂರು ನೀಡಿದ್ದಾರೆ. ದರ್ಶನ್ ರೈ ಅವರ ತಂದೆಯ ಹಿರಿಯ ಸಹೋದರಿ ಗೀತಾ ಟಿ. ಪೂಂಜಾ ಮತ್ತು ಅವರ ಪತಿ ಪಿ. ತಿಮ್ಮಪ್ಪ ಪೂಂಜಾ ಮೃತಪಟ್ಟಿದ್ದಾರೆ. ಈ ದಂಪತಿಗೆ ಮಕ್ಕಳಿರಲಿಲ್ಲ. ತಿಮ್ಮಪ್ಪ ಪೂಂಜಾ ಅವರು ಜೀವಂತವಿದ್ದಾಗ ಮಾಡಿಸಿದ ವೀಲುನಾಮೆ ಪ್ರಕಾರ ಅವರ ಮಾಲಕತ್ವದ 24 ಲ.ರೂ. ಮೌಲ್ಯದ ಸ್ಕೋಡಾ ಕಾರು ವೀಣಾ ಕೆ. ರೈ ಮತ್ತು ಆಶಾಜ್ಯೋತಿ ರೈ ಅವರಿಗೆ ಸೇರಬೇಕಾಗಿತ್ತು. ಆದರೆ ರಾಜೇಶ್ ಕುಮಾರ್ ಶೆಟ್ಟಿ ಎನ್ನುವಾತ ತಿಮ್ಮಪ್ಪ ಪೂಂಜಾ ಅವರ ನಕಲಿ ಸಹಿ ಸೃಷ್ಟಿಸಿ ಸುಳ್ಳು ದಾಖಲಾತಿಗಳನ್ನು ಮಂಗಳೂರು ಆರ್ಟಿಒ ಕಚೇರಿಗೆ ಸಲ್ಲಿಸಿ ಅವರ ಮಾಲಕತ್ವದ 24 ಲ.ರೂ. ಮೌಲ್ಯದ ಸ್ಕೋಡಾ ಕಾರನ್ನು ಮೋಸದಿಂದ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿದೆ.