Davanagere; ವೃದ್ಧಾಪ್ಯ ವೇತನಪತ್ರ ನೀಡಿ ಜನಸಂಪರ್ಕ ಕಚೇರಿ ಉದ್ಘಾಟನೆ
ಹಾರ, ತುರಾಯಿ ಸಂಸ್ಕೃತಿಗೆ ತದ್ವಿರುದ್ಧ ಎನ್ನುವಂತೆ ಶಾಸಕ ಬಸವರಾಜ ಶಿವಗಂಗಾ ನಡೆ
Team Udayavani, Aug 24, 2023, 8:46 PM IST
ದಾವಣಗೆರೆ: ಚನ್ನಗಿರಿ ಶಾಸಕ ಬಸವರಾಜ್ ವಿ.ಶಿವಗಂಗಾ ಗುರುವಾರ ವೃದ್ಧಾಪ್ಯ ವೇತನಪತ್ರ ನೀಡುವ ಜನಸಂಪರ್ಕ ಕಚೇರಿ ಉದ್ಘಾಟಿಸುವ ಮೂಲಕ ವಿಶೇಷ ಗಮನ ಸೆಳೆದರು.
ಶಾಸಕರ ಜನಸಂಪರ್ಕ ಕಚೇರಿ ಉದ್ಘಾಟನೆ ಎಂದರೆ ಭರ್ಜರಿ ಕಾರ್ಯಕ್ರಮ, ಹಾರ, ತುರಾಯಿಯದ್ದೇ ಕಾರು ಬಾರು ಎನ್ನುವುದು ಸಾಮಾನ್ಯ. ಅದಕ್ಕೆ ತದ್ವಿರುದ್ಧ ಎನ್ನುವಂತೆ ಬಸವರಾಜ ಶಿವಗಂಗಾ ಚನ್ನಗಿರಿಯ ಆಡಳಿತ ಸೌಧದಲ್ಲಿ ವೃದ್ಧಾಪ್ಯ ವೇತನ ಪತ್ರ ವಿತರಿಸುವ ಮೂಲಕ ತಮ್ಮ ಜನಸಂಪರ್ಕ ಕಚೇರಿ ಉದ್ಘಾಟಿಸಿದ್ದು ವಿಶೇಷ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿರಿಯರು ಹಾಗೂ ತಂದೆತಾಯಿಗಳಿಗೆ ನಾವು ಗೌರವ ನೀಡಬೇಕು, ಸಂಧ್ಯಾಕಾಲದಲ್ಲಿ ಹಿರಿಯರನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಚನ್ನಗಿರಿ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ನಾನು ಹುಟ್ಟಿದ ಈ ಕ್ಷೇತ್ರ ಮಣ್ಣಿನ ಋಣ ತೀರಿಸುವೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ನಿಮ್ಮ ಸೇವೆ ಜೊತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದರು.
ತಾಲೂಕು ಕಚೇರಿ ಸೇರಿದಂತೆ ಎಲ್ಲಾ ಕಚೇರಿಯಲ್ಲೂ ಸಹ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗುವುದು. ಪಾರ ದರ್ಶಕವಾಗಿ ಎಲ್ಲಾ ಅಧಿಕಾರಿಗಳು ಸಹ ಕೆಲಸ ಮಾಡಬೇಕು. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಎಲ್ಲಿಯೇ ಆಗಲಿ ಕರ್ತವ್ಯಲೋಪ ಕಂಡು ಬಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.