Kushtagi: ದುಷ್ಕರ್ಮಿಗಳಿಂದ ವ್ಯಕ್ತಿಯ ಹತ್ಯೆ
Team Udayavani, Dec 10, 2023, 1:55 PM IST
ದೋಟಿಹಾಳ ( ಕುಷ್ಟಗಿ): ದುಷ್ಕರ್ಮಿಗಳು ಓರ್ವನನ್ನು ಹತ್ಯೆಗೈದು ಪರಾರಿಯಾದ ಘಟನೆ ಸಮೀಪದ ರಾಷ್ಟೀಯ 50 ಹೆದ್ದಾರಿಯ ಪಕ್ಕದ ಜಮೀನಿನಲ್ಲಿ ನಡೆದಿದೆ.
ಇಲಕಲ್ಲ ಮೂಲದ ಭೀಮರಾವ ಸುರೇಶ ಮಬ್ರುಂಕರ (32) ಕೊಲೆಯಾದ ವ್ಯಕ್ತಿಯಾಗಿದ್ದು, ಈತ ಸ್ವಂತ ಆಟೋ ಓಡಿಸುತ್ತಿದ್ದನು ಎಂದು ತಿಳಿದು ಬಂದಿದೆ.
ಸಮೀಪದ ರಾಷ್ಟೀಯ 50ಹೆದ್ದಾರಿಯ ಪಕ್ಕದಲ್ಲಿ ಶುಕ್ರವಾರ ರಾತ್ರಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಮುದ್ದುರಂಗಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೀಮರಾವ ಸುರೇಶ ಶುಕ್ರವಾರ ರಾತ್ರಿ ಇಲಕಲ್ ನಗರದಿಂದ ಬಾಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಶನಿವಾರ ಮಧ್ಯಾಹ್ನದವರೆಗೂ ಮನೆಗೆ ಬಂದಿರಲಿಲ್ಲ. ಕುಷ್ಟಗಿ ಕಡೆಯಿಂದ ಇಲಕಲ್ಲ ಬರುವ ಪರಿಚಯಸ್ಥರೊಬ್ಬರು ಭೀಮರಾವ ಸುರೇಶ ಅವರ ಮನೆಗೆ ಕರೆ ಮಾಡಿ ನಿಮ್ಮ ಆಟೋ ಇಲ್ಲಿ ನಿಂತಿದೆ ಎಂದು ಮಾಹಿತಿ ತಿಳಿಸಿದರು. ಆ ಕ್ಷಣ ಮನೆಯವರು ಆ ಸ್ಥಳಕ್ಕೆ ಹೋಗಿದ್ದು, ಆಗಲೇ ಭೀಮರಾವ ಸುರೇಶ ಕೊಲೆಯಾಗಿದ್ದು ಗೊತ್ತಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.