Ayodhya: ಬಾಲರಾಮ ಪ್ರಾಣಪ್ರತಿಷ್ಠೆ ಪ್ರಕ್ರಿಯೆ ವಿಧ್ಯುಕ್ತ ಆರಂಭ
ಮೊದಲ ದಿನ ಆಗ್ರಾದ 56 ವಿಶೇಷ ರೀತಿಯ ಸಿಹಿ ಸಮರ್ಪಣೆ- 11 ಮಂದಿ ಪುರೋಹಿತರಿಂದ ಧಾರ್ಮಿಕ ವಿಧಿ ವಿಧಾನಗಳು
Team Udayavani, Jan 17, 2024, 2:04 AM IST
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಐದು ದಿನಗಳು ಇರು ವಂತೆಯೇ ಮಂಗಳವಾರ ಪ್ರಾಣಪ್ರತಿಷ್ಠೆಗೆ ಪೂರ್ವ ಭಾವಿಯಾಗಿರುವ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಎಲ್ಲ ದೇವ ದೇವತೆಗಳನ್ನು ಮೈಸೂರಿನ ಅರುಣ್ ಯೋಗಿರಾಜ್ ವಿಶೇಷವಾಗಿ ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿಗೆ ಆವಾಹನೆ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯರಲ್ಲಿ ಒಬ್ಬರಾಗಿರುವ ಅನಿಲ್ ಮಿಶ್ರಾ ಮತ್ತು ಅವರ ಪತ್ನಿ ಉಷಾ ಮಿಶ್ರಾ ಕುಟುಂಬದ ಯಜಮಾನರ ಸ್ಥಾನದಲ್ಲಿ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದಾರೆ ಎಂದು ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಅನುಷ್ಠಾನ ಪ್ರಕ್ರಿಯೆಗಳು ಮಂಗಳವಾರ ಆರಂಭವಾಗಿದ್ದು, ಜ. 22ರ ವರೆಗೆ ಮುಂದುವರಿಯಲಿವೆ. 11 ಮಂದಿ ಪುರೋಹಿತರು ಪ್ರಾಣ ಪ್ರತಿಷ್ಠೆಯ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ’ ಎಂದರು.
ಇಂದಿನ ಕಾರ್ಯಕ್ರಮ ಏನು?
ಬಾಲರಾಮನ ಹೊಸ ಮೂರ್ತಿಯನ್ನು ಅಯೋಧ್ಯೆಯ ಮಂದಿರ ಆವರಣದಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಯಜಮಾನ ಸ್ಥಾನದಲ್ಲಿ ಮಿಶ್ರಾ
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್ನ ಸದಸ್ಯರಲ್ಲಿ ಒಬ್ಬರಾಗಿರುವ ಅನಿಲ್ ಮಿಶ್ರಾ ಕೂಡ ಪ್ರತಿಕ್ರಿಯೆ ನೀಡಿ ತಾವು ಯಜಮಾನನ ಸ್ಥಾನದಲ್ಲಿದ್ದು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಮೊದಲು ಪ್ರಧಾನಿ ನರೇಂದ್ರ ಮೋದಿಯವರೇ ಕುಟುಂಬದ ಯಜಮಾನನ ನೇತೃತ್ವ ವಹಿಸಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ ಎಂಬ ಬಗ್ಗೆ ವರದಿಗಳು ಇದ್ದವು.
ಟ್ರಸ್ಟ್ ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ ಬಾಲರಾಮನ ವಿಗ್ರಹಗಳನ್ನು ಏಳು ಅಧಿ ವಾಸ ಪ್ರಕ್ರಿಯೆಗಳಿಗೆ ಒಳಪಡಿಸಲಾಗುತ್ತದೆ. ಅಂದರೆ ಬಾಲರಾಮನ ವಿಗ್ರಹವನ್ನು ಒಂದೊಂದು ರಾತ್ರಿ ಒಂದೊಂದು ದ್ರವ್ಯದಲ್ಲಿ ಮುಳುಗಿಸಿ ಇರಿಸಲಾಗುತ್ತದೆ. ಜ. 21ರಂದು ಶಯ್ನಾಧಿವಾಸ ವಿರುತ್ತದೆ.
121 ಮಂದಿ ಹಿರಿಯ ವಿದ್ವಾಂಸ, ಕಾಶಿಯ ವಿಶ್ವನಾಥ ದೇಗುಲದ ಹಿರಿಯ ಅರ್ಚಕ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅವರ ನೇತೃತ್ವದಲ್ಲಿ 121 ಮಂದಿ ವೈದಿಕ ವಿದ್ವಾಂಸರು ವಿವಿಧ ರೀತಿಯ ಧಾರ್ಮಿಕ ಕ್ರಿಯಾಭಾಗಗಳನ್ನು ನಡೆಸಿಕೊಡುತ್ತಿದ್ದಾರೆ.
ಜ. 22ರಂದು ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ 8 ಸಾವಿರ ಮಂದಿ ವಿಶೇಷ ಆಹ್ವಾನಿತ ಅತಿಥಿಗಳು ಭಾಗವಹಿಸಲಿದ್ದಾರೆ. ಅವರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಸಾಧ್ಯತೆಗಳಿವೆ. ಮಂದಿರ ಉದ್ಘಾಟನೆ ದಿನ ಪ್ರಧಾನಿ ನರೇಂದ್ರ ಮೋದಿ ಸೇರಿ ಕೇವಲ ಐವರಿಗೆ ಮಾತ್ರ ಗರ್ಭಗುಡಿಯ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.