UV Fusion: ನೋಡಬನ್ನಿ ಹೂ ತುಂಬಿದ ಮಾಗೋಡು ಜಾತ್ರೆಯನ್ನ
Team Udayavani, Mar 13, 2024, 2:59 PM IST
ಕಂಬದ ರಂಗನ ಹೂವಿನ ರಥೋತ್ಸವ ರಾಜ್ಯದಲ್ಲೇ ಪ್ರಸಿದ್ಧ. ಮಾಗೋಡು ಸಿರಾ ತಾಲೂಕಿನ ಒಂದು ಪುಟ್ಟ ಗ್ರಾಮ. ಮಾಗೋಡು ಕಂಬದ ರಂಗನಾಥ ಎಂದರೆ ಅದೊಂದು ಇಷ್ಟಾರ್ಥದ, ಬೇಕಾದ ಅನುಕೂಲಗಳನ್ನೆಲ್ಲಾ ಅನುಗ್ರಹಿಸುವ ದೇವರು ಎಂದು ನಂಬಿಕೊಂಡು ಬರಲಾಗಿದೆ.
ಈ ರಂಗನಾಥ ಕಂಬದಲ್ಲಿ ಒಡಮೂಡಿದ ಕಾರಣಗಳಿಂದ ಕಂಬದರಂಗ, ಕಂಬದಯ್ಯ,ಕಂಬದ ರಂಗಣ್ಣ, ಕಂಬದ ರಂಗನಾಥ ಎಂದೆಲ್ಲಾ ಕರೆದು ಆರಾಧಿಸುವುದು ಇಲ್ಲಿನ ವಾಡಿಕೆ. ಈ ದೈವಕ್ಕೆ ಹೂವೇ ಸರ್ವಸ್ವ. ಲಾರಿಗಟ್ಟಲೆ ಹೂವಿನ ಹಾರವನ್ನು ಶ್ರೀ ರಂಗನಾಥನ ತೇರಿಗೆ ಹಾಕುವುದು ವಾಡಿಕೆ ಮಾತ್ರವಲ್ಲ, ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹರಕೆಯ ರೂಪದಲ್ಲಿ ಹೂವನ್ನು ಅರ್ಪಿಸುವುದು ಸಂಪ್ರದಾಯ.
ಜನಪದದಲ್ಲೂ ಉಲ್ಲೇಖ
ಕಂಬದ ರಂಗನನ್ನು ಕುರಿತು ಒಂದು ರಾತ್ರಿ ಪೂರಾ ಹಾಡಬಲ್ಲ ಜನಪದ ಕಾವ್ಯವೊಂದು ಕಾಡುಗೊಲ್ಲರ ಪರಂಪರೆಯಲ್ಲಿ ಬಳಕೆಯಲ್ಲಿದೆ. ಗಾಣೆಯನ್ನು ಊದಿಕೊಂಡು ಕಂಬದ ರಂಗನ ಪುರಾಣವನ್ನು ಭಯಭಕ್ತಿಯಿಂದ ಹಾಡಲಾಗುತ್ತದೆ. ರಂಗನಾಥನ ಒಕ್ಕಲುಗಳು ರಂಗನಾಥನ ಕತೆಸೂಚಿಸುವ ಸಂಪ್ರದಾಯವೂ ಇದೆ. ಈ ಕಾವ್ಯದ ಪ್ರಕಾರ ಶ್ರೀ ಹರಿಯೇ ರಂಗನಾಥ. ಹಲವು ಅವತಾರ, ಸ್ಥಿತ್ಯಂತರಗಳಲ್ಲಿ ರಂಗನಾಥ ಪಶ್ಚಿಮದಿಂದ ಮಾಗೋಡುಗೆ ಬಂದನೆಂದೂ, ಹಲವು ಪವಾಡಗಳ ಮೂಲಕ ಮಾಗೋಡಿನ ದಿಣ್ಣೆಯಲ್ಲಿ ನೆಲೆಸಿ, ನಂತರ ಕಾಡುಗೊಲ್ಲರ ಹಟ್ಟಿಗೆ ಸ್ಥಳಾಂತರಗೊಂಡಿದ್ದಾನೆ ಎಂದು ಕಥೆ ತಿಳಿಸುತ್ತದೆ.
ಮಾಗೋಡು ಕಂಬದ ರಂಗನಾಥನ ಮೂಲ ನೆಲೆ ಹಿರಿಯೂರು ತಾಲ್ಲೂಕಿನ ಬಬ್ಬೂರು. ಶ್ರೀ ಹರಿ ನಿದ್ರಾವಸ್ಥೆಯಲ್ಲಿ ಬಬ್ಬೂರಿನ ಚಿಟ್ಟಾಲದ ಮರದ ಮೇಲೆ ಸುಖನಿದ್ರೆ ಮಾಡುವಾಗ ಸಿಡಿಲು ಬಡಿಯುತ್ತದೆ. ಆಗ ಶ್ರೀ ಹರಿ ಉಕ್ಕಿನಪಾಳಿನ ರೂಪವಾಗಿ ಭೂಮಿಯನ್ನ ಸೇರುತ್ತಾನೆ. ಬಹಳ ವರ್ಷ ಕಾಲ ಭೂತಳದಲ್ಲಿದ್ದ ಶ್ರೀ ಹರಿ ಭೂಮಿಯಿಂದ ಹೊರಗೆ ಬರಲು ಸಂಕಲ್ಪಿಸುತ್ತಾನೆ. ಈ ಜಮೀನಿನ ಒಡೆಯ ಬಬ್ಬೂರ ಗೌಡನ ಸೋದರರು, ಏಳು ಜತೆ ನೇಗಿಲು ಹೂಡಿ ಹೊಲ ಉಳುವಾಗ, ಮೂರು ಸುತ್ತಿಗೆ ಆ ಉಳುವ ಹೋರಿಗಳು, ಹೊಲ ಉಳುತ್ತಿದ್ದ ಏಳು ಜನ ಗೌಡನ ತಮ್ಮಂದಿರು ಮೂರ್ಛೆ ಹೋಗುತ್ತಾರೆ.
ಬೇಸಾಯ ಮಾಡುತ್ತಿದ್ದ ತಮ್ಮ ಗಂಡಂದಿರಿಗೆ ಊಟ ತಂದ ಹೆಂಗಸರು ಮೂರ್ಛೆ ಹೋಗಿರುವ ಗಂಡಸರು ಮತ್ತು ಹೋರಿಗಳ ಸ್ಥಿತಿಯನ್ನು ಕಂಡು ಗಾಬರಿಯಾಗುತ್ತಾರೆ. ಅರಿವಾಗದೆ ಓಡೋಡಿ ಊರು ಸೇರುತ್ತಾರೆ.ಈ ವಿಚಾರವು ಹಿರಿಯ ಗೌಡನಿಗೆ ಸಂಗತಿ ತಿಳಿದು, ಗ್ರಾಮಸ್ಥರು ಪರಿಸ್ಥಿತಿ ಕಂಡು ಕಂಗಾಲಾಗುತ್ತಾನೆ.
ಒಮ್ಮೆಗೆ ಏಳು ಜನರೂ, ಹದಿನಾಲ್ಕು ಹೋರಿಗಳು ಮರಣ ಹೊಂದಿರುವುದು ಆಶ್ಚರ್ಯಕರವಾಗಿ ಕಂಡುಬರುತ್ತದೆ. ಇದೊಂದು ದೈವ ಪ್ರೇರಣೆ ಅಥವಾ ಪ್ರೇತ ಚೇಷ್ಟೆ ಇರಬೇಕೆಂದು ಭಾವಿಸುತ್ತಾರೆ.
ನನ್ನ ಬಸವಣ್ಣನ ರೂಪದ ಹೋರಿಗಳು ಸಾಯಲು ಕಾರಣವೇನಪ್ಪ? ನನ್ನಿಂದ ಅಪರಾಧವಾಗಿದ್ದರೆ ತಪ್ಪುಕಾಣಿಕೆ ಒಪ್ಪಿಸುತ್ತೇನೆ. ನನ್ನ ತಮ್ಮಂದಿರಿಗೆ ಜೀವದಾನ ಮಾಡು ದೇವ ಎಂದು ಪ್ರಾರ್ಥಿಸುತ್ತಾನೆ. ಆಗ ಅದೇ ಆಲದ ಮರದಿಂದ ಅಶರೀರವಾಣಿಯೊಂದು ನುಡಿಯುತ್ತದೆ. ನಿನ್ನ ಈ ಎರೆ ಹೊಲದಲ್ಲಿ ಶ್ರೀ ಹರಿ ಬರಸಿಡಿಲಿಗೆ ಸಿಕ್ಕಿ ಉಕ್ಕಿನ ಪಾಲಾಗಿ ಭೂಮಿ ಸೇರಿದ್ದಾನೆ. ಈಗ ನಿನ್ನ ಹೋರಿಗಳಾದ ದೊಡ್ಡಬೆಳ್ಳಿ, ಚಿಕ್ಕಬೆಳ್ಳಿಯರ ಮುಂದಿನ ನೇಗಿಲ ಕುಳಕ್ಕೆ ಉಕ್ಕಿನ ಪಾಳು ಸಿಕ್ಕಿದೆ. ಈಗ ಸ್ವಾಮಿ ಭೂಮಿಯಿಂದ ಹೊರಗೆ ಬಂದು ಲೋಕೋದ್ಧಾರ ಮಾಡಬೇಕಿದೆ.
ಆದ್ದರಿಂದ ಭೂಮಿಯ ಒಳಗೆ ಸೇರಿರುವ ಉಕ್ಕಿನ ಪಾಳನ್ನು ತೆಗೆಸಿ ಅದರಿಂದ ಗರುಡುಗಂಬ ಮಾಡಿಸಿ,ಮಡಿದ ನಿನ್ನ ಸೋದರರೆಲ್ಲರನ್ನೂ ಶ್ರೀ ಹರಿಯು ಬದುಕಿಸುತ್ತಾನೆ ಎಂದು ನುಡಿಯುತ್ತದೆ. ಕೆಲವೊಂದು ಶಾಸ್ತ್ರ ಸಂಪ್ರದಾಯವನ್ನು ಗೌಡ ಮಾಡಿದಾಗ ಗೌಡರ ತಮ್ಮಂದಿರು ಮರುಜೀವ ಪಡೆಯುತ್ತಾರೆ. ಹೀಗೆ ರಂಗನಾಥ ದೇವರನ್ನು ಆರಾಧಿಸಿಕೊಂಡು ಅಲ್ಲಿನ ಸಂಪ್ರದಾಯ ಪಾಲಿಸುತ್ತಾ ಜನರು ಬಂದಿದ್ದಾರೆ.
ಹೂವಿನ ಅರ್ಪಣೆ:
ಮಾಗೋಡು ರಂಗನ ಸಂಪ್ರದಾಯ ಹಲವು ಚಾರಿತ್ರಿಕ ಅಧ್ಯಯನದ ಮಾದರಿಯೂ ಆಗಿದೆ, ರಂಗನಾಥನಿಗೆ ಹರಕೆ ಹೂವಿನ ರೂಪದಲ್ಲಿ ಭಾವರೂಪ ಪಡೆದಿರುವುದು ಮತ್ತೂಂದು ವಿಶೇಷ. ರಂಗನಾಥನಿಗೆ ಪ್ರಿಯವಾದದ್ದು ಭಕ್ತರ ಅರ್ಪಣೆ, ಕನಕ, ಧನಧಾನ್ಯಗಳಿಗಿಂತ ಹೂವೇ ಹೆಚ್ಚು.ಪ್ರತಿವರ್ಷ ಮಾಘ ಮಾಸ ತಿಂಗಳಲ್ಲಿ ಒಂದು ವಾರದ ಕಾಲ ಬೃಹತ್ ಜಾತ್ರೆ ನಡೆಯುತ್ತದೆ. ಜಲಧಿ, ಆ ನಂತರ ನಡೆಯುವ ಬೃಹತ್ ಹೂವಿನ ತೇರು ನಾಡಪ್ರಸಿದ್ದಿ. ಆರೇಳು ಲಕ್ಷ ಭಕ್ತರು ಹೂವಿನ ತೇರಿಗೆ ಸೇರುತ್ತಾರೆ.
ಆಂಧ್ರಪ್ರದೇಶ, ತಮಿಳುನಾಡಿನ ಮುಂತಾದ ಭಕ್ತರು ಅಧಿಕ ಸಂಖ್ಯೆಯಲ್ಲಿ ಇರುತ್ತಾರೆ. ಕಾಡುಗೊಲ್ಲರ ಈ ಪುಟ್ಟ ಹಟ್ಟಿ ಮಾಗೋಡು ಜಾತ್ರಾ ದಿನಗಳಲ್ಲಿ ಜನಾಕರ್ಷಣೀಯ, ಜನಜಂಗುಳಿಯ,ಕೇಂದ್ರವಾಗಿಯೂ ಮೈದುಂಬಿಕೊಳ್ಳುತ್ತದೆ. ಸಿರಾ – ಮಧುಗಿರಿ ರಸ್ತೆಯಲ್ಲಿ ಸಿರಾದಿಂದ 8ಕಿ.ಮೀ .ಕ್ರಮಿಸಿ ಎಡಕ್ಕೆ ತಿರುಗಿದರೆ ಮಾಗೋಡು ಕಮಾನು ದೇವಾಲಯದತ್ತ ಆಹ್ವಾನಿಸುತ್ತದೆ.
ಅಲ್ಲಿಂದ 2ಮೀ. ಸಾಗಿದರೆ ದೇವಾಲಯ ಸಿಗುತ್ತದೆ. ಬಸ್ ಸೌಲಭ್ಯ ಆಟೋ ಸೌಲಭ್ಯವಿದೆ. ಪ್ರತಿ ದಿನ ಮತ್ತು ಪ್ರತಿ ಶನಿವಾರ ,ಅಮವಾಸ್ಯೆ ಮತ್ತು ಹುಣ್ಣಿ¡ಮೆ ದಿನಗಳೊಂದು ಬೆಳಗ್ಗೆಯಿಂದ ಅರ್ಧರಾತ್ರಿಯತನಕ ಬಿಡುವಿಲ್ಲದೆ ಪೂಜಾಕಾರ್ಯವು ನಡೆಯುತ್ತದೆ. ಹೂಪ್ರಿಯ, ಕಂಬದಲ್ಲಿ ಒಡಮೂಡಿದ ಶ್ರೀರಂಗ, ಕಂಬದರಂಗನಾಥ, ಆಸ್ತಿಕರನಲ್ಲ, ಆರಾಧ್ಯ ದೈವ ಹೂ ಪ್ರಿಯ ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ
-ಲೋಕೇಶ್ ಸೂರಿ
ಶಿರಾ