Lok Sabha Elections ನಂತರ ಕಾಂಗ್ರೆಸ್ ಸರ್ಕಾರ ಮತ್ತಷ್ಟು ಬಲಿಷ್ಠ: ಡಿಕೆಶಿ
ಗ್ಯಾರಂಟಿ ಬಗ್ಗೆ ಅಗೌರವದಿಂದ ಮಾತನಾಡುವವರಿಗೆ ತಕ್ಕ ಪಾಠ
Team Udayavani, Apr 17, 2024, 8:57 PM IST
ಬೆಂಗಳೂರು: ಸಾರ್ವತ್ರಿಕ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಪ್ರತಿಪಕ್ಷಗಳ ಕೂಗಿನ ಬೆನ್ನಲ್ಲೇ ಚುನಾವಣೆ ನಂತರ ಈ ಸರ್ಕಾರ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಪ್ರಸ್ಕ್ಲಬ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮದೊಂದಿಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, 136 ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಈ ಕಾಂಗ್ರೆಸ್ ಸರ್ಕಾರ ಅತ್ಯಂತ ಭದ್ರವಾಗಿದೆ. ಲೋಕಸಭಾ ಚುನಾವಣೆಯು ಸರ್ಕಾರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಸರ್ಕಾರ ಪತನವೂ ಆಗುವುದಿಲ್ಲ. ಬದಲಿಗೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿಗಳು ನಮ್ಮ ಸರ್ಕಾರದ ವೋಟ್ ಬ್ಯಾಂಕ್ ಅಲ್ಲ; ಬಡ ಮಹಿಳೆಯರ ಬದುಕಿನ ಬ್ಯಾಂಕ್ ಎಂದು ವಿಶ್ಲೇಷಿಸಿದ ಅವರು, ಗ್ಯಾರಂಟಿ ಯೋಜನೆಗಳ ಮೂಲಕ ಹೆಣ್ಣುಮಕ್ಕಳಿಗೆ ಶಕ್ತಿ ತುಂಬಿದ್ದೇವೆ. ಅವರು ಗೌರವದಿಂದ ಬದುಕುವಂತೆ ಮಾಡಿದ್ದೇವೆ. ಆದರೆ ಕೆಲವರು ಅಗೌರವದಿಂದ ಮಾತನಾಡುತ್ತಾರೆ. ಅಂತಹವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದರು.
ನಾವು ನುಡಿದಂತೆ ನಡೆದಿದ್ದೇವೆ. ಆ ಮೂಲಕ ಜನರ ಬಳಿ ಹೋಗುವ ಅರ್ಹತೆ ಮತ್ತು ನೈತಿಕತೆಯೂ ನಮಗಿದೆ. ಆದರೆ, ಬಿಜೆಪಿಗೆ ಮತದಾರರ ಬಳಿ ಹೋಗುವ ನೈತಿಕತೆಯೂ ಇಲ್ಲ ಎಂದರು.
ಅವ್ರೇನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳೇ?:
ಈಗ ಚುನಾವಣೆಯಲ್ಲಿ ಸೋಲಿನ ಭೀತಿ ಕಾಡುತ್ತಿರುವುದರಿಂದ ಐಟಿ, ಇಡಿಯಂತಹ ಸಂಸ್ಥೆಗಳಿಂದ ರಾಜಕೀಯವಾಗಿ ಕಿರುಕುಳ ನೀಡಲಾಗುತ್ತಿದೆ. ಇವರ ಕಡೆಯವರು (ಬಿಜೆಪಿಗೆ) ಏನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳೇ? ಸ್ವತ್ಛವಾಗಲು ವಾಷಿಂಗ್ ಮಷಿನ್ ಇಟ್ಕೊಂಡಿದ್ದಾರಾ? ಬೇಕಾದರೆ, ನಾವೇ ಪಟ್ಟಿ ಕೊಡ್ತೀವಿ ಕ್ರಮ ಕೈಗೊಳ್ಳುತ್ತಾರಾ ಎಂದು ಡಿಕೆಶಿ ಕೇಳಿದರು.