ದೇಶದಲ್ಲಿ ಹೆಚ್ಚುತ್ತಿದೆ ಬಿಸಿಲ ತಾಪ
Team Udayavani, Feb 27, 2017, 10:02 AM IST
ಪುಣೆ/ಬೆಂಗಳೂರು: ಈ ಬಾರಿಯ ಬೇಸಿಗೆ ಈ ಹಿಂದಿನ ಎಲ್ಲಾ ಬೇಸಿಗೆಗಳಿಗಿಂಥ ಹೆಚ್ಚು ಸುಡಲಿದೆ! ಅಧ್ಯಯನದ ವರದಿಯೊಂದು ಈ ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೇ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತು ಭಾರತೀಯ ಉಷ್ಣವಲಯ ಮಾಪನ ಸಂಸ್ಥೆ (ಐಐಟಿಎಂ) ಜಂಟಿಯಾಗಿ ನಡೆಸಿರುವ ಅಧ್ಯಯನ ವರದಿಯಲ್ಲಿ ಇದು ದಾಖಲಾಗಿದೆ. ಪ್ರತಿ ದಶಕಕ್ಕೆ ಬೇಸಿಗೆಯ ಉಷ್ಣಾಂಶ ಶೇ.0.56 ಡಿಗ್ರಿ ಸೆ.ನಷ್ಟು, ಮಳೆಗಾಲದಲ್ಲಿನ ಉಷ್ಣಾಂಶ ಶೇ. 0.32 ಡಿಗ್ರಿ ಸೆ.ನಷ್ಟು ಗಮನಾರ್ಹ ಹೆಚ್ಚಳ ಕಂಡಿದೆ ಎನ್ನುವುದನ್ನು ಅಧ್ಯಯನ ತಂಡ ವರದಿಯಲ್ಲಿ ದಾಖಲಿಸಿದೆ. ಬೇಸಿಗೆಗೂ ಮುನ್ನವೇ ಸುಡು ಬಿಸಿಲ ಪರಿಣಾಮ ವಿದ್ಯುತ್ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವಂತೆಯೇ ಇಂಥದ್ದೊಂದು ಮಾಹಿತಿ ವರದಿಯಾಗಿದೆ. ಮುಂಬರುವ ದಿನಗಳಲ್ಲಿ ಎದುರಾಗುವ ರಣಬಿಸಿಲ ತಾಪ ಮನುಷ್ಯ ಸೇರಿದಂತೆ ಜೀವಿಗಳನ್ನು ಕಾಡುವ ಆತಂಕ ವ್ಯಕ್ತವಾಗಿದೆ.
ಮುಂಬೈ, ಪುಣೆ, ಕೋಲ್ಕತ, ಅಹಮದಾಬಾದ್, ವಿಶಾಖಪಟ್ಟಣ, ಕೊಯಮತ್ತೂರು, ನಾಗ್ಪುರ ಸೇರಿ ದೇಶಾದ್ಯಂತ 17 ನಗರಗಳನ್ನು ಈ ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಎಲ್ಲಾ ನಗರಗಳಲ್ಲಿಯೂ ಬೇಸಿಗೆಯ ತಾಪಮಾನದಲ್ಲಿನ ಉಷ್ಣಾಂಶ ಸೂಚ್ಯಂಕದಲ್ಲಿ ಹೆಚ್ಚಳ ಕಂಡುಬಂದಿದೆ. ಮುಂಬೈ ಮತ್ತು ಪುಣೆಯಲ್ಲಿ ಮಳೆಗಾಲದ ಉಷ್ಣಾಂಶ ಗಣನೀಯವಾಗಿ ಹೆಚ್ಚುತ್ತಿದೆ. ದೆಹಲಿ ಮತ್ತು ಅಮೃತಸರ ಸೇರಿ ಉತ್ತರ ಭಾರತದ ಬಹುತೇಕ ನಗರಗಳಲ್ಲಿ ಬೇಸಿಗೆ ಉಷ್ಣಾಂಶ ಪ್ರತಿ ವರ್ಷ ಹೆಚ್ಚುತ್ತಲೇ ಇದೆ ಎಂದು ಅಧ್ಯಯನ ವರದಿಯಲ್ಲಿದೆ.