ಭೂಮಿಪುತ್ರನ ಜನಕ ಯಡಿಯೂರಪ್ಪ !
Team Udayavani, May 20, 2017, 11:41 AM IST
ಮಂಡ್ಯ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 20 ತಿಂಗಳ ಅವಧಿಯ ಸಾಧನೆಗಳ ಬಗ್ಗೆ “ಭೂಮಿಪುತ್ರ’ ನಿರ್ಮಾಣ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. “ಭೂಮಿಪುತ್ರ’ನ ನಿಜವಾದ ಜನಕನನ್ನು ಯಡಿಯೂರಪ್ಪ ಮೂಲಕ ತೋರಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧರಾಗುತ್ತಿದ್ದಾರೆ. ಇಂತಹದೊಂದು ಸುಳಿವು ನೀಡಿದವರು ಮಾಜಿ ಸಂಸದೆ ತೇಜಸ್ವಿನಿ ರಮೇಶ್.
“ಕುಮಾರಸ್ವಾಮಿ ಬಗ್ಗೆ “ಭೂಮಿಪುತ್ರ’ ಎಂಬ ಸಿನಿಮಾ ಬರುತ್ತಿದೆ. ಆ ಭೂಮಿಪುತ್ರನ ನಿಜವಾದ ಜನಕ ಯಡಿಯೂರಪ್ಪ. ಇಪ್ಪತ್ತು ತಿಂಗಳು ಮುಖ್ಯಮಂತ್ರಿಗಿರಿ ಮಾಡಿಕೊಂಡು ಆಡಳಿತ ನಡೆಸಿದ ಮಾತ್ರಕ್ಕೆ ಕುಮಾರಸ್ವಾಮಿ ಭೂಮಿಪುತ್ರನಾಗುವುದಾದರೆ ನಲವತ್ತು ವರ್ಷ ಹೋರಾಟ ಮಾಡಿಕೊಂಡು ಬಂದಿರುವ, ಇಳಿವಯಸ್ಸಿನಲ್ಲೂ ಪರಿಶ್ರಮದ
ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ ಬಗ್ಗೆ ಸಿನಿಮಾ ಮಾಡಲೇಬೇಕು ಎಂಬ ಹಠಕ್ಕೆ ಬಿಜೆಪಿ ಕಾರ್ಯಕರ್ತರು ಬಿದ್ದಿದ್ದಾರೆ’ ಎಂದು ಶುಕ್ರವಾರ ಪ್ರವಾಸಿಮಂದಿರದಲ್ಲಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಸುದ್ದಿಗಾರರಿಗೆ ತಿಳಿಸಿದರು.
“ಭೂಮಿಪುತ್ರ’ ಸಿನಿಮಾದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ಯಡಿಯೂರಪ್ಪರನ್ನು ಮುಗಿಸಲು ಏನೇನು ತಂತ್ರಗಾರಿಕೆ ಮಾಡಿದರು ಎನ್ನುವುದನ್ನು ತೋರಿಸುವುದಿಲ್ಲ ಎಂಬ ಅನುಮಾನ ಕಾರ್ಯಕರ್ತರಲ್ಲಿದೆ. ಯಡಿಯೂರಪ್ಪ
ಕೃಪಾಶೀರ್ವಾದದಿಂದ ಮುಖ್ಯಮಂತ್ರಿ ಹುದ್ದೆಗೇರಿದ ಕುಮಾರಸ್ವಾಮಿ ಯಾವ ರೀತಿ ವಂಚನೆ ಮಾಡಿದರು. ಅವರ ಅವಕಾಶವಾದಿ ರಾಜಕಾರಣ ಹೇಗಿರುತ್ತೆ ಎನ್ನುವುದನ್ನು ನಮ್ಮ ಚಿತ್ರದಲ್ಲಿ ತೋರಿಸೋಣ ಎಂದು ನನ್ನ ಬೆನ್ನು ಹತ್ತಿದ್ದಾರೆ’ ಎಂದು ಹೇಳಿದರು. “ನಾನೇ ಈ ಚಿತ್ರವನ್ನು ನಿರ್ದೇಶಿಸಬೇಕೆಂಬ ಕಾರ್ಯಕರ್ತರ ಹಠಕ್ಕೆ ಒಂದು ಕಾರಣವೂ ಇದೆ.
ಚಿತ್ರದಲ್ಲಿ ಬರುವ ಪಾತ್ರಗಳನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ದೇವೇಗೌಡ, ಕುಮಾರಸ್ವಾಮಿ, ಿ.ಕೆ.ಶಿವಕುಮಾರ್ರನ್ನು ಬಿಟ್ಟು ರಾಜಕಾರಣ ನೋಡಲಿಕ್ಕೆ ಸಾಧ್ಯವಿಲ್ಲ. ಅವೆಲ್ಲವನ್ನೂ ಚಿತ್ರದಲ್ಲಿ ತೋರಿಸಲಾಗುವುದು’ ಎಂದು ಹೇಳಿದರು.
“ಮುಖ್ಯವಾಗಿ ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣ ಎಂಥದ್ದು ಎನ್ನುವುದನ್ನು ತೋರಿಸಬೇಕಿದೆ.
ಪಕ್ಷ ಅಧಿಕಾರಕ್ಕೆ ಬರಲು ಕಾಂಗ್ರೆಸ್ನಿಂದಲೂ ಲಾಭ ಪಡೆಯುತ್ತಾರೆ. ಆನಂತರ ಬಿಜೆಪಿ ಸೇರಿಕೊಂಡು ಮುಖ್ಯಮಂತ್ರಿನೂ ಆಗುತ್ತಾರೆ. ಅದಕ್ಕೆ ಅವರು “ಭೂಮಿಪುತ್ರ’ ಆದರು. ಈಗ ತಯಾರಾಗುತ್ತಿರುವ ಭೂಮಿಪುತ್ರದಲ್ಲಿ ನೈಜ ಚಿತ್ರಣ ಸಿಗುವುದಿಲ್ಲ.
ಹಳೇ ಮೈಸೂರು ಪ್ರಾಂತ್ಯದ ರೈತರಿಗೆ ನಿಜವಾದ ಭೂಮಿಪುತ್ರನ ಕತೆಯನ್ನು, ಅದರ ಜನಕನನ್ನು ಯಡಿಯೂರಪ್ಪ ಮೂಲಕ ಸಿನಿಮಾ ಮಾಡಿ ತೋರಿಸುತ್ತೇವೆ’ ಎಂದು ನುಡಿದರು. “ನಿಜವಾದ ನೇಗಿಲಯೋಗಿ, ಅನ್ನದಾತರ ಅಪ್ರತಿಮ ನಾಯಕ ಯಡಿಯೂರಪ್ಪ. ಚಿತ್ರಕತೆಗಾಗಿ ಹುಡುಕುವ ಅಗತ್ಯವಿಲ್ಲ. ಪತ್ರಿಕಾ ವರದಿ ಹಾಗೂ ಟಿವಿ ಬೈಟ್ಸ್ಗಳನ್ನಿಟ್ಟುಕೊಂಡರೆ ಚಿತ್ರಕಥೆ ಸಿದ್ಧವಾಗಲಿದೆ. “ನೇಗಿಲಯೋಗಿ ಬಿಎಸ್ವೈ’, “ಭೂಮಿಪುತ್ರನ ಜನಕ ಬಿಎಸ್ವೈ’ ಅಂತ ಹೇಳಿ ಯಡಿಯೂರಪ್ಪಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡುವುದು. ನಾನೇ ನಿರ್ದೇಶನ ಮಾಡಲಿದ್ದು, ಬಿಜೆಪಿ ಕಾರ್ಯಕರ್ತರೇ ನಿರ್ಮಾಪಕರು ಎಂದು ಸ್ಪಷ್ಟಪಡಿಸಿದರು.