ಮರವಂತೆ ಹೊರಬಂದರು ಪ್ರದೇಶ ಕಡಲ್ಕೊರೆತ ತೀವ್ರ
Team Udayavani, Jun 23, 2017, 4:15 PM IST
ಮರವಂತೆ: ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಹೊರಬಂದರು ಪ್ರದೇಶದಲ್ಲಿ ಕಡಲಬ್ಬರ ತೀವ್ರಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಕೆಲವೆಡೆ ಅಲೆಗಳು ತಡೆಗೋಡೆಯನ್ನು ಕೊರೆದು ಮುನ್ನುಗ್ಗುತ್ತಿವೆ. ಮೀನುಗಾರರು ವಿಶ್ರಾಂತಿಗೆಂದು ನಿರ್ಮಿಸಿಕೊಂಡಿರುವ ತಾತ್ಕಾಲಿಕ ಕಟ್ಟಡಗಳು ಕುಸಿದಿವೆ. ಕೆಲವು ತೆಂಗಿನ ಮರಗಳು ಸಮುದ್ರಪಾಲಾಗುವ ಭೀತಿ ಎದುರಾಗಿದೆ.
ಸುಮಾರು 150 ಮೀ. ಉದ್ದಕ್ಕೆ ದಡದ ಮೇಲೇರಿ ಬರುತ್ತಿರುವ ಅಲೆಗಳು ಕಾಂಕ್ರೀಟು ರಸ್ತೆಗೆ ಅಪ್ಪಳಿಸುತ್ತಿರುವುದರಿಂದ ಕೆಲವೆಡೆ ಬಿರುಕುಗಳು ಉಂಟಾಗಿ ಸಂಪರ್ಕ ರಸ್ತೆ ಕಡಿದುಹೋಗುವ ಭೀತಿ ಎದುರಾಗಿದೆ. ಇಲ್ಲಿ ರಸ್ತೆ ಸಂಪರ್ಕ ಕಡಿದಲ್ಲಿ ಅದರ ಅಂಚಿನಲ್ಲಿ ರಸ್ತೆಗಿಂತ ಕೆಳಮಟ್ಟದಲ್ಲಿರುವ ಮೀನುಗಾರರ ಮನೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಅಪೂರ್ಣ ಕಾಮಗಾರಿ ಕಾರಣ
ಇಲ್ಲಿ ಇಂತಹ ಸ್ಥಿತಿ ನಿರ್ಮಾಣವಾ ಗಲು ಇನ್ನೂ ಪೂರ್ಣಗೊಳ್ಳದ ಬಂದರು ಕಾಮಗಾರಿ ಕಾರಣ ಎನ್ನುವುದು ಮೀನುಗಾರರ ಅನಿಸಿಕೆ. ಅದರೊಂದಿಗೆ ಇಲ್ಲಿ ಹಿಂದಿನ ವರ್ಷ ರಚಿಸಿದ್ದ ತಾತ್ಕಾಲಿಕ ತಡೆಗೋಡೆಯ ಕಲ್ಲುಗಳನ್ನು ಕಾಮಗಾರಿಯ ಗುತ್ತಿಗೆದಾರರು ತೆಗೆದು ಬಂದರಿನ ಕಾಮಗಾರಿಗೆ ಬಳಸಿಕೊಂಡಿರುವುದೂ ಕಾರಣ ಎನ್ನುತ್ತಾರೆ ಕೆಲವು ಹಿರಿಯರು.ಕಳೆದ 2 ವರ್ಷ ಬಂದರು ಪ್ರದೇಶದ ದಕ್ಷಿಣ ಭಾಗದ ಭೂ ಪ್ರದೇಶ ಹಾನಿಗೀಡಾಗಿತ್ತಲ್ಲದೇ ಬೇಸಗೆಯಲ್ಲೂ ಕಡಲ್ಕೊರೆತದಿಂದ ಹಾನಿ ಸಂಭವಿಸಿತ್ತು. ಈ ಬಾರಿ ಬಂದರಿನ ಪಶ್ಚಿಮದ ತಡೆಗೋಡೆ ಕಾಮಗಾರಿ ಕೆಳಭಾಗ ಮುಂದುವರಿದ ಕಾರಣ ಅಲ್ಲಿ ಅಲೆಗಳ ಅಬ್ಬರ ಕಡಿಮೆಯಾಗಿ ಅಪಾಯ ಉತ್ತರಕ್ಕೆ ಸರಿದಿದೆ.
ಮಳೆಗಾಲದಲ್ಲಿ ಬಂದರು ಪ್ರದೇಶದ ಒಳಭಾಗದಲ್ಲಿ ಸಂಭವಿಸ ಬಹುದಾದ ಅಪಾಯವನ್ನು ಮನ ಗಂಡ ಶಾಸಕ ಕೆ. ಗೋಪಾಲ ಪೂಜಾರಿ ಅವರು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ವ್ಯವಸ್ಥೆ ಮಾಡಿದ್ದರು. ಅದರಂತೆ ದಂಡೆಯುದ್ದಕ್ಕೂ ಕಲ್ಲುಗಳನ್ನು ಪೇರಿಸುವ ಕೆಲಸ ನಡೆಯುತ್ತಿದೆ. ಪಶ್ಚಿಮದ ತಡೆಗೋಡೆ ಇನ್ನೂ ಪೂರ್ಣಗೊಳ್ಳದೆ ತೆರೆದಿರುವ ಭಾಗದಲ್ಲಿ ಅಬ್ಬರಿಸಿ ಬರುವ ಅಲೆಗಳು ಈ ದಂಡೆಯನ್ನು ಮೀರಿ ನುಗ್ಗುತ್ತಿರುವುದರಿಂದ ಅಪಾಯ ಮುಂದುವರಿದಿದೆ.
ಈ ಕುರಿತು ಮೀನುಗಾರರು ಕುಂದಾಪುರ ಉಪ ವಿಭಾಗಾ ಧಿಕಾರಿ ಶಿಲ್ಪಾ ನಾಗ್ ಅವರ ಗಮನ ಸೆಳೆದಿದ್ದು, ಅವರು ಇಲಾಖೆಯ ಎಂಜಿನಿಯರ್ ಮೂಲಕ ಪರಿಹಾರೋಪಾಯ ಕಲ್ಪಿಸುವ ಭರವಸೆ ನೀಡಿದ್ದಾರೆ.