ಕೋಚ್ ರವಿಶಾಸ್ತ್ರಿ ಸಂಭಾವನೆ ನಿಗದಿಗೊಳಿಸಲು ಸಮಿತಿ ರಚನೆ
Team Udayavani, Jul 16, 2017, 3:45 AM IST
ಹೊಸದಿಲ್ಲಿ: ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿ ಅವರ ಸಂಭಾವನೆ ಎಷ್ಟು? ಇದು ಎಲ್ಲರನ್ನೂ ಕಾಡುವ ಕುತೂಹಲ.
ನಿಜಕ್ಕಾದರೆ ಬಿಸಿಸಿಐ ಇನ್ನೂ ಈ ವಿಚಾರವಾಗಿ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಬದಲಾಗಿ ಸಂಭಾವನೆಯನ್ನು ನಿಗದಿಗೊಳಿಸಲೆಂದೇ ಸರ್ವೋಚ್ಚ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಆಡಳಿತಾಧಿಕಾರಿಗಳ ಕಮಿಟಿ (ಸಿಒಎ) ಯು 4 ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಇದು ಕೋಚ್ ಹಾಗೂ ಅವರ ಸಹಾಯಕ ಸಿಬಂದಿಗಳ ವೇತನವನ್ನು ಜು. 19ರಂದು ನಡೆಯುವ ಸಭೆಯಲ್ಲಿ ನಿಗದಿಗೊಳಿಸಲಿದೆ. ಬಳಿಕ ಜು. 22ರಂದು ಸಂಭಾವನೆ ಕುರಿತ ತನ್ನ ವರದಿಯನ್ನು ಸಿಒಎಗೆ ನೀಡಲಿದೆ.
ಬಿಸಿಸಿಐನ ಉಸ್ತುವಾರಿ ಅಧ್ಯಕ್ಷ ಸಿ.ಕೆ. ಖನ್ನಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಈ ಸಮಿತಿಯ ಇಬ್ಬರು ಪ್ರಮುಖರು. ಸಮಿತಿಯ ಉಳಿದಿಬ್ಬರೆಂದರೆ ಸಿಒಎ ಸದಸ್ಯೆ ಡಯಾನಾ ಎಡುಲ್ಜಿ ಮತ್ತು ಬಿಸಿಸಿಐಯ ಉಸ್ತುವಾರಿ ಕಾರ್ಯದರ್ಶಿ ಅಮಿತಾಭ್ ಚೌಧರಿ. ಶನಿವಾರದ ಸಿಒಎ ಸಭೆಯಲ್ಲಿ ಈ ಸಮಿತಿ ಯನ್ನು ರಚಿಸಲಾಯಿತು.
ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರನ್ನು ಭಾರತ ತಂಡದ ನೂತನ ಕೋಚ್ ಆಗಿ ನೇಮಿಸಿತ್ತು. ಜತೆಗೆ ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿ, ರಾಹುಲ್ ದ್ರಾವಿಡ್ ಅವರನ್ನು ಕೆಲವು ನಿರ್ದಿಷ್ಟ ಪ್ರವಾಸಗಳ ವೇಳೆ ತಂಡದ ಬ್ಯಾಟಿಂಗ್ ಸಲಹಾಗಾರನನ್ನಾಗಿ ನೇಮಿಸಿತ್ತು. ಭಾರತ ತಂಡ ಜು. 19ರಂದು ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದ್ದು, ಜಹೀರ್ ಮತ್ತು ದ್ರಾವಿಡ್ ತಂಡದ ಜತೆ ಇರುತ್ತಾರೋ ಇಲ್ಲವೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ.
ಸೋಮವಾರ ಶಾಸ್ತ್ರಿ-ಸಿಒಎ ಭೇಟಿ
ತನ್ನ ಸಹಾಯಕ ಸಿಬಂದಿಗಳ ನೇಮಕಾತಿಯನ್ನು ಅಂತಿಮಗೊಳಿಸಲು ಕೋಚ್ ರವಿ ಶಾಸ್ತ್ರಿ ಸೋಮವಾರ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಯನ್ನು ಭೇಟಿಯಾಗಲು ನಿರ್ಧರಿಸಿದ್ದು ಶನಿವಾರದ ಇನ್ನೊಂದು ಪ್ರಮುಖ ಬೆಳವಣಿಗೆಯಾಗಿದೆ.
ಮ್ಯಾನೇಜರ್ ಹುದ್ದೆಗೂ ಅರ್ಜಿ ಕರೆದ ಬಿಸಿಸಿಐ
ಮುಂಬಯಿ: ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರನ್ನು ಟೀಮ್ ಇಂಡಿಯಾದ ನೂತನ ಕೋಚ್ ಆಗಿ ನೇಮಕ ಮಾಡಿದ ಬೆನ್ನಲ್ಲೇ ಭಾರತ ತಂಡದ ಮ್ಯಾನೇಜರ್ ಹುದ್ದೆಗೂ ಬಿಸಿಸಿಐ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಪ್ರಥಮ ದರ್ಜೆ ಕ್ರಿಕೆಟ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿರಬೇಕು. ಖಾಸಗಿ ಅಥವಾ ಸಾರ್ವಜನಿಕ ವಲಯದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಅಭ್ಯರ್ಥಿಗಳ ವಯಸ್ಸು 60 ವರ್ಷ ಮೀರಿರಬಾರದು ಎನ್ನುವುದು ಬಿಸಿಸಿಐಯ ಮುಖ್ಯ ನಿಯಮಗಳಾಗಿವೆ. ಭಾರತ ತಂಡದ ಮ್ಯಾನೇಜರ್ ಹುದ್ದೆಯ ಅವಧಿ ಒಂದು ವರ್ಷದ್ದಾಗಿದೆ. ಅರ್ಹ ಅಭ್ಯರ್ಥಿ ಗಳು ಜುಲೈ 21ರೊಳಗೆ ಅರ್ಜಿ ಸಲ್ಲಿಸಲು ಬಿಸಿಸಿಐ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ.
ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆ ಕಪಿಲ್ ಮಲ್ಹೋತ್ರಾ ಭಾರತ ತಂಡದ ಮ್ಯಾನೇಜರ್ ಆಗಿದ್ದರು. ಈ ಪ್ರವಾಸದಲ್ಲೇ ಕೋಚ್ ಕುಂಬ್ಳೆ ಮತ್ತು ನಾಯಕ ಕೊಹ್ಲಿ ನಡುವಿನ ಭಿನ್ನಮತ ಸ್ಫೋಟಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ವರದಿ ಕೇಳಿದಾಗ, ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖೀ ಸುವಲ್ಲಿ ಮಲ್ಹೋತ್ರಾ ವಿಫಲರಾಗಿದ್ದರು. ಹೀಗಾಗಿ ತಂಡಕ್ಕೆ ವೃತ್ತಿಪರ ಕೋಚ್ ಓರ್ವರನ್ನು ನೇಮಿಸು ವುದು ಮಂಡಳಿಯ ಮುಖ್ಯ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ