ಶೇನಾಜ್ ಟ್ರೆಶರಿವಾಲಾ
Team Udayavani, Sep 29, 2017, 7:10 AM IST
ಶೇನಾಜ್ ಟ್ರೆಶರಿವಾಲಾ ಇದು ಬಾಲಿವುಡ್ನಲ್ಲಿ ಅಪರೂಪಕ್ಕೊಮ್ಮೆ ಕೇಳಿ ಬರುವ ಹೆಸರು. ಹೆಚ್ಚಿನವರಿಗೆ ಹೀಗೊಬ್ಬಳು ನಟಿ ಇರುವ ವಿಷಯ ಕೂಡ ಗೊತ್ತಿಲ್ಲ. ಇದಕ್ಕೆ ಕಾರಣ ಶೇನಾಜ್ ಎಲ್ಲರಂತೆ ಪದೇ ಪದೇ ಸಿನೆಮಾಗಳಲ್ಲಿ ಕಾಣಿಸಿಕೊಳ್ಳದಿರುವುದು. ಹಾಗೆಂದು ಶೇನಾಜ್ ಬಹಳ ಚೂಸಿ ಎಂದೇನೂ ಅಲ್ಲ.
ನಟನೆ ಅವಳಿಗೆ ಒಂದು ರೀತಿಯಲ್ಲಿ ಪಾರ್ಟ್ಟೈಮ್ ವೃತ್ತಿಯಿದ್ದಂತೆ. ನಟಿಸಬೇಕೆಂಬ ಮನಸಾದಾಗ, ಒಳ್ಳೆಯ ಕತೆ ಸಿಕ್ಕಿದರೆ, ಮೂಡ್ ಸರಿ ಇದ್ದರೆ ಸೈ ಎನ್ನುತ್ತಾಳೆ. ಇಲ್ಲದಿದ್ದರೆ ಮುಲಾಜಿಲ್ಲದೆ ಆಗುವುದಿಲ್ಲ ಎಂದು ಹೇಳಿ ಬಿಡುತ್ತಾಳೆ. ಹಾಗಾದರೆ ಉಳಿದ ಸಮಯದಲ್ಲಿ ಶೇನಾಜ್ ಏನು ಮಾಡುತ್ತಾಳೆ? ತಿರುಗಾಡುವುದು ಶೇನಾಜ್ಳ ಮೆಚ್ಚಿನ ಹವ್ಯಾಸ. ತಿರುಗಾಡುವುದೆಂದರೆ ಒಟ್ಟಾರೆ ಎಲ್ಲಿಗಾದರೂ ಹೋಗಿ ಬರುವುದಲ್ಲ. ಹೊಸ ಹೊಸ ದೇಶ ಪ್ರದೇಶಗಳಿಗೆ ಹೋಗಿ ಅಲ್ಲಿನ ಜನರ ಜತೆಗೆ ಬೆರೆತು ಅಲ್ಲಿರುವ ವಿಶೇಷತೆಗಳನ್ನು ಕಂಡು ಅನುಭವಿಸಿ ಆ ಕುರಿತು ಬರೆಯುವುದು, ವೀಡಿಯೊ ಶೂಟ್ ಮಾಡಿಕೊಂಡು ಬಂದು ತೋರಿಸುವುದು ಇವೆಲ್ಲ ಶೇನಾಜ್ಗೆ ತುಂಬ ತೃಪ್ತಿ ಕೊಡುವ ಕೆಲಸ.
ವಿಶೇಷವೆಂದರೆ ಈಗ ಅವಳ ಪಾಲಿಗೆ ಈ ಹವ್ಯಾಸವೇ ಪೂರ್ಣ ಪ್ರಮಾಣದ ವೃತ್ತಿಯಾಗಿದೆ. ಅದರಲ್ಲೂ ರಸ್ತೆ ಪ್ರಯಾಣವನ್ನೇ ಅವಳು ಹೆಚ್ಚಾಗಿ ಆರಿಸಿಕೊಳ್ಳುತ್ತಾಳೆ. ಒಂದು ಪ್ರದೇಶದ ನಿಜವಾದ ಅರಿವು ಆಗ ಬೇಕಾದರೆ ರಸ್ತೆ ಮೂಲಕ ಪ್ರಯಾಣಿಸಬೇಕು ಎನ್ನುವುದು ಶೇನಾಜ್ ಅನುಭವದಿಂದ ಕಂಡುಕೊಂಡಿರುವ ಸತ್ಯ. ಈ ರೀತಿ ಪ್ರವಾಸ ಮಾಡಿಯೇ ಅವಳು ಹಲವಾರು ಲೇಖನ ಮತ್ತು ಪುಸ್ತಕಗಳನ್ನು ಬರೆದಿದ್ದಾಳೆ. ಟಿವಿಗಳಿಗೆ ಅನೇಕ ಕಾರ್ಯಕ್ರಮ ಮಾಡಿಕೊಟ್ಟಿದ್ದಾಳೆ. ಕರ್ನಾಟಕ ಮತ್ತು ಓಲಾ ಟ್ಯಾಕ್ಸಿ ಅವಳ ಜತೆಗೆ ಪ್ರವಾಸೋದ್ಯಮದ ಒಪ್ಪಂದ ಮಾಡಿಕೊಂಡಿದೆ. ಇನ್ನು ಶೇನಾಜ್ಳ ಸಿನೆಮಾ ಕುರಿತು ಹೇಳುವುದಾದರೆ ಅವಳು ಮೊದಲು ನಟಿಸಿದ್ದು ತೆಲುಗಿನಲ್ಲಿ. ಹಿಂದಿಯಲ್ಲಿ ಇಶ್ಕ್ವಿಶ್ಕ್, ಹಮ್ತುಮ್, ಉಮರ್, ಆಗೇ ಸೇ ರೈಟ್, ರೇಡಿಯೊ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದರೂ ಯಾಕೋ ಬಾಲಿವುಡ್ ಈ ಅದ್ಭುತ ಚೆಲುವೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸದ್ಯಕ್ಕೆ ಸೈಫ್ ಅಲಿಖಾನ್ ಎದುರು ಕಾಲಾಕಾಂಡಿ ಎಂಬ ಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾಳೆ. ಇದರ ಜತೆಗೆ ದ ಬಿಗ್ ಸಿಕ್ ಮತ್ತು ಬ್ರೌನ್ ನೇಶನ್ ಎಂಬೆರಡು ಇಂಗ್ಲಿಶ್ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.
ಎಲ್ಲ ನಟಿಯರಂತೆ ಸಿನೆಮಾ ರಂಗಕ್ಕೆ ಬರುವ ಮೊದಲು ಶೇನಾಜ್ ಮಾಡೆೆಲ್ ಆಗಿದ್ದಳು. ಪಾರ್ಸಿ ಸಮುದಾಯಕ್ಕೆ ಸೇರಿದ ಶೇನಾಜ್ಳ ತಂದೆ ಮರ್ಚಂಟ್ ಮೆರಿನ್ ಇಂಜಿನಿಯರ್ ಆಗಿದ್ದಾರೆ. ಮೂರು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಶಾರೂಕ್ ಖಾನ್, ಅಮೀರ್ ಖಾನ್, ಅನಿಲ್ ಅಂಬಾನಿ ಸೇರಿದಂತೆ ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ಮಹಿಳಾ ಸುರಕ್ಷತೆಯ ಬಗ್ಗೆ ಬಹಿರಂಗ ಪತ್ರ ಬರೆದಾಗ ಶೇನಾಜ್ ಹೆಸರು ಕೆಲ ದಿನ ಚರ್ಚೆಯಲ್ಲಿತ್ತು. ಮುಂಬಯಿಯಲ್ಲಿ ಶಾಲಾಕಾಲೇಜು ಮುಗಿಸಿದ ಬಳಿಕ ನ್ಯೂಯಾರ್ಕ್ಗೆ ಹೋಗಿ ಅಭಿನಯ, ಬರವಣಿಗೆ ಮತ್ತಿತರ ವಿಚಾರಗಳ ಬಗ್ಗೆ ಕಲಿತುಕೊಂಡು ಬಂದಿರುವ ಪ್ರತಿಭಾವಂತೆ ಆಕೆ.