ಕೈ ಕೊಟ್ಟ ಕರೆಂಟ್, ಮೆಟ್ರೋ ಸಂಚಾರ ಸ್ಥಗಿತ; ಪರದಾಡಿದ ಪ್ರಯಾಣಿಕರು!
Team Udayavani, Jan 2, 2018, 12:02 PM IST
ಬೆಂಗಳೂರು:ವಿದ್ಯುತ್ ಕೈಕೊಟ್ಟ ಪರಿಣಾಮ ನಮ್ಮ ಮೆಟ್ರೋ ಸಂಚಾರ ಕೆಲ ಕಾಲ ಸ್ಥಗಿತಗೊಂಡಿದ್ದು, ಈ ಸಂದರ್ಭದಲ್ಲಿ ಬೋಗಿಯೊಳಗೆ ಎಸಿ ಇಲ್ಲದೆ ಕೆಲವು ಪ್ರಯಾಣಿಕರು ಉಸಿರಾಟದ ತೊಂದರೆ ಅನುಭವಿಸಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮಂಗಳವಾರ ಬೆಳಗ್ಗೆ 10ಗಂಟೆ ಸುಮಾರಿಗೆ ದಿಢೀರ್ ಆಗಿ ವಿದ್ಯುತ್ ಕೈಕೊಟ್ಟ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ, ಮೈಸೂರು ಮಾರ್ಗ ಹಾಗೂ ನಾಗಸಂದ್ರ ಯಲಚೇನಹಳ್ಳಿಯ ಮಾರ್ಗದಲ್ಲಿನ ಸುಮಾರು 20ಕ್ಕೂ ಅಧಿಕ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಸುಮಾರು 5 ನಿಮಿಷಗಳ ಕಾಲ ಸಂಚಾರದಲ್ಲಿ ವ್ಯತ್ಯಯವಾಗಿತ್ತು, ಶರಾವತಿಯಿಂದ ನಮ್ಮ ಮೆಟ್ರೋಗೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಸ್ಥಳಕ್ಕೆ ನಮ್ಮ ಮೆಟ್ರೋ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮೆಟ್ರೋ ಸಂಚಾರ ಎಂದಿನಂತೆ ಆರಂಭಗೊಂಡಿರುವುದಾಗಿ ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.