3 ಕಾಸಿನ ವ್ಯಕ್ತಿ!:ಪ್ರಕಾಶ್ ರೈ ವಿರುದ್ಧ ಸಂಸದ ಸಿಂಹ ಘರ್ಜನೆ
Team Udayavani, Feb 28, 2018, 3:08 PM IST
ಮೈಸೂರು: ತಮ್ಮ ವಿರುದ್ಧ 1 ರೂಪಾಯಿ ಮಾನನಷ್ಟ ಮೊಕದ್ದಮೆ ಪ್ರಕರಣ ಹೂಡಿದ ನಟ ಪ್ರಕಾಶ್ ರೈ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಂಹ ‘ಪ್ರಕಾಶ್ ರೈ ಅವರನ್ನು ನಾನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ. ಸಮಾಜದಲ್ಲಿ ಅವರ ಮರ್ಯಾದೆ 1 ರೂಪಾಯಿದ್ದು ಎಂದು ನ್ಯಾಯಾಲಯದಲ್ಲೇ ಅವರು ಒಪ್ಪಿಕೊಂಡಿದ್ದಾರೆ’ ಎಂದರು.
‘ನನಗೆ ಮತ ಹಾಕಬೇಡಿ ಎನ್ನಲು ಅವರು ಯಾರು ? ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಜನರಿಂದ ಆಯ್ಕೆಯಾಗಿದ್ದೇನೆ. ನನ್ನ ಎದುರು ಅವರು ಬಂದು ಚುನಾವಣೆ ನಿಲ್ಲಲಿ ಎನ್ನುವುದಿಲ್ಲ. ಅಷ್ಟು ದೊಡ್ಡದು ಬೇಡ ಮೊದಲು ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲಿ’ ಎಂದು ಸವಾಲು ಹಾಕಿದರು.
‘ಪ್ರಕಾಶ್ ರೈ ಅವರು ಸಾಮರ್ಥ್ಯವಿದ್ದರೆ ರಾಜ್ಯದ 28 ಕ್ಷೇತ್ರಗಳಲ್ಲಿ ಎಲ್ಲಿಯಾದರು ಸ್ಪರ್ಧಿಸಿ ತೋರಿಸಲಿ, ಸೋಲಿಸಿ ಕಳುಹಿಸುತ್ತೇವೆ’ ಎಂದರು.
‘ರೈ ನಿಜಜೀವನದಲ್ಲಿ ಖಳ ನಟ ಎಂದ ಸಿಂಹ ಅವರ ನಿಲುವು ದ್ವಂದ. ಮೊದಲು ಪ್ರಕಾಶ್ ರಾಜ್ ಹೆಸರಲ್ಲಿ ನನಗೆ ನೊಟೀಸ್ ನೀಡಿದ್ದರು, ಈಗ ಪ್ರಕಾಶ್ ರೈ ಹೆಸರಿನಲ್ಲಿ ನೀಡಿದ್ದಾರೆ’ ಎಂದು ಕಿಡಿ ಕಾರಿದರು.