ಇರುವುದೊಂದೇ ರಸ್ತೆ : ಕಾಟಾಚಾರದ ತೇಪೆ
Team Udayavani, Jul 19, 2018, 1:46 PM IST
ಕುಂದಾಪುರ: ಇರುವುದೊಂದೇ ರಾಷ್ಟ್ರೀಯ ಹೆದ್ದಾರಿ ರಸ್ತೆ. ಅದೂ ಸಂಚಾರಕ್ಕೆ ಅಯೋಗ್ಯವಾಗಿದೆ. ಗುತ್ತಿಗೆದಾರರು ಅಲ್ಲಲ್ಲಿ ತೇಪೆ ಕಾರ್ಯ ಮಾಡಿದ್ದು ಕಾಟಾಚಾರಕ್ಕೆ ಎಂಬಂತಾಗಿದೆ. ಕೆಲವು ಕಡೆ ಡಾಂಬರು ಹಾಕಿದ ಮರುದಿನವೇ ಕಿತ್ತು ಹೋಗಿದೆ. ಇದು ಪನ್ವೇಲ್ – ಕನ್ಯಾಕುಮಾರಿ ಸಂಪರ್ಕಿಸುವ ಪ್ರಮುಖ ರಾ. ಹೆದ್ದಾರಿ. ಕಾರವಾರ, ಗೋವಾ, ಮುಂಬಯಿ, ಹುಬ್ಬಳ್ಳಿ ಮೊದಲಾದ ಪ್ರಮುಖ ಊರುಗಳಿಗೆ ಈ ರಸ್ತೆಯೇ ಪ್ರಮುಖ ಸಂಪರ್ಕ ರಸ್ತೆ. ಆದರೆ ವಾಹನಗಳ ಓಡಾಟಕ್ಕೆ ಮಾತ್ರ ಅಯೋಗ್ಯವಾಗಿದೆ.
ಹೆದ್ದಾರಿ ಗುಂಡಿ
ಉಡುಪಿಯಿಂದ ಕುಂದಾಪುರದವರೆಗೆ ರಸ್ತೆ ಚತುಷ್ಪಥವಾಗಿದೆ. ವಾಹನಗಳ ಓಡಾಟಕ್ಕೂ ಯೋಗ್ಯವಾಗಿದೆ. ಕುಂದಾಪುರದ ಹಂಗಳೂರಿಗೆ ದ್ವಿಪಥ ರಸ್ತೆ ಕೊನೆಯಾಗುತ್ತದೆ. ಅನಂತರ ಆರಂಭವಾಗುವುದೇ ಯಮಯಾತನೆ. ಕುಂದಾಪುರ, ಬೈಂದೂರು, ಶಿರೂರು, ಭಟ್ಕಳವರೆಗೂ ಈ ರಸ್ತೆ ತೀರಾ ಹದಗೆಟ್ಟಿದೆ. ನಿತ್ಯ ಓಡಾಡುವ ವಾಹನಗಳು, ಬಸ್ಗಳಿಗೆ ಇಷ್ಟು ದಾರಿ ಸವೆಸುವುದೇ ದೊಡ್ಡ ಸಮಸ್ಯೆಯಾಗಿದೆ. ಪ್ರಯಾಣಿಕರಿಗೂ ನರಕ ದರ್ಶನ.
ಒಂದೆ ಮಳೆಗೆ ಗುಂಡಿ
ಸಹಾಯಕ ಕಮಿಷನರ್ ಆದೇಶದ ಮೇರೆಗೆ ಪೇಟೆಯಲ್ಲಿ ಮುಖ್ಯ ರಸ್ತೆಗೆ ತೇಪೆ ಹಾಕಲಾಗಿತ್ತು. ಆದರೆ ತೇಪೆ ಕಾರ್ಯ ಕಾಟಾಚಾರಕ್ಕೆ ನಡೆಸಲಾಗಿದೆ ಎನ್ನುವುದು ಒಂದೇ ಮಳೆಯಲ್ಲಿ ಬಟಾ ಬಯಲಾಗಿದೆ. ಬಸೂರು ಮೂರುಕೈವರೆಗೆ ಮಾರ್ಗ ಹಾಳಾಗಿದ್ದರೂ ತೇಪೆ ಕಾರ್ಯ ನಡೆದೇ ಇಲ್ಲ. ಸಹಾಯಕ ಕಮಿಷನರ್ ಅವರ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ.