ಮಸಣವಾಗಬೇಕಾ ಹಸನಾದ ಲೋಕ? 


Team Udayavani, Sep 8, 2018, 12:30 AM IST

13.jpg

ಅಶೋಕ ನೆಟ್ಟರೆ ಶೋಕವಿಲ್ಲ, ಬಿಲ್ವವೃಕ್ಷ ನೆಟ್ಟರೆ ದೀರ್ಘಾಯುಷ್ಯ, ಜಂಬೂವೃಕ್ಷ ನೆಟ್ಟರೆ ಶ್ರೀಮಂತಿಕೆ, ಹಣ್ಣಿನ ಮರ ಕುಲ ವೃದ್ಧಿಕರ, ದಾಳಿಂಬದ ಗಿಡ ನೆಟ್ಟರೆ ಭಾಗ್ಯ, ಬಕುಲ ಪಾಪನಾಶಕ, ಧಾತಕಿ ಸ್ವರ್ಗಪ್ರದ, ವಟವೃಕ್ಷ ಅಭೀಷ್ಟ ಸಿದ್ಧಿ, ಅರ್ಜುನ ವೃಕ್ಷ ಅನ್ನಪ್ರದ, ಬನ್ನಿಗಿಡ ರೋಗನಾಶಕ, ಕದಂಬ ವೃಕ್ಷ ಲಕ್ಷ್ಮೀಪ್ರಾಪ್ತಿ, ಕೇಸರಿ ಶತ್ರುನಾಶಕ. ಇವೆಲ್ಲವೂ ಪುರಾಣದ ಮಾತುಗಳು. ಆಮಿಷ ಹುಟ್ಟಿಸಿಯಾದರೂ ಮರಗಿಡಗಳನ್ನು ರಕ್ಷಿಸುವಂತೆ ಮಾಡುತ್ತಿದ್ದ ಪುರಾಣಕಾರರ ಪರಿಸರಪ್ರೇಮ ಅದೆಷ್ಟು ಅದ್ಭುತ!

ಪ್ರಕೃತಿಯ ಕೋಪಕ್ಕೆ ಅದೆಷ್ಟು ಶಕ್ತಿಯಿದೆಯೆಂಬುವುದನ್ನು ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿ ಸುರಿದ ಭೀಕರ ಮಳೆ ನಮಗೆ ತೋರಿಸಿಕೊಟ್ಟಿದೆ. ಹಾಗೆ ನೋಡಿದರೆ ಪ್ರಕೃತಿ ವಿಕೋಪದ ಕಹಿ ಅನುಭವ ನಮಗೆ ಹೊಸದಲ್ಲ. ಅಸ್ಸಾಂ, ಮಹಾರಾಷ್ಟ್ರಗಳಲ್ಲಿ ನಡೆದ ಭೂಕಂಪ. ಆಂಧ್ರದಲ್ಲಿ ಬೀಸಿದ ಚಂಡಮಾರುತ, ಗುಜರಾತ್‌, ಮಹಾರಾಷ್ಟ್ರ, ಬಿಹಾರ, ಉತ್ತರ ಕರ್ನಾಟಕದ ಭೀಕರ ಬರಗಾಲ, ದಿಲ್ಲಿ, ರಾಜಸ್ಥಾನದ ಭಯಂಕರ ಪ್ರವಾಹಗಳು, ಕೇರಳ, ತಮಿಳುನಾಡುಗಳಿಗೆ ಅಪ್ಪಳಿಸಿದ ಸುನಾಮಿ… ಹೀಗೆ ಹಲವಾರು ಪ್ರಾಕೃತಿಕ ವಿಕೋಪಗಳಿಂದುಂಟಾದ ದುರಂತಗಳನ್ನು ನೆನಪಿಸಿಕೊಳ್ಳಬಹುದು. ಪ್ರತೀ ದುರಂತ ಸಂಭವಿಸಿದಾಗಲೂ ಪರಿಸರ ವಿಜ್ಞಾನಿಗಳು ಪರಿಸರ ರಕ್ಷಿಸಿ ಎಂದು ಗೋಳಿಡುತ್ತಲೇ ಇರುತ್ತಾರೆ. ಅವರ ಕರುಣೆಯ ಕೂಗು ಅರಣ್ಯ ರೋದನವಾಗುತ್ತಿದೆಯೇ ಹೊರತು ಪರಿಸರವನ್ನು ಕಾಯುವ ಕಾಳಜಿ ಯಾರಿಗೂ ಇಲ್ಲ. ನಮ್ಮ ಶಿಕ್ಷಣ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಏಕೆ ಮೂಡಿಸಲಿಲ್ಲವೆಂಬುದೇ ಆಶ್ಚರ್ಯಕರ ಸಂಗತಿ. ಕೇವಲ ವಿಜ್ಞಾನ-ತಂತ್ರಜ್ಞಾನಗಳು ಮಾತ್ರ ಪ್ರಗತಿಯೇ? ಪರಿಸರವೆಂದರೆ ಒಂದು ನೈಸರ್ಗಿಕ ವ್ಯವಸ್ಥೆ. ಪ್ರಕೃತಿಯೊಳಗಿನ ಮಹಾಶಕ್ತಿಯ ವ್ಯಕ್ತರೂಪವೇ ಪರಿಸರ. ಪಂಚಭೂತಗಳ ಸಂಯುಕ್ತ ಸತ್ವವೇ ಪರಿಸರ. ನದಿ, ಪರ್ವತ, ಕಲ್ಲು, ಮಣ್ಣು, ಮರ, ಗಿಡ, ಬಳ್ಳಿ, ಪೊದೆ ಎಲ್ಲವೂ ಒಂದಾಗಿರುವ ಸೃಷ್ಟಿಯ ವ್ಯವಸ್ಥೆಯೇ ಪರಿಸರ. 

ಸಕಲ ಜೀವರಾಶಿಗಳಿಗೆ ಸ್ವರ್ಗಸುಖದ ಸವಿಯನ್ನುಣಿಸುವ ಅಮೃತ ತತ್ವವೇ ಪರಿಸರ. ಪರಿಸರವೆಂದರೆ ಆದಿಶಕ್ತಿ. ಈ ಆದಿಶಕ್ತಿಯಿಂದಲೇ ಮನುಷ್ಯ ಮಾತ್ರವಲ್ಲ, ಸಕಲ ಪ್ರಾಣಿಗಳ ಹುಟ್ಟಾಯಿತು. ಮನುಷ್ಯನಂತೆ ಪ್ರತೀ ಜೀವಿಗೂ ಬದುಕುವ ಹಕ್ಕು ಇದೆ. ಪರ್ವತ, ಕಲ್ಲುಬಂಡೆಗಳಿಗೂ ಇಲ್ಲಿ ಅಸ್ತಿತ್ವವಿದೆ. ಪ್ರಕೃತಿಯ ಜಡ ಚೇತನಗಳೆಲ್ಲವೂ ಪರಿಸರದ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಪರಿಸರವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ತಾಕತ್ತು ಇರುವುದು ಮನುಷ್ಯನಿಗೆ ಮಾತ್ರ. ನಿತ್ಯ ನಿರಂತರ ಪ್ರಕೃತಿಯ ಮೇಲೆ ಆಕ್ರಮಣ ಮಾಡುತ್ತಿರುವ ಮನುಷ್ಯನಿಗೆ ತನ್ನ ಸೂಡನ್ನು ತಾನೇ ಕಟ್ಟಿಕೊಳ್ಳುತ್ತಿದ್ದೇನೆ ಎಂಬ ಅರಿವೇ ಇಲ್ಲ! 

 ಪರಿಸರ ವಿಜ್ಞಾನವನ್ನು ಆಂಗ್ಲಭಾಷೆಯಲ್ಲಿ “ಇಕೋಲಜಿ’ ಎಂದು ಕರೆಯುತ್ತಾರೆ. ಇದು ಮನೆಗೆ ಸಂಬಂಧಿಸಿದ ಶಾಸ್ತ್ರ. ಇದು ಕೇವಲ ಮನುಷ್ಯರ ವಾಸದ ಮನೆಯಲ್ಲ. ಇರುವೆಯಿಂದ ಹಿಡಿದು ಆನೆಯ ತನಕ ಸಕಲ ಜೀವರಾಶಿಗಳು, ಹುಲ್ಲಿನಿಂದ ಹಿಡಿದು ಹೆಮ್ಮರಗಳ ತನಕ ಅನೇಕ ಸಸ್ಯ ಸಂಕುಲಗಳು ವಾಸಿಸುವ ಮಹಾಮನೆ ಇದು. ವಾಯುಮಂಡಲವೇ ಈ ಮನೆಯ ಸೂರು. ಅರಣ್ಯ-ಪರ್ವತಗಳೇ ಈ ಮನೆಯ ಭದ್ರಗೋಡೆ. ಈ ಮನೆಯನ್ನು ರಕ್ಷಿಸಬೇಕಾದುದು ನಮ್ಮ ಹೊಣೆಯಲ್ಲವೆ? ಮನೆಯ ಪ್ರತಿಯೊಬ್ಬ ಸದಸ್ಯನೂ ಮನೆಯ ಮೇಲೆ ಒಲವು ಹೊಂದಿ ಸಹಬಾಳ್ವೆಯಿಂದ ಸಾಗಿದಾಗ ಮಾತ್ರ ಮನೆ ಸ್ವರ್ಗವಾಗುತ್ತದೆ. 

 ನಮ್ಮ ಪೂರ್ವಿಕರು ಅಸಾಮಾನ್ಯ ಪ್ರಕೃತಿ ಪ್ರಿಯರಾಗಿದ್ದರು. ಆದ್ದರಿಂದಲೇ ನದಿ, ಪರ್ವತ, ಮರ, ಗಿಡ, ಪ್ರಾಣಿ-ಪಕ್ಷಿಗಳಲ್ಲಿ ದೇವರನ್ನು ಕಂಡು ಆರಾಧಿಸಿದರು. ಪ್ರಕೃತಿಗಿಂತ ದೊಡ್ಡ ದೇವರಿಲ್ಲ ಎಂಬುದನ್ನು ಅವರು ಮನಗಂಡಿದ್ದರು. ಪ್ರಕೃತಿಯನ್ನು ಉಳಿಸುತ್ತಲೇ ವೈಜ್ಞಾನಿಕ ಪ್ರಗತಿಯನ್ನು ಸಾಧಿಸಿದವರು ಅವರು. ಧರ್ಮಗ್ರಂಥಗಳ ವಿವರಣೆ, ಧರ್ಮಗುರುಗಳ ಉಪದೇಶ, ಸಾವಿರಾರು ದೇವರು ಗಳು ನಮ್ಮಲ್ಲಿ ಸ್ಥೈರ್ಯವನ್ನು ತುಂಬಬಹುದು. ಆದರೆ ಜೀವಿಗಳ ಉಸಿರನ್ನು ಉಳಿಸಲು ಸಾಧ್ಯವಿಲ್ಲ. ಇದು ತನಕ ನಡೆದ ಎಲ್ಲಾ ಪ್ರಾಕೃತಿಕ ದುರಂತಗಳು ಈ ಮಾತನ್ನು ಪುಷ್ಟೀಕರಿಸಿವೆ. ಇದರರ್ಥ ದೇವರನ್ನು ನಂಬಬಾರದು ಎಂದಲ್ಲ. ನಮ್ಮ ದೇವರುಗಳೆಲ್ಲ ಪ್ರಕೃತಿಪ್ರಿಯರು. ಭೋಗಭೂಮಿಯ ದೇವತೆಗಳು ವಿಮಾನಗಳಲ್ಲಿ ಸಂಚರಿಸಿದ್ದುಂಟು! ಆದರೆ ನಾವು ಪೂಜಿಸುವ ದೇವರುಗಳು ಪರಿಸರಕ್ಕೆ ಮಾರಕವಾದ ಯಾವುದೇ ವಾಹನ ಬಳಸಿಲ್ಲ!

ಶ್ರೀರಾಮ, ಧರ್ಮರಾಯ ಕಾಡಿನ ಅನುಭವ ಪಡೆದೇ ನಾಡಿನ ಸಿಂಹಾಸನವನ್ನೇರಿದರು. ಶ್ರೀಕೃಷ್ಣ ಗಿರಿಪೂಜೆಯನ್ನು ಪ್ರೇರೇಪಿಸಿದ್ದು ಅವನಿಗಿದ್ದ ನಿಸರ್ಗಪ್ರೇಮದ ದ್ಯೋತಕ. ಬೋಧಿವೃಕ್ಷದ ಬುಡದಲ್ಲೇ ಬುದ್ಧನಿಗೆ ಜ್ಞಾನೋದಯವಾದದ್ದು. ನಾಡಿನ ನಾಗರಿಕತೆಯ ಮೂಲ ಸೆಲೆ ಚಿಮ್ಮಿದ್ದೇ ಕಾಡಿನಲ್ಲಿ. ಅಶ್ವತ್ಥ, ವಟವೃಕ್ಷಗಳನ್ನು ಕಡಿಯುವುದರಿಂದ ಮಹಾಪಾತಕ ಬರುತ್ತದೆಯಂತೆ. ಮಾವಿನ ಮರಕ್ಕೆ ನೀರುಣಿಸಿದರೆ ಪಿತೃಗಳು ಸಂತೃಪ್ತರಾಗುತ್ತಾರಂತೆ. ಇದರ ವೈಜ್ಞಾನಿಕ ಪ್ರಯೋಜನಗಳು ಸಣ್ಣ ಮಕ್ಕಳಿಗೂ ಗೊತ್ತು. ಪಲಾಶವೃಕ್ಷ ಬ್ರಹ್ಮನಂತೆ. ಅಶ್ವತ್ಥವೃಕ್ಷ ನಾರಾಯಣನಂತೆ. ವಟವೃಕ್ಷ ಶಿವನಂತೆ. ಕೇವಲ ಅಶ್ವತ್ಥ ವೃಕ್ಷದಲ್ಲೇ ಮೂರು ಮೂರ್ತಿಗಳನ್ನು ಕಂಡ ಪ್ರಕೃತಿ ಪ್ರಿಯರು ಭಾರತೀಯರು. ಮರ-ಗಿಡಗಳನ್ನು ಬೆಳೆಸುವವರು ಸಮಸ್ತ ಪಾಪಗಳಿಂದ ಮುಕ್ತನಾಗುತ್ತಾನಂತೆ. ಮರಗಳನ್ನು ಕಡಿಯುವವ‌ ರೋಗಗ್ರಸ್ತನಾಗಿ ನರಕ ಸೇರುತ್ತಾನಂತೆ. ಮಕ್ಕಳಿಲ್ಲದವರಿಗೆ ಮರಗಳೇ ಮಕ್ಕಳಂತೆ. ಲೌಕಿಕ ಪಾರಲೌಕಿಕ ಸುಖಗಳನ್ನು ಮರಗಳೇ ನೀಡುತ್ತವೆಯಂತೆ. 

 ಅಶೋಕ ನೆಟ್ಟರೆ ಶೋಕವಿಲ್ಲ. ಬಿಲ್ವವೃಕ್ಷ ನೆಟ್ಟರೆ ದೀರ್ಘಾಯುಷ್ಯ. ಜಂಬೂವೃಕ್ಷ ನೆಟ್ಟರೆ ಶ್ರೀಮಂತಿಕೆ, ಹಣ್ಣಿನ ಮರ ಕುಲ ವೃದ್ಧಿಕರ, ದಾಳಿಂಬದ ಗಿಡ ನೆಟ್ಟರೆ ಭಾಗ್ಯ, ಬಕುಲ ಪಾಪನಾಶಕ, ಧಾತಕಿ ಸ್ವರ್ಗಪ್ರದ, ವಟವೃಕ್ಷ ಅಭೀಷ್ಟ ಸಿದ್ಧಿ. ಅರ್ಜುನ ವೃಕ್ಷ ಅನ್ನಪ್ರದ, ಬನ್ನಿಗಿಡ ರೋಗನಾಶಕ. ಕದಂಬ ವೃಕ್ಷ ಲಕ್ಷ್ಮೀಪ್ರಾಪ್ತಿ, ಕೇಸರಿ ಶತ್ರುನಾಶಕ. ಇವೆಲ್ಲವೂ ಪುರಾಣದ ಮಾತುಗಳು. ಆಮಿಷ ಹುಟ್ಟಿಸಿಯಾದರೂ ಮರಗಿಡಗಳನ್ನು ರಕ್ಷಿಸುವಂತೆ ಮಾಡುತ್ತಿದ್ದ ಪುರಾಣಕಾರರ ಪರಿಸರಪ್ರೇಮ ಅದೆಷ್ಟು ಅದ್ಭುತ! ನಮ್ಮ ಪ್ರಾಚೀನ ಕವಿಗಳು ಅರಣ್ಯವನ್ನು ವರ್ಣಿಸಿದ ಬಗೆ ಅವರ್ಣನೀಯ. 

 ಆಧುನಿಕರಿಗೆ ಪ್ರಕೃತಿ ಜಡರೂಪ. ನಮ್ಮ ಹಿರಿಯರಲ್ಲಿ ಆಧ್ಯಾತ್ಮಿಕ ದೃಷ್ಟಿ ಇದ್ದುದರಿಂದ ಎಲ್ಲವೂ ಆತ್ಮಮಯ. ಭೂಮಿ ಬ್ರಹ್ಮನ ಮಗಳು. ವಿಷ್ಣುವಿನ ಪತ್ನಿ. ಈ ಭಾವನಾತ್ಮಕ ಸಂಬಂಧದಿಂದಲೇ ಇಳೆಯ ಸಮೃದ್ಧಿ ಬಹುಕಾಲ ಉಳಿಯಿತು. ಪ್ರಾಣಿಗಳು ಭೂಮಿಯಲ್ಲೇ ಹುಟ್ಟುತ್ತವೆ. ಭೂಮಿಯಲ್ಲೇ ಸಾಯುತ್ತವೆ. ಆದರೆ ಭೂಮಿಯ ಯಜಮಾನಿಕೆ ಮನುಷ್ಯರ ಕೈಯಲ್ಲಿದೆ. ಶುದ್ಧವಾದ ಗಾಳಿ, ನೀರು, ಮಣ್ಣು, ಆಹಾರಗಳಿಲ್ಲದಿದ್ದರೆ ಜೀವನವೇ ನರಕಸದೃಶ. ಆದುದರಿಂದ ಪರಿಸರದ ಪರಿಶುದ್ಧತೆ ಮತ್ತು ಸಮೃದ್ಧಿ ಯಾವುದೇ ಮತ, ಪಂಥ, ಸಂಪ್ರದಾಯಗಳಿಗೆ ಸೀಮಿತವಲ್ಲ. ಸಮಸ್ತ ಮನುಕುಲಕ್ಕೆ ಸಂಬಂಧಪಟ್ಟದ್ದು. ಮನುಷ್ಯನ ಕೈಯಲ್ಲಿರುವ ಭೂಮಿಯನ್ನು ಉಳಿಸುವುದು ಮತ್ತು ಅಳಿಸುವುದು ಅವನೇ.

 ಬೀಸುವ ಗಾಳಿ ಮಧುರವಾಗಿರಲಿ. ಹೊಳೆಗಳು ತುಂಬಿ ಹರಿಯಲಿ. ಭೂಮಿ ತುಂಬಾ ಹಸಿರು ಮೂಡಲಿ. ಹಗಲೂ- ರಾತ್ರಿ ಮಧುರ ಸುಖ ನಮ್ಮದಾಗಲಿ ಭೂಮಿ ಮಧುರವಾಗಿ ನಲಿಯಲಿ. ಆಕಾಶ ತುಂಬಾ ಮಾಧುರ್ಯ ಹರಡಲಿ ಎಂಬುದು ನಮ್ಮ ಪ್ರಾಚೀನ ಋಷಿಗಳ ಪ್ರಾರ್ಥನೆಯಾಗಿತ್ತು. ನಮ್ಮ 
ಹಿರಿಯರನ್ನು ಮೂಢರೆನ್ನುತ್ತಾ ಪುರಾಣಗಳನ್ನು ಗೊಡ್ಡು ಕಥೆಗಳೆನ್ನುತ್ತಾ ಅವೆಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸಿದ ನಾವು ನಮ್ಮನ್ನೇ ಕಳೆದುಕೊಳ್ಳುತ್ತಿದ್ದೇವೆ. 

ಪ್ರಕೃತಿಯಿಂದ ದೂರವಾಗುವ ವಿಜ್ಞಾನವನ್ನು ನಾವು ಬಹಳ ನಂಬಿದ್ದೇವೆ. ವಿಜ್ಞಾನ ಒದಗಿಸುವ ಅನುಕೂಲಗಳೇ ಪ್ರಗತಿಯೆಂದು ಭ್ರಮಿಸಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯೊಂದಿಗೆ ನಮಗುಂಟಾಗಬಹುದಾದ ದುಷ್ಪರಿಣಾಮಗಳ ಅರಿವು ನಮಗುಂಟಾಗದಷ್ಟು ನಾವು ದಡ್ಡರಾಗಿದ್ದೇವೆ. ಪರಿಸರ ವಿಜ್ಞಾನಿಗಳ ಎಚ್ಚರಿಕೆಯ ಮಾತುಗಳು ನಮಗೆ ಕೇಳುವುದೇ ಇಲ್ಲ. ಇಂದು ಕೇವಲ ಕೆಲವರ ಹಣದ ತೆವಲು ತೀರಿಸಲು ಪರಿಸರದ ಮೇಲೆ ಆಕ್ರಮಣ ನಡೆಯುತ್ತಲೇ ಇದೆ. ಕೆಲವರು ಮಾಡಿದ ಪಾಪಗಳಿಗೆ ಈ ನೆಲದ ಎಲ್ಲಾ ಜೀವಿಗಳು ಅನ್ಯಾಯವಾಗಿ ಬೆಲೆ ತೆರಬೇಕಾಗುತ್ತದೆ. 

 ವಿಷಮಿಶ್ರಿತ ಆಹಾರ ತಿನ್ನುತ್ತಾ ವಿಷಮಯ ವಾತಾವರಣದಲ್ಲಿ ವಿಷ ಜಂತುಗಳಂತೆ ಬದುಕುತ್ತಿರುವ ನಾವು ಇಡೀ ವಿಶ್ವವನ್ನು ವಿಷದ ಗೂಡಾಗಿಸುತ್ತಿದ್ದೇವೆ. ನಮ್ಮ ಆಕ್ರಮಣಕ್ಕೆ ಸಮುದ್ರವೂ ಹೊರತಲ್ಲ. ಪ್ರಕೃತಿ ಶಿಕ್ಷೆ ಕೊಡುತ್ತಾ ನೀಡುತ್ತಿರುವ ಶಿಕ್ಷಣಕ್ಕೆ ನಾವು ಪಾಠ ಕಲಿಯದೆ ಪ್ರಕೃತಿಯ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ಮುಂದುವರಿಸಿದರೆ ಈ ವಸುಂಧರೆಯನ್ನು ಕಾಪಾಡುವವರಾರು?

 ಮೊಬೈಲ್‌, ಕಂಪ್ಯೂಟರ್‌, ಕಾರು, ವಿಮಾನ ಮುಂತಾದ ವೈಜ್ಞಾನಿಕ ಕೊಡುಗೆಗಳನ್ನು ಜಾತಿ, ಮತ, ಪಂಥ, ಧರ್ಮಗಳ ಭೇದವಿಲ್ಲದೆ ಸ್ವೀಕರಿಸುವ ನಮಗೆ ಪರಿಸರ ವಿಜ್ಞಾನಿಗಳ ಮಾತನ್ನು ಪಾಲಿಸುವಲ್ಲಿ ಏಕೆ ಒಮ್ಮತವಿಲ್ಲ? ಭೂಮಿಯ ಮೇಲೆ ಮಾನವನ ಹುಟ್ಟಾಗಿ ಇಪ್ಪತ್ತು ಲಕ್ಷ ವರ್ಷಗಳಾದವೆಂದು ವಿಕಾಸವಾದಿಗಳ ಅಭಿಪ್ರಾಯ. ಇದರಲ್ಲಿ ಹತ್ತೂಂಬತ್ತು ಲಕ್ಷದ ತೊಂಬತ್ತೂಂಬತ್ತು ಸಾವಿರದ ಎಂಟುನೂರು ವರುಷಗಳ ಮನುಷ್ಯನ ಜೀವನ ಪರಿಸರವನ್ನು ಹೆಚ್ಚು ಕೆಡಿಸಲಿಲ್ಲ. ಕ್ರಿ.ಶ.ಸಾವಿರದ ಎಂಟುನೂರರಲ್ಲಿ ಆರಂಭವಾದ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ ಇಡೀ ವಿಶ್ವದಲ್ಲಿ ಪರಿಸರನಾಶಕ್ಕೆ ನಾಂದಿ ಹಾಡಿತು ಎಂಬುದು ಪರಿಸರ ವಿಜ್ಞಾನಿಗಳ ಅಭಿಪ್ರಾಯ. ಇಂದು ವಿಶ್ವವನ್ನೇ ಕಂಗೆಡಿಸುತ್ತಿರುವ ಪರಿಸರ ನಾಶದ ದುಷ್ಪರಿಣಾಮಗಳ ಸಮಸ್ಯೆಯ ಪರಿಹಾರ ಹೇಗೆಂಬುದೇ ಮನುಕುಲದ ಮುಂದೆ ಇರುವ ದೊಡ್ಡ ಸವಾಲು.

ಆಧುನಿಕ ವಿಜ್ಞಾನದ ಪ್ರಕಾರ ಡಿ.ಎನ್‌.ಎ.ಅಣುಗಳೇ ಜೀವ ಸೃಷ್ಟಿಯ ಮೂಲ. ಮೀನಿನಿಂದ ಮಾನವನ ತನಕ ಜೀವರಾಶಿಗಳು ಈ ತತ್ವದ ಕಾರಣದಿಂದಲೇ ಹುಟ್ಟಿದ್ದು. ಜೀವವಿಕಾಸ ಪ್ರಕೃತಿಯೊಳಗೆ ನಡೆಯುವ ಅನಂತ ಪ್ರಕ್ರಿಯೆ. ವಿವೇಕವಿರುವ ಮನುಷ್ಯ ಪ್ರಕೃತಿಯ ಜೀವಸೃಷ್ಟಿಯೊಳಗಿನ ಅದ್ಭುತ ಕೌಶಲ. ಆತನೇ ಎಲ್ಲಾ ಜೀವಿಗಳೊಂದಿಗೆ ಭೂಮಿಯನ್ನು ಕಾಯಬೇಕು. ಆದರೆ ಆತ ಅದರ ಪರಿವೆಯೇ ಇಲ್ಲದಂತೆ ವರ್ತಿಸುತ್ತಾನೆ. ಮನುಷ್ಯ ತನ್ನ ಪರಿಸರದೊಂದಿಗೆ ವ್ಯವಹರಿಸುವ ರೀತಿಯನ್ನು ಕಂಡಾಗ ಭೂಮಿಯ ನಾಶಕ್ಕಾಗಿಯೇ ಮನುಷ್ಯ ಪ್ರಾಣಿಯ ಹುಟ್ಟಾಯಿತೇ ಎಂದೆನಿಸುತ್ತದೆ. ಏಕೆಂದರೆ ಬೆಳವಣಿಗೆ ಪೂರ್ಣಗೊಂಡಾಗ ನಾಶವಾಗುವುದು ಖಂಡಿತ. ಪ್ರಕೃತಿಯ ಎಲ್ಲಾ ಪ್ರಾಣಿ-ಪಕ್ಷಿಗಳೂ ಮರಗಿಡಗಳೂ ನಿರಂತರ ಈ ಕ್ರೂರ ಸತ್ಯವನ್ನು ತೋರಿಸುತ್ತಲೇ ಇರುತ್ತವೆ. ಹಸನಾದ ಭೂಮಿಯಿಂದಲೇ ಸವಿಯಾದ ಸುಖವೆಂಬುದು ತಿಳಿದಿದ್ದರೂ ಮನುಕುಲವೇಕೆ ವಸುಧೆಯ ಸಮೃದ್ಧಿಯನ್ನು ಕಾಪಾಡುವುದಿಲ್ಲ? ನಮಗೆ ಏಕೈಕ ಆಸರೆಯಾಗಿರುವ ಭೂಮಿಯಲ್ಲಿ ಸ್ವರ್ಗದಂತಹ ನಾಡುಕಟ್ಟುವ ಬದಲು ನರಕದ ಗೂಡನ್ನೇಕೆ ಕಟ್ಟುತ್ತಿದ್ದೇವೆ?

ತಾರಾನಾಥ ವರ್ಕಾಡಿ 

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.