ತಾಲೂಕು ಜಾನಪದ ಪರಿಷತ್: ಮತದಾನ ಜಾಗೃತಿ ಚಿತ್ರಕಲಾ ಸ್ಪರ್ಧೆ
Team Udayavani, Apr 17, 2019, 6:30 AM IST
ಮಡಿಕೇರಿ: ಮತದಾರರಲ್ಲಿ ತಮ್ಮ ಹಕ್ಕಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ , ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿತ ಮತ ದಾರರ ಜಾಗೃತಿ ಕುರಿತ ಬೃಹತ್ ಕ್ಯಾನ್ವಾಸ್ ಅಪಾರ ಜನ ಮೆಚ್ಚುಗೆ ಗಳಿಸಿತು.
ಮಡಿಕೇರಿಯ ರಾಜಾಸೀಟ್ ನಲ್ಲಿ ವಿಶ್ವ ಚಿತ್ರ ಕಲಾ ದಿನಾಚರಣೆ ಸಂದರ್ಭ ಆಯೋಜಿತ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಚಿತ್ರಕಲಾವಿದ ಬಿ.ಆರ್.ಸತೀಶ್ ರಚಿಸಿದ ಮತದಾನದ ಮಹತ್ವ ಬಿಂಬಿಸುವ ಕೈಬೆರಳಿನ ಬೃಹತ್ ಚಿತ್ರಕ್ಕೆ ಬಣ್ಣ ಸಿಂಪಡಣೆ ಮೂಲಕ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಅಧ್ಯಕ್ಷೆ ಲಕ್ಷ್ಮೀಪ್ರಿಯ ಉದ್ಘಾಟಿಸಿದರು.
ಮತದಾರರಲ್ಲಿ ಮತದಾನ ಸಂದರ್ಭ ರಾಜಕೀಯ ಪಕ್ಷಗಳ ಆಮಿಷಕ್ಕೆ ಬಲಿಯಾ ಗದಿರಿ ಎಂಬುದೂ ಸೇರಿದಂತೆ ವಿವಿಧ ಜಾಗೃತಿ ಸಂದೇಶಗಳ ಬ್ಯಾನರ್ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಕೆ.ಲಕ್ಷ್ಮೀಪ್ರಿಯಾ ಅವರು 18 ರಂದು ನಡೆಯುವ ಮತ ದಾನದಂದು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ದಾನ ಮಾಡುವಂತಾಗಬೇಕು ಎಂದು ಕೋರಿದರು.
ಈಗಾಗಲೇ 10 ಸಖೀ ಮತಗಟ್ಟೆಗಳು, 5 ಸಾಂಪ್ರದಾಯಿಕ ಮತಗಟ್ಟೆಗಳು, 1 ವಿಶೇಷಚೇತನರ ಮತಗಟ್ಟೆ ಹಾಗೂ ನಗರಸಭೆಯಲ್ಲಿ ಒಂದು ಮಾದರಿ ಮತಗಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದರು. ಜಿಲ್ಲಾ ಜಾನದಪ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಪ್ರತಿಯೊಬ್ಬರ ಮತ ಅತ್ಯ ಮೂಲ್ಯವಾಗಿದ್ದು, ಒಂದೊಂದು ಮತವೂ ರಾಷ್ಟ್ರದ ಚರಿತ್ರೆಯನ್ನೇ ಬದಲಿಸಲಿದೆ. ಆದ್ದರಿಂದ ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಕೊ. ಜಿ. ಕಾ.ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕೊಡಗು ಪ್ರಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸ್ವೀಪ್ ಜಿಲ್ಲಾ ರಾಯಭಾರಿ ಭಾಗೀರಥಿ ಹುಲಿತಾಳ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮತದಾನವಾಗುತ್ತದೆ. ಅದೇ ರೀತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿಯೂ ಹೆಚ್ಚಿನ ಮತದಾನ ಆಗಬೇಕು. ಮತ ದಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ವಿರಾಜಪೇಟೆಯ ಗಾಯಕರಾದ ಜಾನಪದ ಪರಿಷತ್ ಸದಸ್ಯರೂ ಆಗಿರುವ ಬಿ.ಕೆ.ಮೋಹನ್ , ಕ್ಲಿಫರ್ಡ್ ಡಿಮೆಲ್ಲೋ ಮತ್ತು ಟಾಮಿ ಥೋಮಸ್ ತಂಡದಿಂದ ಮತದಾನದ ಬಗ್ಗೆ ವಿಶೇಷವಾದ ಹಾಡು ಗಾರಿಕೆ ಮನಸೆಳೆಯಿತು.
ಮ. ತಾ. ಜಾ.ಪ. ಅಧ್ಯಕ್ಷ ಅನಿಲ್ ಎಚ್. ಟಿ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್.ರವಿಶಂಕರ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಮ್ತಾಜ್, ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಕೊಡಗು ಜಿಲ್ಲಾ ರಾಯಭಾರಿ ಈಶ್ವರಿ, ಹಿರಿಯ ಜಾನಪದ ಕಲಾವಿದೆ ಸುಳ್ಳಿಮಾಡ ಗೌರಿ ನಂಜಪ್ಪ, ಎಂ.ಕೆ.ಅರುಣ್ , ಸಂಗೀತಾ ಪ್ರಸನ್ನ, ಅಂಬೆಕಲ್ ನವೀನ್ ಕುಶಾಲಪ್ಪ ಸೇರಿದಂತೆ ರೋಟರಿ ಮಿಸ್ಟಿ ಹಿಲ್ಸ್, ಜಯಾಚಿಣ್ಣಪ್ಪ, ಪಿ.ಆರ್.ರಾಜೇಶ್, ನಿರ್ದೇಶಕ ಚೆಯ್ಯಂಡ ಸತ್ಯ, ಮೇರಿ ನಾಣಯ್ಯ ಸೇರಿದಂತೆ ಅನೇಕರು ಪಾಲ್ಗೊಂಡು ನಾನೂ ಸ್ಮಾರ್ಟ್ ಮತದಾರ ಎಂಬ ಸಂದೇಶಕ್ಕೆ ಸಹಿ ಹಾಕಿ ಮತದಾನದ ಮಹತ್ವ ಸಾರಿದರು. ಮಧ್ಯಾಹ್ನದವರೆಗೂ ರಾಜಾಸೀಟ್ ನಲ್ಲಿ ಪ್ರವಾಸಿಗರೂ ಸೇರಿದಂತೆ ನೂರಾರು ಸಾರ್ವಜನಿಕರು ಕ್ಯಾನ್ವಸ್ ನಲ್ಲಿ ಸಹಿ ಹಾಕಿದರು. ಮತದಾನ ಸಂಬಂಧಿತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ವಿಭಾಗದಲ್ಲಿ ಆಯೋಜಿತ ಚಿತ್ರಕಲಾ ಸ್ಪರ್ಧೆಯಲ್ಲಿ 148 ಸ್ಪರ್ಧಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮತದಾನ ಮಹತ್ವ
ಚಿತ್ರಕಲಾವಿದ ಬಿ.ಆರ್.ಸತೀಶ್ ಮಾತನಾಡಿ ಒಂದು ಚಿತ್ರ ಸಾವಿರ ಪದಗಳಿಗೆ ಸಮವೆಂಬಂತೆ ಚಿತ್ರಕಲೆ ಮೂಲಕ ಮತದಾನ ಮಹತ್ವ ಸಾರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಅರ್ಹರು ಮತದಾನ ಮಾಡುವಂತಾಗಬೇಕು ಎಂದು ಹೇಳಿದರು.