ಪವಿತ್ರ ವನದ ಕಾರ್ಯ ಸಮಯದಲ್ಲಿ ಮಾರ್ಪಾಡು
ಸಾರ್ವಜನಿಕರ ಆಕ್ಷೇಪಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ
Team Udayavani, Apr 28, 2019, 1:41 PM IST
ಸಾಗರ: ವರದಹಳ್ಳಿ ರಸ್ತೆಯಲ್ಲಿ ಹೆಲಿಪ್ಯಾಡ್ ಎದುರಿನ ಪವಿತ್ರ ವನವನ್ನು ಈಗ ಸಂಜೆ 7-30ರವರೆಗೂ ತೆರೆಯಲಾಗುತ್ತಿದೆ.
ಸಾಗರ: ನಗರದ ಹೊರವಲಯದ ವರದಹಳ್ಳಿ ರಸ್ತೆಯಲ್ಲಿ ಹೆಲಿಪ್ಯಾಡ್ ಎದುರಿನ ಪವಿತ್ರ ವನವನ್ನು ಅದನ್ನು ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಜನ ಬಳಕೆಗೆ ಬಿಡದೆ ಸಂಜೆ ಆರಕ್ಕೇ ಬೀಗ ಝಡಿಯುತ್ತಿದ್ದುದರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿರುವುದನ್ನು ಪತ್ರಿಕೆ ಸುದ್ದಿ ಮಾಡಿದ ಮೇಲೆ ಇಲಾಖೆ ಎಚ್ಚೆತ್ತುಕೊಂಡು ಪ್ರವೇಶ ಸಮಯವನ್ನು ಬದಲಾಯಿಸಿರುವ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಪಾರ್ಕ್ನ್ನು ಸಂಜೆ 7-30ರವರೆಗೂ ತೆರೆದಿಡುವ ವ್ಯವಸ್ಥೆ ಮಾಡಲಾಗಿದೆ.
ಅಪರೂಪದ ಮರ ಗಿಡಗಳು, ನೀರಿನ ಝರಿ, ಪಾದಚಾರಿ ಮಾರ್ಗ, ಚಿಣ್ಣರ ಆಟದ ಉಪಕರಣಗಳು, ವಿಶ್ರಾಂತಿ ಕಟ್ಟೆ, ಚಾವಡಿ ಮೊದಲಾದವುಗಳನ್ನು ಹೊಂದಿರುವ ಈ ಪಾರ್ಕ್ನ್ನು ಬೆಳಗ್ಗೆ 10ರಿಂದ ಸಂಜೆ ಆರರವರೆಗೆ ಮಾತ್ರ ತೆರೆಯಲಾಗುತ್ತಿತ್ತು. ಇದರಿಂದ ಇಳಿ ಸಂಜೆಯಲ್ಲಿ ಉದ್ಯಾನವನದಲ್ಲಿ ವಾಯುವಿಹಾರಕ್ಕೆ ಬರುತ್ತಿದ್ದ ನಾಗರಿಕರು ಹಾಗೂ ಆಟದ ಸಂಭ್ರಮ ಅನುಭವಿಸಬೇಕಿದ್ದ ಮಕ್ಕಳಿಗೆ ತೀವ್ರ ನಿರಾಶೆಯಾಗುತ್ತಿತ್ತು. ಈ ಕುರಿತು ಉದಯವಾಣಿ ಏಪ್ರಿಲ್ 19ರಂದು ವರದಿ ಮಾಡಿತ್ತು.
ಜನ ಮತ್ತು ಮಾಧ್ಯಮಗಳ ಆಕ್ಷೇಪಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಇಲ್ಲಿನ ನಿರ್ವಹಣಾ ಸಿಬ್ಬಂದಿಯ ಕೆಲಸದ ಸಮಯವನ್ನು ಬದಲಿಸಿದ್ದಾರೆ. ಈಗ ಸಿಬ್ಬಂದಿ ಬೆಳಗ್ಗೆ 10ರ ಬದಲು 12ಕ್ಕೆ ಆಗಮಿಸಿ ರಾತ್ರಿ 7-30ರವರೆಗೂ ಉದ್ಯಾನವನವನ್ನು ತೆರೆದಿಡುತ್ತಿದ್ದಾರೆ.