“ಕಲಿಕೆಯಲ್ಲಿ ಯಶಸ್ವಿಯಾಗಲು ಪೂರಕ ವಾತಾವರಣ ಅತ್ಯಗತ್ಯ’
Team Udayavani, Jun 20, 2019, 6:02 AM IST
ಕೋಟ: ಮಕ್ಕಳ ಸಮಗ್ರ ಬೆಳವಣಿಗೆ ಹಾಗೂ ಕಲಿಕೆಯಲ್ಲಿ ಯಶಸ್ವಿಯಾಗಲು ಮನೆ ಹಾಗೂ ಶಾಲೆಯಲ್ಲಿ ಪೂರಕ ವಾತಾವರಣ ತೀರಾ ಅಗತ್ಯ. ಅಂತಹ ಉತ್ತಮ ವಾತಾವರಣ ವಿವೇಕ ವಿದ್ಯಾಸಂಸ್ಥೆಯಲ್ಲಿದೆ ಎಂದು ಚಿತ್ರಪಾಡಿ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ತಿಳಿಸಿದರು.
ಅವರು ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ಆಶ್ರಯದಲ್ಲಿ ಇಲ್ಲಿನ ಸ್ವರ್ಣಭವನದಲ್ಲಿ ನಡೆದ ಉಚಿತ ನೋಟ್ಸ್ ಪುಸ್ತಕ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ಹಾಗೂ ದಾನಿಗಳಾದ ಎಂ.ಎನ್. ಮಧ್ಯಸ್ಥ ಅವರು ಪುಸ್ತಕ ವಿತರಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕ ಜಗದೀಶ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನಿಗಳು ನೀಡಿದ ಕೊಡುಗೆಯನ್ನು ಸದುಪ ಯೋಗಪಡಿಸಿಕೊಳ್ಳಬೇಕು ಹಾಗೂ ಸಹಕಾರ ನೀಡಿದವರನ್ನು ಸದಾ ನೆನಪಿಟ್ಟುಕೊಳ್ಳಬೇಕೆಂದರು.
ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ವೆಂಕಟೇಶ ಉಡುಪ ಸ್ವಾಗತಿಸಿ, ಶಿಕ್ಷಕಿ ಮಹಾಲಕ್ಷ್ಮೀ ನಿರೂಪಿಸಿ, ಹಿರಿಯ ಶಿಕ್ಷಕರಾದ ನರೇಂದ್ರಕುಮಾರ್ ಕೋಟ ವಂದಿಸಿದರು.