ಆಗುಂಬೆ ಘಾಟಿ ಗುಡ್ಡ ಕುಸಿತ ಭೀತಿ, ಅಧಿಕ ಭಾರದ ವಾಹನ ಸಂಚಾರಕ್ಕೆ ನಿಷೇಧ
Team Udayavani, Aug 16, 2019, 2:51 PM IST
ಶಿವಮೊಗ್ಗ: ಕಳೆದ ಕೆಲ ದಿನಗಳಿಂದ ಭಾರೀ ಮಳೆ ಆಗುತ್ತಿದ್ದು ಪರಿಣಾಮವಾಗಿ ಜನ ಜೀವನದೊಟ್ಟಿಗೆ ಕೆಲ ಪ್ರದೇಶದಲ್ಲಿ ಸಂಚಾರ ಮಾರ್ಗ ಅಸ್ತವ್ಯಸ್ತಗೊಂಡಿವೆ.
ಮಲೆನಾಡಿನಲ್ಲಿ ಭಾಗದಲ್ಲಿ ಅಧಿಕ ಮಳೆ ಆಗುತ್ತಿದ್ದು ಹಲವಡೆ ಗುಡ್ಡ ಕುಸಿತದ ಭೀತಿಯಿಂದ ಸಂಚಾರ ಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ.ತೀರ್ಥಹಳ್ಳಿ ಹಾಗೂ ಉಡುಪಿ ಮಧ್ಯದ ಮಾರ್ಗ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿಯುವ ಆತಂಕವಿದ್ದು ಅಧಿಕ ಭಾರ ಹೊತ್ತು ಸಾಗುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಬಿ.ಶಿವಕುಮಾರ್ ಆದೇಶಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿದ ಪರಿಣಾಮವಾಗಿ ಮೇ ಒಂದು ತಿಂಗಳ ಕಾಲ ಶಾಶ್ವತ ಕಾಮಗಾರಿಯ ಅನುಕೂಲಕ್ಕಾಗಿ ವಾಹನ ಸಂಚಾರ ನಿಷೇಧಿಸಲಾಗಿತ್ತು.ಕೆಲ ಸಮಯದ ಬಳಿಕ ಮಿನಿ ಬಸ್, ಜೀಪು, ವ್ಯಾನ್, ಕಾರು, ದ್ವಿಚಕ್ರ, ಎಲ್ಸಿವಿ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. 12 ಟನ್ಗಿಂತ ಕಡಿಮೆ ಇರುವ ವಾಹನಗಳಿಗೆ ಮಳೆಗಾಲ ಮುಗಿಯುವವರೆಗೆ ನಿಷೇಧ ಹೇರಲಾಗಿತ್ತು. ಈಗ ಅದೇ ಆದೇಶವನ್ನು ಮುಂದುವರೆಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.