ಸಂಸ್ಕೃತಿ ಕಟ್ಟಲು ಯಂತ್ರಗಳಿಗೆ ಸಾಧ್ಯವಿಲ್ಲ!


Team Udayavani, Oct 9, 2019, 4:59 AM IST

s-8

ಹಿನ್ನೆಲೆಯಾಗಿ ಮೂರು ವಿಷಯಗಳಿವೆ. ಒಂದನೆಯದು ಕೆಲ ತಿಂಗಳ ಹಿಂದೆ ಕರ್ನಾಟಕದ ರಾಜಕೀಯ ಅಸಂಗತ ನಾಟಕದ ಸಂದರ್ಭದಲ್ಲಿ ನಾಯಕರ ಬಾಯಿಂದ ಹೊರಬಿದ್ದ ಮೂರನೆಯ ದರ್ಜೆಯ ನಾಟಕಗಳಲ್ಲಿ ಕೇಳಿಬರುವಂತಹ ಮಾತುಗಳು. ಉದಾಹರಣೆಗೆ “”ಬಳೆ ಹಾಕ್ಕೊಳ್ಳಿ, ಸೀರೆ ಉಟ್ಕೊಳ್ಳಿ” “”ನಾವೇನು ಕಳ್ಳೇಕಾಯಿ ತಿನ್ನೋಕೆ ಇಲ್ಲಿ ಇದ್ದೇವಾ?” ಇತ್ಯಾದಿ. ಹಲವೊಮ್ಮೆ ಇದು ಅತ್ಯಂತ ಕೆಳಮಟ್ಟಕ್ಕೆ ಹೋಯಿತು: “”ಕಪಾಳಕ್ಕೆ ಹೊಡೀರಿ, ಉಠಾಬೆಸ್‌ ತೆಗಿಸ್ರಿ” ಇತ್ಯಾದಿ ಸಂತೆಯ ಜಗಳದ ರೀತಿಯ ಕಹಿ ಮಾತುಗಳು ಸಾರ್ವಜನಿಕ ಮನಸ್ಸುಗಳನ್ನು ತುಂಬಿಕೊಂಡವು.

ಮಾತಿನ ಸವಿ ಮತ್ತು ಸೌಂದರ್ಯ ಸಾರ್ವಜನಿಕ ವಲಯಗಳಿಂದ ಮಾಯವಾಗಿವೆ. ಇತಿಹಾಸದ ಪ್ರದರ್ಶನದ ವಿಷಯವಂತೂ ಬೇಡವೇ ಬೇಡ‌. ವಿರೂಪವಾಗಿ, ವಿಕಾರವಾಗಿ ಹೋಗಿದೆ. ಈ ಸಮಯದಲ್ಲಿಯೇ ಕಸ್ತೂರಿರಂಗನ್‌ ಮತ್ತವರ ತಂಡ ನಿರೂಪಿಸಿರುವ ಹೊಸ ಶಿಕ್ಷಣ ನೀತಿಯ ಕರಡನ್ನು ಚರ್ಚೆಗೆ ಇಡಲಾಗಿದೆ. ಈ ಚರ್ಚೆಯ ಉದ್ದೇಶಗಳಲ್ಲೊಂದು ದೇಶದಲ್ಲಿ ಮಾನವಿಕಗಳನ್ನು ಹೇಗೆ ಕಲಿಸಬೇಕು ಎನ್ನುವುದು. ಮೂರನೆಯ ವಿಷಯ, ಇತ್ತೀಚೆಗೆ ತಮ್ಮ ನಿವೃತ್ತಿಯಿಂದ ಸುದ್ದಿಯಾದ ಚೀನಾದೇಶದ ಪ್ರಸಿದ್ಧ ಕಂಪನಿ ಆಲಿಬಾಬಾದ ಸ್ಥಾಪಕ ಜಾಕ್‌ ಮಾ ಹೇಳಿದ್ದು. ಏನೆಂದರೆ “ಮುಂದಿನ ಜನಾಂಗಕ್ಕೆ ಅವಶ್ಯಕವಾಗಿ ನಾವು ನೀಡಬೇಕಾಗಿರುವ ಶಿಕ್ಷಣ ಕೌಶಲಗಳು ಮಾನವತೆಗೆ ಸಂಬಂಧಿಸಿದ್ದು ಆಗಿರಬೇಕು’. ಅಂದರೆ, ಯಂತ್ರಗಳು ತಯಾರಿಸಲು ಸಾಧ್ಯವಿರ ದಿದ್ದನ್ನು ನಾವು ಕಲಿಸಬೇಕು ಎಂಬುದು.

ನಾವು ಸಮಾಜ ಕಟ್ಟುವ ಶಿಕ್ಷಣ ನೀಡಬೇಕಿದೆ. ಪ್ಲೇಟೋ ಹೇಳಿದ್ದೂ ಇದೇ. ಭಾಷೆ ಮತ್ತು ಇತಿಹಾಸ ಸಮಾಜ ಕಟ್ಟುವಿಕೆಯ ಪರಿಕರಗಳಾದ್ದರಿಂದ ಹೊಸ ಶಿಕ್ಷಣ ನೀತಿಯ ಚರ್ಚೆಯ ಭಾಗವಾಗಿ ಕೆಲವು ವಿಷಯಗಳನ್ನು ಇಲ್ಲಿ ಹೇಳಲಾಗುತ್ತಿದೆ.

ವಿಷಯ ಹೇಳುವ ಮೊದಲು ಕೆಲವು ಮಾತುಗಳು. ಕೆಲವೇ ವರ್ಷಗಳ ಹಿಂದೆ ನಮ್ಮ ಸಾರ್ವಜನಿಕ ವಲಯದ ಮಾತುಗಳು ಭಾಷಾ ಸೌಂದರ್ಯ, ಅಭಿರುಚಿ, ಸಂಸ್ಕೃತಿ ಮತ್ತು ಐತಿಹಾಸಿಕತೆ ಯಿಂದ ತುಂಬಿದ್ದವು. ನೆಹರೂ ಮಾತಿಗೆ ನಿಂತರೆ ಇಡೀ ಜಗತ್ತಿನ ಜ್ಞಾನ ಧರೆಗಿಳಿಯುತ್ತಿತ್ತು. ಸೌಂದರ್ಯ ಸ್ವರ್ಗದಿಂದ ಕೆಳಗಿಳಿಯುತ್ತಿತ್ತು. ವಾಜಪೇಯಿ ಕಾವ್ಯಧಾರೆಯನ್ನು ಸುರಿಸುತ್ತಿದ್ದರು. ಬೇರೆಯ ರಾಜಕಾರಣಿಗಳು ಕೂಡ ಮಾತಿನ ರಸದಲ್ಲಿ ಕಡಿಮೆ ಏನೂ ಇರಲಿಲ್ಲ. ಭಾಷಣಗಳಲ್ಲಿ ಕಬೀರ, ತುಳಸಿದಾಸ ರಾಮಾಯಣ-ಮಹಾಭಾರತದ ಕಥೆಗಳು, ಜನಪದ ಕಥೆಗಳು, ವಚನಾಮೃತ, ದಾಸವಾಣಿ, ಪಂಪ ಭಾರತ ಜೊತೆ ಜೊತೆಗೇ ಹಾಸ್ಯ ಚಟಾಕಿಗಳು ಹರಿದು ಬರುತ್ತಿದ್ದವು. ಜ್ಞಾನ ಅನಾವರಣ ಗೊಳ್ಳುತ್ತಿತ್ತು. ಮಾಧುರ್ಯದ ಸಿಂಚನವಿರುತ್ತಿತ್ತು. ಹಾಸ್ಯ ಪ್ರಜ್ಞೆ ಇರುತ್ತಿತ್ತು. ವಾಲ್ಟೆàರ್‌, ಎಮ್‌.ಎನ್‌, ರಾಯ್‌, ಗಾಂಧಿ, ಮಾರ್ಕ್ಸ್, ಅಂಬೇಡ್ಕರ್‌, ಮಾವ್‌ತ್ಸೆತುಂಗರ ಕುರಿತು ರೆಫ‌ರೆನ್ಸ್‌ ಇಲ್ಲದೆ ನಾಯಕರ ಮಾತು ಮುಗಿಯುತ್ತಿರಲಿಲ್ಲ.

ಸ್ಪಷ್ಟವಾಗಿ ನೆನಪಿದೆ. ಅಂದಿನ ದಿನಗಳಲ್ಲಿ ಮೈಕ್‌ಗಳು ಸರಿ ಇರಲಿಲ್ಲ. ಆದರೂ ಚಂದ್ರಶೇಖರ್‌, ಆಡ್ವಾಣಿ, ಇಂದಿರಾಗಾಂಧಿ, ರಾಮಕೃಷ್ಣ ಹೆಗಡೆ ಅವರ ಮಾತುಗಳನ್ನು ಆಲಿಸಲು ಜನ ಮೈಲಿಗಟ್ಟಲೆ ನಡೆಯುತ್ತಿದ್ದರು. ಮಾತುಗಳು (ಖ್ಯಾತ ಕವಿ ಬೇಂದ್ರೆಯವರ ಕಾವ್ಯವನ್ನು ಸ್ಮರಿಸಿ ಹೇಳುವುದೆಂದರೆ) ಅಲ್ಲಿ ಮಿನಮಿನ ಮಿನುಗುತ್ತಿದ್ದವು. ಮಿಂಚುತ್ತಿದ್ದವು. ಮೂಡು ತ್ತಿದ್ದವು. ಏನೋ ಒಂದು ಬೆಳಗುತ್ತಿದ್ದವು. ಭಾಷಣಗಳಿಗೆ, ಮಾತುಗಳಿಗೆ ಬೇರೆಯದೇ ಒಂದು ಸ್ನಿಗ್ಧತೆ, ರಂಗು, ರೂಪು, ಮಾಧುರ್ಯ ಮತ್ತು ಸೂಕ್ಷ್ಮತೆ ಇದ್ದವು. ಭಾಷೆಗಳು ಜೀವಂತವಾಗಿದ್ದವು.

ಈ ಮಾತನ್ನು ಇನ್ನೂ ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಅಂದಿನ ಸಿನಿಮಾಗಳ ಡೈಲಾಗ್‌ಗಳನ್ನು ಗಮನಿಸಬೇಕು. ಹಾಡುಗಳನ್ನೂ ನೋಡಿಕೊಳ್ಳಬೇಕು. ಉದಾಹರಣೆಗೆ, ಡಾ|| ರಾಜಕುಮಾರ್‌ ಹಾಗೂ ಅವರ ಸಮಕಾಲೀನರ ಸಿನಿಮಾಗಳ ಸಂಭಾಷಣೆಗಳು ಮತ್ತು ಹಾಡುಗಳು. ಎಂದೂ ಎಂದೆಂದೂ ಮರೆಯಲಾಗದ ಭಾಷೆಯ ಶಕ್ತಿ ಮತ್ತು ಮಾಧುರ್ಯ ಅವುಗಳಲ್ಲಿದೆ. ಅಂದಿನ ಸಮಾಜವನ್ನು ಕಟ್ಟಿದ್ದು ಇಂತಹ ಭಾಷೆ. ಆಗಿನ ಭಾಷೆಯನ್ನು ಇಂದಿನ ಅದೇ ವಲಯದ ಭಾಷೆಗೆ ಹೋಲಿಸಿದರೆ ಬಂದಿರುವ ಕುಸಿತ ಅರ್ಥವಾಗುತ್ತದೆ. ಇಂದು ಏನಾಗಿದೆ ಎಂದರೆ ಸಾರ್ವಜನಿಕ ಪರಿಭಾಷೆ ಹೊಡೆಯುವ, ಹೊಡೆಯಿಸುವ, ಹೆದರಿಸುವ, ಅಸಹ್ಯ ಮಾತನಾಡುವ, ಧ್ವಂಧ್ವಾರ್ಥದ ಭಾಷೆಯಾಗಿಹೋಗಿದೆ. ಕೀಳುಮಾತು ವಾತಾವರಣವನ್ನು ತುಂಬಿಕೊಂಡಿದೆ. ಇದು ಸಮಾಜಕ್ಕೆ ಕೆಟ್ಟದ್ದು ಎನ್ನುವುದು ಎಲ್ಲರಿಗೂ ಗೊತ್ತು.

ಹೋಗಿರುವುದು ಭಾಷಾ ಸಾಮರ್ಥ್ಯ ಮಾತ್ರವೇ ಅಲ್ಲ. ಐತಿಹಾಸಿಕತೆಯ ಜ್ಞಾನ ಕೂಡ. ಇತಿಹಾಸದ ವೀರರ ಸ್ಲೋಗನ್‌ಗಳು, ಹೇಳಿಕೆಗಳು ಮೊದಲು ಒಂದು ಪೀಳಿಗೆಗೇ ದಾರಿದೀಪಗಳಾಗಿದ್ದವು. ಉದಾಹರಣೆಗೆ-ಜಾನ್‌ ಕೆನಡಿ ಹೇಳಿದ ಪ್ರಜಾಪ್ರಭುತ್ವದ ಕುರಿತಾಗಿನ ಹೇಳಿಕೆ: “”ಡೆಮೊಕ್ರಾಸಿ ಇಸ್‌ ಎ ಗವರ್ನಮೆಂಟ್‌ ಆಫ್ ದ ಪೀಪಲ್‌…” ಜಗತ್ತಿನ ಲಕ್ಷಾಂತರ ಜನರ ಬಾಯಲ್ಲಿ ಇತ್ತು. ಹಾಗೆಯೇ ಗಾಂಧಿ ಹೇಳಿದ ಮಾತು, “”ಡೂ ಆರ್‌ ಡೈ!(ಮಾಡು ಇಲ್ಲವೇ ಮಡಿ) ಅಥವಾ ತಿಲಕರ, “”ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು” ಇತ್ಯಾದಿ ಮೈನವಿರೇಳಿಸುವ ಮಾತುಗಳು ಸಾರ್ವಜನಿಕ ಇತಿಹಾಸದಲ್ಲಿ ದಾಖಲಾಗಿ ಹೋಗಿವೆ. ದುರದೃಷ್ಟವೆಂದರೆ ಯಾಕೋ ಈಗಿನ ರಾಜಕಾರಣಿಗಳು ಇಂತಹ ಮರೆಯಲಾರದ ಮಾತುಗಳನ್ನು ಆಡುವುದೇ ಇಲ್ಲ.

ಇದಕ್ಕೂ ಮಿಗಿಲಾಗಿ ಇತಿಹಾಸದ ಶ್ರೇಷ್ಠ ಹೀರೋಗಳು ಈಗ ಎಲ್ಲಿಯೋ ಹೊರಟು ಹೋಗಿದ್ದಾರೆ. ಅಂದಿನ ವೀರರು, ಸಂತರು, ಜ್ಞಾನಿಗಳು ಸೇರಿ ಕಟ್ಟಿಕೊಟ್ಟ ಸಂಸ್ಕೃತಿ ಅಥವಾ ಸಂಸ್ಕೃತಿಗಳೂ ಸಮಾಜವನ್ನು ಬಿಟ್ಟು ಹೊರಟು ಹೋಗುವಂತೆ ಅನಿಸುತ್ತಿದೆ. ನಮಗೆ ತಿಳಿದಿರುವಂತೆ ಇತಿಹಾಸ ನಾಶವಾದರೆ, ಸಂಸ್ಕೃತಿ ನಾಶವಾದರೆ ಒಂದು ನಾಗರಿಕತೆಯೇ ಅಪಾಯದಲ್ಲಿ ಸಿಕ್ಕಿಕೊಳ್ಳುತ್ತವೆ. ಸಮಾಜದೊಂದಿಗೆ, ಪ್ರಕೃತಿಯೊಂದಿಗೆ ಬೆರೆತು ಸಮನ್ವಯ ಸಾಧಿಸಿ ಬದುಕುವುದನ್ನು ಸಂಸ್ಕೃತಿಗಳು ಹೇಳಿಕೊಡುತ್ತಿದ್ದವು. ಅಂತಹ ದಾರಿ-ದೀಪಗಳು ಇಂದು ನಂದಿ ಹೋದಂತೆ ಅನಿಸುತ್ತಿವೆ. ಏಕೆಂದರೆ ಇತಿಹಾಸ ಶಾಲೆಗಳಲ್ಲಿ ಅಪ್ರಸ್ತುತವಾಗಿ, ಪ್ರಯೋಜನಕರ ವಲ್ಲದ ವಿಷಯ  ವಾಗಿ ಹೋಗಿದೆ. ಹೀಗಾಗಿ ನಾವು ಮಹತ್ವವಾಗಿ ಚರ್ಚಿಸ ಬೇಕಿರುವುದು ನಮ್ಮ ಶಾಲೆ-ಕಾಲೇಜುಗಳಲ್ಲಿ ಭಾಷೆ ಮತ್ತು ಇತಿಹಾಸದ ಅಧ್ಯಯನಗಳನ್ನು ಹೇಗೆ ಪುನರುಜ್ಜೀವ ಗೊಳಿಸುವುದು ಎನ್ನುವುದು.

ಕಾರಣಗಳನ್ನು ಅರಿತು ಕೊಂಡರೆ ಸಮಸ್ಯೆಯಿಂದ ಹೊರಬರುವ ದಾರಿಗಳು ಗೋಚರಿಸುತ್ತವೆ. ಮೂಲ ಕಾರಣ ಇರುವುದು ಶಿಕ್ಷಣದ ನೀತಿ ನಿರೂಪಣೆಯ ಸಮಸ್ಯೆಯಲ್ಲಿ. ಉದಾಹರಣೆಗೆ, ಮಕ್ಕಳು ಪ್ರಾಥಮಿಕ ಹಂತದಿಂದ ಪದವಿ ಹಂತದ ತನಕ ಯಾವ ರೀತಿಯಲ್ಲಿ ಭಾಷೆಯನ್ನು ಕಲಿಯಬೇಕು ಎನ್ನುವ ಕುರಿತು ನೀತಿಗಳೇ ಇಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಶೈಕ್ಷಣಿಕ ಹಂತಗಳಲ್ಲಿ ಬೇರೆ ಬೇರೆ ನೀತಿಗಳಿವೆ. ಅಥವಾ ನೀತಿಗಳೇ ಇಲ್ಲ. ಯಾವ ಭಾಷೆ ಕಂಪಲ್ಸರಿಯಾಗಿರಬೇಕು? ಯಾವ ಭಾಷೆಯನ್ನು ಎರಡನೆಯ ಭಾಷೆಯಾಗಿ ಕಲಿಸಬೇಕು ಎನ್ನುವ ಕುರಿತು ನೀತಿ ನಿರೂಪಣೆ ಸ್ಪಷ್ಟವಾಗಿಲ್ಲ.

ಇನ್ನೊಂದು ಕಾರಣವೆಂದರೆ ಶಿಕ್ಷಣದ ನೀತಿಗಳು ಭಾಷೆಯ ಮತ್ತು ಐತಿಹಾಸಿಕ ಪ್ರಜ್ಞೆಯ ಬೆಳವಣಿಗೆಗೆ ಅಕಾಡೆಮಿಕ್‌ ಪ್ರೋಗ್ರಾಮ್‌ಗಳಲ್ಲಿ ಮಹತ್ವದ ಸ್ಥಾನ ನೀಡಿಲ್ಲ. ಇದರ ಹಿಂದೆ ಇರುವ ಪ್ರಮುಖ ಗ್ರಹಿಕೆಯೆಂದರೆ ಈ ವಿಷಯಗಳು ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿಲ್ಲ ಎನ್ನುವುದು. ಅಲ್ಲದೆ ಹಲವೊಮ್ಮೆ ಒಳಗೊಳ್ಳುವಿಕೆಯನ್ನೇ ಪ್ರಮುಖ ಉದ್ದೇಶವನ್ನಾಗಿ ಹೊಂದಿರುವ ಬೋರ್ಡ್‌ ಆಫ್ ಸಿಲೆಬಸ್‌ಗಳು ಇಂದು ಸಿಲೆಬಸ್‌ನ ಹೂರಣವನ್ನು ಎಷ್ಟು ಹಗುರಗೊಳಿಸಿವೆ ಎಂದರೆ ಭಾಷೆಗಳು ಸರಳವಾಗಿ ಅರ್ಥವಾಗಬಲ್ಲ ಬೀದಿಯ ಮಾತುಗಳಾಗಿ ಹೋಗಿದ್ದು ಹೌದು. ಅಲ್ಲಿ ರಸವತ್ತಾದ್ದು, ಸೌಂದರ್ಯ ತುಂಬಿದ್ದು ಕಡಿಮೆಯಾಗಿ ಹೋಗಿದೆ. ಸವಿಯಾದದ್ದು ಮಧುರವಾದದ್ದು ಇಲ್ಲವೇ ಇಲ್ಲ.

ಮುಖ್ಯವಾಗಿ ಭಾಷಾ ಸಿಲೆಬಸ್‌ಗಳಲ್ಲಿ ಕೂಡ ಎಲ್ಲ ಹಂತಗಳಲ್ಲಿಯೂ ಈ ರೀತಿ ಆಗಿ ಹೋಗಿದೆ. ಬೇಂದ್ರೆ, ವರ್ಡ್ಸ್‌ವರ್ತ್‌ ಇಲ್ಲವಾಗಿದ್ದಾರೆ. ವಚನಗಳು ದೂರವಾಗುತ್ತಿವೆ. ಭಾಷಾ ಕಲಿಕೆ ಎಷ್ಟು ಕುಸಿದಿದೆ ಎಂದರೆ ಕ್ಲಾಸ್‌ರೂಮ್‌ಗಳಲ್ಲಿನ ಭಾಷೆ ಪ್ರಶ್ನೋತ್ತರಗಳನ್ನು ಬಿಟ್ಟು ಮುಂದೆ ಹೋಗಲು ಸಿದ್ಧವೇ ಇಲ್ಲ.

ಭಾಷೆಗಳನ್ನು ಕಲಿಸುವುದು ಕೇವಲ ಪರೀಕ್ಷೆಯ ಉದ್ದೇಶಕ್ಕಾಗಿ ಎಂಬ ಭಾವನೆ ಬಂದುಹೋಗಿದೆ. ಒಂದು ಮಾರ್ಕಿನ ಪ್ರಶ್ನೆಗಳು ಪ್ರಶ್ನೆ ಪತ್ರಿಕೆಗಳನ್ನು ತುಂಬಿಕೊಂಡಿವೆ. ಕೇವಲ ಟಿಕ್‌ ಹಾಕಿದರೆ ಮಾರ್ಕ್ಸ್ ಸಿಗುವ ಕಾರಣ ವಿದ್ಯಾರ್ಥಿಗಳಿಗೆ ಹೇರಳವಾಗಿ ಮಾರ್ಕ್ಸ್ ಸಿಗುತ್ತಿದೆ. ಹಾಗಾಗಿ ಲಾಲಿತ್ಯಪೂರ್ಣವಾದ ಭಾಷೆಯ ಬಳಕೆ ಇತ್ಯಾದಿ ಪರಿಕಲ್ಪನೆಗಳು ದೂರವಾಗಿ ಹೋಗಿವೆ.

ಭಾಷಾ ಬೋಧನೆಯ ಕುರಿತಾದ ಮತ್ತು ಶಿಕ್ಷಕರ ಗುಣಮಟ್ಟದ ಕುರಿತಾದ ಸತತ ಮತ್ತು ನಿರಂತರ ನಿರ್ಲಕ್ಷ್ಯದಿಂದಾಗಿ ಇಂದು ಏನಾಗಿದೆಯೆಂದರೆ ಹಲವು ಯುವಕ-ಯುವತಿಯರಿಗೆ ಇಂಗ್ಲೀಷ್‌ ಆಗಲೀ, ಕನ್ನಡವಾಗಲೀ ಆಳವಾಗಿ, ಸಂಸ್ಕೃತಿಯ ಬೇರಾಗಿ, ದಿನನಿತ್ಯದ ಮಾತಿಗಿಂತ ಹೆಚ್ಚಿನ ಪ್ರಮಾಣ ಬರುವುದೇ ಇಲ್ಲ. ಸುಂದರವಾಗಿ, ಸಾಹಿತ್ಯ ಪೂರ್ಣವಾಗಿ ಅಥವಾ ಆಕರ್ಷಕವಾಗಿ ಬರೆಯಲು ಬರುವುದೇ ಇಲ್ಲ. ಸೊಗಸಾದ ಮಾತು ಅಥವಾ ಬರಹ ಇಂದಿನ ಪೀಳಿಗೆಯವರಲ್ಲಿ ಹಲವರಿಗೆ ಬರುವುದೇ ಇಲ್ಲ.

ಸಮಾಜದಲ್ಲಿ ಭಾಷೆ ಹೊರಟು ಹೋಗಿದೆ. ಸಮಾಜಕ್ಕೆ ಅಗತ್ಯವಿದ್ದರೆ ಬಹುಶಃ ರಾಜಕಾರಣಿಗಳು ಅಥವಾ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರು ಸವಿ-ಸವಿಯಾದ ಭಾಷೆ ಬಳಸುತ್ತಿದ್ದರೇನೋ! ಆದರೆ ಆಳದ ವಿಷಾದವೆಂದರೆ ಅಂತಹ ಮಾತುಗಳನ್ನು ಅವರು ಸಿದ್ಧಪಡಿಸಿ ಬಂದರೂ ಕೇಳುವವರಾದರೂ ಯಾರು? ಈ ಮಾತು ಹೇಳಲು ಕಾರಣವೆಂದರೆ ಸಾಮಾಜಿಕ ಪ್ರಜ್ಞೆಯಲ್ಲಿ ಕೂಡ ಒಂದು ಭಾಷಾತ್ಮಕ ಇಳಿಕೆ ಬಂದಿದೆ. ಅಲ್ಲದೆ ಅರೆಬರೆ ಇಂಗ್ಲಿಷ್‌ ಆಕರ್ಷಣೆಯಿಂದಾಗಿ ನಮ್ಮ ಸಂಸ್ಕೃತಿಯ ಸೌಂದರ್ಯದ ಸೆಲೆಗಳು ಅವರಿಗೆ ಅರ್ಥವಾಗುವುದೇ ಇಲ್ಲ. ಅವರ ಹೃದಯಕ್ಕೆ ಕನ್ನಡ ಭಾಷೆಯಂತೂ ಮುಟ್ಟುವುದೇ ಇಲ್ಲ. ಹೀಗಾಗಿ ತಾತ್ವಿಕ, ಸೈದ್ಧಾಂತಿಕ, ಕಾವ್ಯಾತ್ಮಕ ಮಾತು ಒಳ್ಳೆಯ ಭಾಷೆ ಸಾರ್ವಜನಿಕ ವಲಯದಿಂದಲೇ ಮರೆಯಾಗುತ್ತಿವೆ. ಇಂತಹದ್ದೇ ಪರಿಸ್ಥಿತಿ ಇರುವುದು ಇತಿಹಾಸ ಕಲಿಕೆಯದು. ಈ ಸವಾಲನ್ನು ನಾವು ಎದುರಿಸಿದರೆ ಸಾರ್ವಜನಿಕ ವಲಯ ಮತ್ತು ಸಮಾಜ ಸುಧಾರಣೆಗೊಳ್ಳುತ್ತದೆ. ಸುಸಂಸ್ಕೃತಗೊಳ್ಳುತ್ತದೆ.

ಈ ಹಿನ್ನೆಲೆಯಲ್ಲಿ ಭಾಷೆಗಳನ್ನು ಮತ್ತು ಇತಿಹಾಸವನ್ನು ಸಮರ್ಪಕವಾಗಿ ಕಲಿಸಲು ನೀತಿಗಳನ್ನು ಯೋಜಿಸುವುದು ಮತ್ತು ಕಲಿಕೆಯ ಸ್ವರೂಪವನ್ನು ಅಭಿವೃದ್ಧಿಗೊಳಿಸುವುದು ಹೊಸ ಶಿಕ್ಷಣ ನೀತಿಯ ಮುಂದಿರುವ ಸವಾಲು. ಭಾಷೆಗಳಂತೆ, ಇತಿಹಾಸಗಳಂತೆ ಸಂಸ್ಕೃತಿ ಕಟ್ಟಲು ಯಂತ್ರಗಳಿಗೆ ಸಾಧ್ಯವಾಗುವುದಿಲ್ಲ. ಸಂಸ್ಕೃತಿಗಳು ಉಳಿಯದಿದ್ದರೆ ಸಮಾಜಗಳು ಉಳಿಯುವುದಿಲ್ಲ.

ಡಾ. ಆರ್‌.ಜಿ. ಹೆಗಡೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.