ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅಯೋಧ್ಯೆ ತೀರ್ಪು ಸುವರ್ಣ ಅಧ್ಯಾಯ: ಪ್ರಧಾನಿ ಮೋದಿ
ನವಂಬರ್ 09ರ ಸಂದೇಶ ಜೋಡಣೆಯದ್ದಾಗಿದೆ, ಸಂಬಂಧಗಳನ್ನು ಬೆಸೆಯುವುದಾಗಿದೆ
Team Udayavani, Nov 9, 2019, 6:09 PM IST
ನವದೆಹಲಿ: ಅಯೋಧ್ಯೆ ತೀರ್ಪು ಹೊರಬಿದ್ದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇದು ಭಾರತದ ನ್ಯಾಯವ್ಯವಸ್ಥೆಯ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಲೋಕತಂತ್ರ ವ್ಯವಸ್ಥೆ ಎಷ್ಟು ಬಲಿಷ್ಟವಾಗಿದೆ ಎಂಬುದನ್ನು ನಾವಿಂದು ವಿಶ್ವಕ್ಕೇ ತೋರಿಸಿಕೊಟ್ಟಿದ್ದೇವೆ. ದೇಶದ ಎಲ್ಲಾ ವರ್ಗಗಳ ಜನರು ಇಂದಿನ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಈ ಪ್ರಾಣತತ್ವವನ್ನು ಉಲ್ಲೇಖಿಸುವವರು ಇಂದಿನ ಈ ಪ್ರಕರಣವನ್ನು ಖಂಡಿತವಾಗಿಯೂ ಉಲ್ಲೇಖಿಸುತ್ತಾರೆ.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎಲ್ಲರ ವಾದವನ್ನು ಆಲಿಸಿದೆ. ಮತ್ತು ಬಹಳ ಧೈರ್ಯದಿಂದಲೇ ಎಲ್ಲವನ್ನೂ ಆಲಿಸಿ ಇಂದು ಸರ್ವಸಮ್ಮತ ತೀರ್ಪನ್ನು ನೀಡಿದೆ. ಆ ಮೂಲಕ ಸರ್ವೋಚ್ಛ ನ್ಯಾಯಾಲಯವು ತನ್ನ ದೃಢ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಇದಕ್ಕಾಗಿ ನಾನು ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಯನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ನವಂಬರ್ 09ಕ್ಕೆ ವಿಶೇಷ ಮಹತ್ವವಿದೆ. 1991ರಂದು ಇದೇ ದಿನದಂದು ಬರ್ಲಿನ್ ಗೋಡೆಯನ್ನು ಕೆಡಹುವ ಮೂಲಕ ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾಗಿತ್ತು. ಇದೇ ದಿನ ಕರ್ತಾಪುರ ಕಾರಿಡಾರ್ ಲೋಕಾರ್ಪಣೆಗೊಳ್ಳುವ ಮೂಲಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಹೊಸ ಇತಿಹಾಸ ನಿರ್ಮಾಣಗೊಂಡಿದೆ ಹಾಗೆಯೇ ಸರ್ವೋಚ್ಛ ನ್ಯಾಯಾಲಯವು ಅಯೋಧ್ಯೆ ಪ್ರಕರಣದಲ್ಲಿ ಸರ್ವ ಸಮ್ಮತ ತೀರ್ಪನ್ನು ನೀಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.