ಡಿಸಿಎಂ ಹುದ್ದೆಯಿಂದ ಪೊಲೀಸರಿಗೆ ಅನಗತ್ಯ ಒತ್ತಡ: ಶಾಸಕ ಯತ್ನಾಳ
Team Udayavani, Dec 12, 2019, 11:56 PM IST
ವಿಜಯಪುರ: ಸಾಂವಿಧಾನಿಕ ಮಾನ್ಯತೆ ಇಲ್ಲದ ಉಪ ಮುಖ್ಯಮಂತ್ರಿ ಸ್ಥಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಸುವುದರಿಂದ ರಾಜ್ಯದಲ್ಲಿ ಪೊಲೀಸರಿಗೆ ಭದ್ರತೆ ಕಲ್ಪಿಸುವ ಹಾಗೂ ಸಂಚಾರ ನಿಯಂತ್ರಣ
ವಿಷಯದಲ್ಲಿ ಹೆಚ್ಚಿನ ಹೊರೆ ಬೀಳಲಿದೆ. ಇಷ್ಟಕ್ಕೂ ಮುಖ್ಯಮಂತ್ರಿ ಹುದ್ದೆ ನಿಭಾಯಿಸುವಲ್ಲಿ ಯಡಿಯೂರಪ್ಪ
ಸಮರ್ಥರಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆಗಳನ್ನು ರದ್ದು ಮಾಡಿ, ಸಂಪುಟ ದರ್ಜೆ ಸ್ಥಾನ ನೀಡಲಿ. ಕೃಷ್ಣಾ ಮೇಲ್ದಂಡೆ ಯೋಜನೆ ಬಹುತೇಕ ಯೋಜನೆಗಳ ಅನುಷ್ಠಾನದ ಹಂತದಲ್ಲಿರುವ ಕಾರಣ ಉತ್ತರ ಕರ್ನಾಟಕದವರಿಗೆ ಜಲಸಂಪನ್ಮೂಲ ಖಾತೆ ನೀಡಬೇಕು. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಆದರೆ, ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ.
ಮೊದಲು ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಆದ್ಯತೆ ನೀಡಲಿ. ಸಚಿವ ಸ್ಥಾನ ದೊರಕದಿದ್ದರೂ ನಾನು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ ನೀಡುತ್ತೇನೆ ಎಂದರು.
ಉಪ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ಮುಗಿದಂತೆ ಎಂದು ಭಾವಿಸುವುದು ತಪ್ಪು. ರಾಜಕೀಯದಲ್ಲಿ ಸೋಲು-ಗೆಲುವು ಸಹಜ. ಡ್ಯಾಶ್, ಡ್ಯಾಶ್ ಪದವನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಟಾಳಕರ ತುಂಬಿದರೆ, ಮುಂದಿನದ್ದು ನಾನು ತುಂಬುತ್ತೇನೆ. ವಿಶ್ವದಲ್ಲೇ ಭಾರತ ಅತ್ಯಾಚಾರಿಗಳ ರಾಜಧಾನಿ ಎಂದು ಕಟು ಟೀಕೆ ಮಾಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಾಕ್ ಏಜೆಂಟ್ ಇದ್ದಂತೆ. ಭಾರತೀಯ ಕಾಂಗ್ರೆಸ್ ಪಾಕಿಸ್ತಾನ ಕಾಂಗ್ರೆಸ್ ಆಗಿದೆ ಎಂಬುದಕ್ಕೆ ರಾಹುಲ್ ಹೇಳಿಕೆ ಸಾಕ್ಷಿ. ಇನ್ನು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯಿಂದ ಪಾಕಿಸ್ತಾನ
ಇಬ್ಭಾಗವಾದಾಗ ಹತ್ಯೆಯಾದ ಲಕ್ಷಾಂತರ ಹಿಂದೂ ಸಮುದಾಯ ಹಾಗೂ ದೌರ್ಜನ್ಯಕ್ಕೆ ತುತ್ತಾತ ಕುಟುಂಬಗಳಿಗೆ ನೆರವಾಗಲಿದೆ ಎಂದರು.