ಜಲಮಾಲಿನ್ಯ: ಮರೆಯಾಗುತ್ತಿದೆ ಮರುವಾಯಿ
Team Udayavani, Feb 12, 2020, 6:00 AM IST
ಮಂಗಳೂರು: ಕರಾವಳಿಯಲ್ಲಿ ಒಂದೊಮ್ಮೆ ಯಥೇಚ್ಛವಾಗಿ ಸಿಗುತ್ತಿದ್ದ ಮರುವಾಯಿ (ಕೊಯ್ಯೊಲು) ಇದೀಗ ಅಳಿವಿನಂಚಿನಲ್ಲಿದೆ. ಆಹಾರವಾಗಿ ಬಳಸುತ್ತಿರುವ ಚಿಪ್ಪು ಪ್ರಭೇದಕ್ಕೆ ಸೇರಿದ ಜಲಚರವೊಂದು ಇನ್ನು ಕೆಲವೇ ವರ್ಷಗಳಲ್ಲಿ ಕರ್ನಾಟಕ ಕರಾವಳಿಯಿದ ಸಂಪೂರ್ಣವಾಗಿ ಕಣ್ಮರೆಯಾಗುವ ಆತಂಕ ಎದುರಾಗಿದೆ.
ಸುಸ್ಥಿರ ಅಭಿವೃದ್ಧಿಗಾಗಿ ಸಮುದ್ರ, ಸಾಗರ ಹಾಗೂ ಸಾಗರಸಂಪನ್ಮೂಲ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆ ಕುರಿತಂತೆ ಮೀನುಗಾರಿಕಾ ತಜ್ಞರು ನಡೆಸಿರುವ ಅಧ್ಯಯನ ಕರಾವಳಿ ಪ್ರದೇಶದಲ್ಲಿ ಸಮುದ್ರಕ್ಕೆ ಹೊಂದಿಕೊಂಡಂತೆ ನದಿಯ ತಳಭಾಗದಲ್ಲಿ ಮರುವಾಯಿಯ ಸಂತತಿ ಅಳವಿನಂಚಿನತ್ತ ಸಾಗುತ್ತಿರುವುದನ್ನು ಪತ್ತೆ ಮಾಡಿದ್ದು ವಾರ್ಷಿಕ ಮರುವಾಯಿ ಲಭ್ಯತೆಯ ಪ್ರಮಾಣ ಶೇ. 71ರಷ್ಟು ಕುಸಿದಿರುವು ದಾಗಿ ವರದಿಯಲ್ಲಿ ತಿಳಿಸಿದೆ. ದ.ಕ., ಉಡುಪಿ, ಉತ್ತರ ಕನ್ನಡದಲ್ಲಿ 10 ವರ್ಷಗಳ ಹಿಂದೆ ವಾರ್ಷಿಕವಾಗಿ ಸುಮಾರು 13,000 ಟನ್ ಮರುವಾಯಿ ಸಿಗುತ್ತಿದ್ದರೆ ಇದೀಗ ಪ್ರಮಾಣ ವಾರ್ಷಿಕವಾಗಿ 2,000 ಟನ್ಗೆ ಇಳಿದಿದೆ.
ಜೀವನಾಧಾರ ಕುಸಿತ
ಸಾವಿರಾರು ಕುಟುಂಬಗಳಿಗೆ ಮರುವಾಯಿ ಜೀವನಾಧಾರವಾಗಿತ್ತು. ಇದೀಗ ಹೆಚ್ಚಿನ ಕುಟುಂಬಗಳು ಈ ಕಾಯಕವನ್ನು ಕೈಬಿಟ್ಟಿವೆ. ನೂರಕ್ಕೆ 40-50 ರೂಪಾಯಿಯಲ್ಲಿ ಸಿಗುತ್ತಿದ್ದ ಕೇಶ ಮರುವಾಯಿ ಬೆಲೆ ಇದೀಗ 100ಕ್ಕೆ 200 ರೂ.ಗೇರಿದೆ. ದಡ್ಡು ಮರುವಾಯಿ ಬೆಲೆ 100ಕ್ಕೆ 150 ರೂ. ಇದೆ. ಪ್ರಸ್ತುತ ಮಂಗಳೂರು ಹಾಗೂ ಆಸುಪಾಸಿನ ಮೀನು ಮಾರುಕಟ್ಟೆಗಳಿಗೆ ಕೇರಳದ ಮರುವಾಯಿ ಬರುತ್ತಿದೆ. ಇನ್ನೊಂದೆಡೆ ಮರುವಾಯಿ ಚಿಪ್ಪು ಸುಣ್ಣ ತಯಾರಿಗೆ ಬಳಕೆಯಾಗುತ್ತಿತ್ತು. ಇದೀಗ ಮರುವಾಯಿ ಚಿಪ್ಪು ಸಿಗದ ಕಾರಣ ಚಿಪ್ಪಿನಿಂದ ಸುಣ್ಣ ತಯಾರಿ ಉದ್ಯಮ ಬಹುತೇಕ ಸ್ಥಗಿತಗೊಂಡಿದೆ.
ಕುಸಿತದ ಪ್ರಮಾಣ
ಅಂಕಿ-ಅಂಶದ ಪ್ರಕಾರ ಕರಾವಳಿಯಲ್ಲಿ 2012ರಲ್ಲಿ 12,462 ಟನ್ ವರೆಗೆ ಸಿಕ್ಕಿದ್ದ ಮರುವಾಯಿ 2013ರಲ್ಲಿ 7,361 ಟನ್, 2014ರಲ್ಲಿ 6,681 ಟನ್ ಹಾಗೂ 2019ರಲ್ಲಿ 2000 ಟನ್ಗೆ ಕುಸಿದಿದೆ.
ಜಲ ಮಾಲಿನ್ಯ ಕಾರಣ
ಮಾಲಿನ್ಯ ರಹಿತ, ಉಪ್ಪಿನಂಶ ಸಮತೋಲಿತ ಪ್ರಮಾಣದಲ್ಲಿ ಇರುವ ನೀರು ಮರುವಾಯಿಯ ಬೆಳವಣಿಗೆಗೆ ಪೂರಕ. ಆದರೆ ಪ್ರಸ್ತುತ ಸಮುದ್ರ ಹಾಗೂ ನದಿನೀರು ಮಲಿನವಾಗುತ್ತಿರುವುದು ಮುಖ್ಯ ಕಾರಣವೆಂದು ಮೀನುಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏನಿದು ಮರುವಾಯಿ
ಅಂಗ್ಲಭಾಷೆಯಲ್ಲಿ ಬೈವಾಲ್ ಎಂದು ಕರೆಸಿಕೊಳ್ಳುತ್ತಿರುವ ಚಿಪ್ಪು ಪ್ರಭೇದದ ಮರುವಾಯಿ ಅಥವಾ ಕೊಯ್ಯೊಲು ಸಮುದ್ರಕ್ಕೆ ಹೊಂದಿಕೊಂಡಿರುವಂತೆ ನದಿಯ ತಳದಲ್ಲಿ ವಾಸಿಸುತ್ತವೆ. ಮರುವಾಯಿ ಕೇಸ, ದಡ್ಡು ಹಾಗೂ ಸಣ್ಣ ಎಂಬ ಪ್ರಭೇದಗಳಿದ್ದು ಇದರಲ್ಲಿ ಕೇಸ ಮರುವಾಯಿ ಹೆಚ್ಚು ಸ್ವಾದಿಷ್ಟಕರವಾಗಿದ್ದು ಬೆಲೆಯೂ ಇತರ ಪ್ರಭೇದಗಳಿಗೆ ಹೋಲಿಸಿದರೆ ಅಧಿಕ ಇರುತ್ತದೆ.
ಕರ್ನಾಟಕ ಕರಾವಳಿಯಲ್ಲಿ 10 ವರ್ಷಗಳಿಂದ ಮರುವಾಯಿಯ ಸಂತತಿ ತೀವ್ರ ಕುಸಿಯುತ್ತಿರುವುದು ಕಂಡುಬಂದಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಇದು ಬಹುತೇಕ ಅಳವಿನಂಚಿನಲ್ಲಿದ್ದು ಉತ್ತರ ಕರ್ನಾಟಕದಲ್ಲಿ ಅಘನಾಶಿನಿ ಸೇರಿದಂತೆ ಕೆಲವು ನದಿಗಳಲ್ಲಿ ಪ್ರಸ್ತುತ ಸ್ವಲ್ಪ ಪ್ರಮಾಣದಲ್ಲಿ ಉಳಿದುಕೊಂಡಿದೆ.
– ಡಾ| ರಾಮಚಂದ್ರ ಭಟ್, ಮೀನುಗಾರಿಕಾ ವಿ.ವಿ. ನಿವೃತ್ತ ಉಪನ್ಯಾಸಕರು ಹಾಗೂ ಮೀನುಗಾರಿಕಾ ತಜ್ಞರು
ಈ ಹಿಂದೆ ದಿನವೊಂದಕ್ಕೆ 10 ಗೋಣಿಯಷ್ಟು ಮರುವಾಯಿ ಸಿಗುತ್ತಿದ್ದರೆ ಇದೀಗ 1 ಗೋಣಿ ಸಿಗುವುದೇ ಕಷ್ಟವಾಗಿದೆ. ಸಿಗುವ ಮರುವಾಯಿಯಲ್ಲೂ ಸುಮಾರು ಅರ್ಧದಷ್ಟು ಪ್ರಮಾಣ ಬಾಯ್ದೆರೆದು ಉಪಯೋಗಕ್ಕೆ ಬರುವುದಿಲ್ಲ.
– ನವೀನ್ ಸಸಿಹಿತ್ಲು , ಮರುವಾಯಿ ಸಂಗ್ರಾಹಕ
– ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು