ಸಹೋದ್ಯೋಗಿ ಚಾಲಕನ ಜೀವ ಉಳಿಸಿದ ನಿರ್ವಾಹಕ
Team Udayavani, Feb 20, 2020, 6:00 AM IST
ಮಂಗಳೂರು: ಕೆಎಎಸ್ಆರ್ಟಿಸಿ ಬಸ್ ನಿರ್ವಾಹಕನೋರ್ವ ಸಮಯಪ್ರಜ್ಞೆಯಿಂದ ಸಹೋದ್ಯೋಗಿ ಚಾಲಕನ ಜೀವ ಉಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ.
ಫೆ. 14ರಂದು ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ರಾಜಹಂಸ ಬಸ್ ಬೆಳಗ್ಗಿನ ಜಾವ 5.30ಕ್ಕೆ ಧರ್ಮಸ್ಥಳಕ್ಕೆ ತಲುಪಿತ್ತು. ಪ್ರಯಾಣಿಕರನ್ನು ಇಳಿಸಿದ ಬಳಿಕ ಚಾಲಕ ಮಹಾದೇವ್ ಮತ್ತು ನಿರ್ವಾಹಕ ಬಸವರಾಜ್ ಡಿಪೋದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮಹಾದೇವ್ಗೆ ಎದೆನೋವು ಕಾಣಿಸಿಕೊಂಡಿತ್ತು. ಸಮಯ ಕಳೆದಂತೆ ನೋವಿನ ತೀವ್ರತೆ ಹೆಚ್ಚಾದಾಗ ನಿರ್ವಾಹಕ ಬಸವರಾಜ್ಗೆ
ತಿಳಿಸಿದರು. ಅವರು ರಿಕ್ಷಾದಲ್ಲಿ ಉಜಿರೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ತಪಾಸಣೆ ನಡೆಸುವಾಗ ಮಹಾದೇವ್ಗೆ ಲಘು ಹೃದಯಾಘಾತ ಆಗಿರುವುದು ತಿಳಿಯಿತು. ವೈದ್ಯರ ಸೂಚನೆಯಂತೆ ತತ್ಕ್ಷಣವೇ ಆ್ಯಂಬುಲೆನ್ಸ್ ಮೂಲಕ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಲಾಯಿತು. ಕೆಎಂಸಿಯ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್ ನೇತೃತ್ವದ ವೈದ್ಯರ ತಂಡ ತುರ್ತು ಚಿಕಿತ್ಸೆ ನೀಡಿದ್ದು, ಈಗ ಮಹಾದೇವ್ ಚೇತರಿಸಿಕೊಂಡಿದ್ದಾರೆ.