ನಾಳೆ ಶಿವರಾತ್ರಿ ಜಾಗರಣೆ: ಕುದ್ರೋಳಿ ಕ್ಷೇತ್ರಕ್ಕೆ ಚಿನ್ನದ ರಂಗು
Team Udayavani, Feb 20, 2020, 6:07 AM IST
ಶಿವರಾತ್ರಿ ಹಿನ್ನೆಲೆಯಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ಸ್ವರ್ಣಮಯವಾಗಿ ಅಲಂಕರಿಸಲಾಗಿದೆ.
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಸಂಪೂರ್ಣವಾಗಿ ಚಿನ್ನದ ಬಣ್ಣದಲ್ಲಿ ಕಂಗೊಳಿಸುತ್ತಿದ್ದು, ಮಹಾಶಿವರಾತ್ರಿ ಮಹೋತ್ಸವಕ್ಕೆ ಸಜ್ಜುಗೊಂಡಿದೆ ಎಂದು ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನವರಾತ್ರಿಗೆ ಕ್ಷೇತ್ರವನ್ನು ಚಿನ್ನದ ಬಣ್ಣದಲ್ಲಿ ಅಲಂಕರಿಸುವ ಕುರಿತು ಸಂಕಲ್ಪಿಸಲಾಗಿತ್ತು; ಅದೀಗ ಪೂರ್ಣಗೊಂಡಿದೆ. ಧ್ವಜಸ್ತಂಭವೂ ಬಂಗಾರದ ಬಣ್ಣ ಹೊಂದಿರು ವುದು ಕುದ್ರೋಳಿ ಕ್ಷೇತ್ರದ ವಿಶೇಷತೆ. ಪರಿವಾರ ದೇವರು ಗಳ ಮಂದಿರಗಳನ್ನು ಕೂಡ ಸ್ವರ್ಣ ಬಣ್ಣದಿಂದ ಸುಂದರಗೊಳಿಸಲಾಗಿದೆ. ಶಬರಿಮಲೆಯಲ್ಲಿ ಅಯ್ಯಪ್ಪನ ಮಂದಿರ, ಅಮೃತಸರದಲ್ಲಿ ಗುರು ನಾನಕ್ ಮಂದಿರ ಗೋಲ್ಡನ್ ಟೆಂಪಲ್ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅದಲ್ಲದೆ ಚೆನ್ನೈಯಲ್ಲಿ ಸ್ವಾಮೀಜಿ ಯೊಬ್ಬರು ನೀರಿನ ಮಧ್ಯದಲ್ಲಿ ಸ್ವರ್ಣ ಮಂದಿರವನ್ನು ನಿರ್ಮಿಸಿದ್ದಾರೆ. ಅಲ್ಲಿಗೆ ಭೇಟಿ ನೀಡಿದ್ದೆ. ಇದೀಗ ಕುದ್ರೋಳಿ ಕ್ಷೇತ್ರಕ್ಕೂ ಅದೇ ಮಾದರಿಯಲ್ಲಿ ಕಂಗೊಳಿಸುತ್ತಿದೆ ಎಂದರು.
ಕ್ಷೇತ್ರಾಡಳಿತ ಮಂಡಳಿ ಕೋಶಾಧಿ ಕಾರಿ, ನ್ಯಾಯವಾದಿ ಪದ್ಮರಾಜ್ ಆರ್. ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ ಶಿವರಾತ್ರಿ ಉತ್ಸವದ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಫೆ. 23ರವರೆಗೆ ಆಚರಣೆ ನಡೆಯಲಿದೆ. ಫೆ. 21ರಂದು ರಾತ್ರಿ 1 ಗಂಟೆಗೆ ಮಹಾಶಿವರಾತ್ರಿ ಜಾಗರಣೆ ಬಲಿ ನಡೆಯಲಿದೆ. ಫೆ. 22ರಂದು ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ರವಿಶಂಕರ್ ಮಿಜಾರು, ಮಹೇಶ್ಚಂದ್ರ, ದೇವೇಂದ ಪೂಜಾರಿ, ಡಾ| ಬಿ.ಜಿ. ಸುವರ್ಣ, ಡಾ| ಅನಸೂಯ, ಚಿತ್ತರಂಜನ್ ಗರೋಡಿ, ಶೇಖರ ಪೂಜಾರಿ, ಎಸ್. ಜಯವಿಕ್ರಂ, ಕರುಣಾಕರ ಶೆಟ್ಟಿ, ಮೋಹನ್ ಶೆಟ್ಟಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.