ಕಾದಂಬರಿಗೆ ಸಾರಾ ವಜ್ರಾವೆಂಬ ಸಿನೆಮಾ ಸ್ಪರ್ಶ
Team Udayavani, Mar 5, 2020, 4:14 AM IST
ಹಿರಿಯ ಸಾಹಿತಿ ಸಾರಾ ಅಬೂಬಕರ್ ಅವರ ಕಾದಂಬರಿ “ವಜ್ರಗಳು’ ಇದೀಗ ಕನ್ನಡ ಸಿನೆಮಾ “ಸಾರಾ ವಜ್ರ’ ಆಗಿ ಸೆಟ್ಟೇರುತ್ತಿದ್ದು, ಚಿತ್ರೀಕರಣ ಮಂಗಳೂರು ಹೊರವಲಯದ ಹರೇಕಳ ನದಿ ಕಿನಾರೆ ವ್ಯಾಪ್ತಿಯಲ್ಲಿ ಸದ್ಯ ಪೂರ್ಣಗೊಂಡಿದೆ.
ಸಿನೆಮಾ ಬಗ್ಗೆ ಚಿತ್ರ ನಿರ್ದೇಶಕಿ ಶ್ವೇತಾ ಶೆಟ್ಟಿ ಅವರು ಹೇಳುವ ಪ್ರಕಾರ “ಸಾರಾ ಅಬೂಬಕರ್ರ ಅನೇಕ ಕಾದಂಬರಿಯನ್ನು ನಾನು ಓದಿದ್ದೇನೆ. ವಜ್ರಗಳು ಕಾದಂಬರಿ ಓದಿದ ಬಳಿಕ ಅದನ್ನು ಚಲನಚಿತ್ರ ಮಾಡಲು ಮನಸ್ಸಾಯಿತು. ಹಾಗೇ ಅವರ ಬಳಿ ಮಾತನಾಡಿ ಒಪ್ಪಿಗೆ ಪತ್ರ ಪಡೆದುಕೊಂಡೆ. ಖ್ಯಾತ ನಿರ್ಮಾಪಕ ದೇವೇಂದ್ರ ರೆಡ್ಡಿಯವರು ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡರು. ಹರೇಕಳ ಪಾವೂರು ಪರಿಸರದಲ್ಲಿ ಕೇವಲ 19 ದಿನದಲ್ಲಿ ಚಿತ್ರದ ಚಿತ್ರೀಕರಣ ನಡೆಸಿದೆವು. ಚಿತ್ರವು ಸಂಪೂರ್ಣ ಕಾದಂಬರಿ ಆಧಾರಿತವಾಗಿದೆ’ ಎನ್ನುತ್ತಾರೆ.
ನಟ ರೆಹಮಾನ್ ಮುಖ್ಯ ಭೂಮಿಕೆಯ ಈ ಸಿನೆಮಾದಲ್ಲಿ ರಮೇಶ್ ಭಟ್, ಅನು ಪ್ರಭಾಕರ್, ಸುಧಾ ಬೆಳುವಾಡಿ, ಬಾಲನಟಿ ಅಂಕಿತಾ, ಸೇರಿದಂತೆ ಹಲವಾರು ಕಲಾವಿದರು ಬಣ್ಣಹಚ್ಚಿದ್ದಾರೆ. ಶೀಘ್ರದಲ್ಲಿ ಸಿನೆಮಾ ಬಿಡುಗಡೆಯ ಬಗ್ಗೆ ತಿಳಿಸಲಾಗುವುದು ಎಂದರು.
ತನ್ನದೇ ಕಾದಂಬರಿ ಸಿನೆಮಾ ಆಗುವ ಬಗ್ಗೆ ಮಾತನಾಡಿದ ಸಾಹಿತಿ ಸಾರಾ ಅಬೂಬಕರ್ ಅವರು “ನನ್ನ ಕಾದಂಬರಿಯನ್ನು ಚಲನಚಿತ್ರವಾಗಿಸಲು ಯಾರೇ ಬಂದರೂ ಕೂಡ ಮೂಲ ಕಥಾವಸ್ತುವಿಗೆ ಚ್ಯುತಿ ಬರುತ್ತದೆಯೋ ಎಂಬ ಆತಂಕವಿರುತ್ತದೆ. ಆದರೆ, ನಿರ್ದೇಶಕಿ ಶ್ವೇತಾ ಶೆಟ್ಟಿ ಅವರು ಮೂಲಕಥೆಗೆ ಯಾವುದೇ ಧಕ್ಕೆ ತರುವುದಿಲ್ಲ ಎಂದು ಅವರು ಭರವಸೆ ನೀಡಿದ ಬಳಿಕ ಚಿತ್ರ ನಿರ್ಮಿಸಲು ಒಪ್ಪಿಗೆ ನೀಡಿದ್ದೇನೆ. ಇದು ಕಾಲ್ಪನಿಕ ಕಥೆಯಲ್ಲ ಬದಲಾಗಿ ಬ್ಯಾರಿ-ಮುಸ್ಲಿಂ ನೈಜ ಕಥೆಯೇ ಆಗಿದೆ’ ಎಂದರು.