ದೆಹಲಿಯಿಂದ ಜಿಲ್ಲೆಗೆ ಬಂದ ಕೋವಿಡ್ 19
Team Udayavani, Apr 1, 2020, 3:27 PM IST
ತುಮಕೂರು: ಇಡೀ ಜಗತ್ತನ್ನೇ ಭೀತಿಗೊಳಿಸಿ ನಮ್ಮ ದೇಶ ದಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ 19 ವೈರಸ್ ರಾಜ್ಯದಲ್ಲಿ ಕದಂಬ ಬಾಹುಚಾಚಿದ್ದು ಕಲ್ಪತರು ನಾಡಿನಲ್ಲಿಯೂ ದಿನ ದಿಂದ ದಿನಕ್ಕೆ ಸೋಂಕಿತರು ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿದ್ದು ಈಗ ತುಮಕೂರು ಕೋವಿಡ್ 19 ಹಾಟ್ ಸ್ಪಾಟ್ ಆಗಲಿದೆಯೇ?.
ದೇಶದಲ್ಲಿ ಕೊರೊನಾ ಹೆಚ್ಚು ವ್ಯಾಪಿಸಬಾರದು ಎಂದು ಇಡೀ ದೇಶವನ್ನು ಲಾಕ್ಡೌನ್ ಮಾಡಿದ್ದರೂ ಜನ ಮನೆಯಲ್ಲಿ ಇರದೇ ಬೀದಿಗೆ ಬರುತ್ತಿದ್ದು ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ 19 ಗೆ ಒಬ್ಬ ವೃದ್ಧ ಬಲಿಯಾಗಿದ್ದು ಇಬ್ಬರಲ್ಲಿ ಕೊರೊನಾ ವೈರಸ್ ಕಂಡು ಬಂದಿರುವುದು ಜಿಲ್ಲೆಯ ಎಲ್ಲಾ ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.
ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಮಹಾಮಾರಿ ಕೋವಿಡ್ 19 ಜಿಲ್ಲೆಯ ಶಿರಾದಲ್ಲಿ ಮೊದಲು ಕಂಡು ಬಂದಿದ್ದು ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ರೈಲಿನಲ್ಲಿ ಹೋಗಿಬಂದಿದ್ದ ವೃದ್ಧ ನಿಗೆ ಮೊದಲು ಕಾಣಿಸಿಕೊಂಡು ಆತ ಮೃತಪಟ್ಟಿದ್ದಾನೆ.
ಆತನ ಸಂಪರ್ಕ ಹೊಂದಿದ್ದ ಇಬ್ಬರಿಗೆ ಕೋವಿಡ್ 19 ಈಗಾಗಲೇ ಕಾಣಿಸಿಕೊಂಡಿದೆ, ಜೊತೆಗೆ ಕೊರೊನಾ ಸೋಂಕಿತರು ಜಿಲ್ಲೆಯ ವಿವಿಧ ಕಡೆ ಸಂಚಾರ ಮಾಡಿದ್ದಾರೆ. ತಿಪಟೂರಿ ನಲ್ಲಿಯೂ ಸಭೆ ನಡೆಸಿದ್ದಾರೆ. ಇವರಲ್ಲಿ ಯಾರಿಗೆ ಸೋಂಕು ಹರಡಿದೆಯೋ ಎನ್ನುವ ಭೀತಿ ಮನೆ ಮಾಡಿದೆ.
ಜೊತೆಗೆ ವಿದೇಶದಿಂದ ಬಂದವರು ಇನ್ನೂ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. 30 ಜನರ ರಕ್ತ ಮತ್ತು ಕಫದ ಮಾದರಿ ವರದಿ ಲ್ಯಾಬ್ನಿಂದ ಬಂದಿದ್ದು, ಎಲ್ಲಾ ಮಾದರಿ ನೆಗೆಟಿವ್ ಆಗಿದೆ. ದೆಹಲಿಯಿಂದ ಬಂದ ಕೊರೊನಾ: ತುಮಕೂರಿಗೆ ಕೋವಿಡ್ 19 ಬಂದಿರುವುದು ದೆಹಲಿಯ ನಿಜಾಮುದ್ದೀನ್ ಮಸೀದಿಯಿಂದ ಅಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ತುಮಕೂರಿನ ಶಿರಾದಿಂದ ತೆರಳಿದ್ದ ವೃದ್ಧನಲ್ಲಿ ಮೊದಲು ಈ ವೈರಸ್ ಕಾಣಿಸಿಕೊಂಡಿತ್ತು.
ದೇಶದ ಎಲ್ಲಾ ಕಡೆ ಕೋವಿಡ್ 19 ವೈರಸ್ ಸೋಂಕು ಪ್ರಕರಣ ಕಾಣುತ್ತಿತ್ತು ಇದರಲ್ಲಿ ನಿಜಾಮುದ್ದೀನ್ ಮಸೀದಿಗೆ ಹೋದವರಿಗೆ ಹೆಚ್ಚು ಗೋಚರವಾಗುತ್ತಿದೆ. ಮೊದಲು ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪತ್ತೆಯಾಗಲಿಲ್ಲ. ಆದರೆ, ಕೆಲವು ದಿನಗಳ ಬಳಿಕ ಏಕಾಏಕಿ ಕೊರೊನಾಗೆ ವೃದ್ಧನೊಬ್ಬ ಬಲಿಯಾದರು. ಇದಾದ ಬಳಿಕ ಜಿಲ್ಲಾಡಳಿತ ಸಂಪೂರ್ಣ ಎಚ್ಚೆತ್ತುಕೊಂಡಿತು. ಈಗ ವೃದ್ಧನ ಮಗನಿಗೇ ಸೋಂಕು ಹರಡಿರುವುದು ಜಿಲ್ಲೆಯ ಜನರ ಆತಂಕ ಹೆಚ್ಚಾಗುವಂತೆ ಮಾಡಿದೆ. ತುಮಕೂರು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರು ಹೆಚ್ಚುವ ಸಾಧ್ಯತೆ ಕಂಡು ಬಂದಿದೆ, ದೆಹಲಿಯಿಂದ ಬಂದು ಈಗ ಈ ಮಹಾಮಾರಿಗೆ ಮೃತನಾಗಿ ಇನ್ನಿಬ್ಬರಿಗೆ ಸೋಂಕು ಬರುವಂತೆ ಮಾಡಿರುವ ವೃದ್ಧ ಜಿಲ್ಲೆಯ ಹಲವರ ಸಂಪರ್ಕ ಹೊಂದಿದ್ದ ಇದರಿಂದ ತುಮಕೂರು ಕೋವಿಡ್ 19 ಹಾಟ್ ಸ್ಪಾಟ್ ಎನ್ನುವ ಆತಂಕ ಕಾಡಿದೆ.
ಜಿಲ್ಲೆಯ ಇಬ್ಬರಲ್ಲಿ ಕೋವಿಡ್ 19 ಸೋಂಕು ಕಂಡು ಬಂದಿದ್ದು ರೋಗ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದ ತಿಪಟೂರಿನ 11 ಜನರಲ್ಲಿ ಸೋಂಕು ಪತ್ತೆಯಾಗಿಲ್ಲ. ಆದರೂ ಅವರನ್ನು ಐಸೋಲೇಷನ್ನಲ್ಲಿ ಇಡಲಾಗಿದೆ. –ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ
–ಚಿ.ನಿ.ಪುರುಷೋಅತ್ತಮ್