ನ್ಯಾಯಬೆಲೆ ಅಂಗಡಿಗೆ ಬೀಗ
Team Udayavani, Apr 7, 2020, 2:12 PM IST
ಶಿಡ್ಲಘಟ್ಟ: ಕೆ.ಮುತ್ತುಕದಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಗೋಧಿ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಅಂಗಡಿ ಮುಚ್ಚಿ ಪ್ರತಿಭಟನೆ ನಡೆ ಸಿದ ವೇಳೆ ವಿತರಕರು ಮತ್ತು ಗ್ರಾಮ ಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸರ್ಕಾರ ಏಪ್ರಿಲ್, ಮೇ ತಿಂಗಳಿನ ಪಡಿತರ ಏಕಕಾಲಕ್ಕೆ ವಿತರಿಸಲು ಆದೇಶಿಸಿದರೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಗ್ರಾಹಕರಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ 2 ಕೆ.ಜಿ ಗೋಧಿ ವಿತರಿಸುವ ಬದಲಿಗೆ ಕೇವಲ ಅಕ್ಕಿ ಮಾತ್ರ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕೆ.ಮುತ್ತುಕದಹಳ್ಳಿ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಮುಂದೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಅಕ್ಕಿ ಮತ್ತು ಗೋಧೀ ವಿತರಿಸಲು ಆದೇಶ ನೀಡಿದರೂ ನಮಗೆ ಗೋಧಿ ಬಂದಿಲ್ಲ. ನಾವೇನು ಮಾಡ ಬೇಕು ಎಂದು ವಿತರಕರು ಸಮಜಾಯಿಷಿ ನೀಡಿದರೂ ಸಹ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಅಂಗಡಿಗೆ ಬೀಗ ಜಡಿದರು. ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.
ಸರ್ಕಾರದಿಂದ ಗೋಧಿ ಬಂದ ನಂತರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ವಿತರಕರಿಗೆ ಸೂಚನೆ ನೀಡಿದರು.