ಕಿರಾಣಿ ಅಂಗಡಿ ಮಾಲೀಕನಿಗೆ 10 ಸಾವಿರ ದಂಡ
Team Udayavani, Apr 16, 2020, 4:54 PM IST
ಲಕ್ಷ್ಮೇಶ್ವರ: ತಾಲೂಕಿನ ಆದ್ರಳ್ಳಿ ಗ್ರಾಮದ ಕಿರಾಣಿ ಅಂಗಡಿಯಲ್ಲಿ ಅನಧಿ ಕೃತವಾಗಿ ಪೆಟ್ರೋಲ್, ಡಿಸೇಲ್ ಮತ್ತು ಪಟಾಕಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಅಂಗಡಿ ಮಾಲೀಕನಿಗೆ 10 ಸಾವಿರ ರೂ. ದಂಡ ವಿಧಿಸಿ, ಮಾರಾಟ ಸಾಮಗ್ರಿ ವಶಪಡೆಸಿಕೊಂಡಿದ್ದಾರೆ.
ತಾಲೂಕಿನ ಗ್ರಾಮೀಣ ಪ್ರದೇಶಗಳ ಕಿರಾಣಿ ಅಂಗಡಿಗಳಲ್ಲಿ ದಿನಸಿ ಜತೆಗೆ ಹೆಚ್ಚಿನ ದರಕ್ಕೆ ಪೆಟ್ರೋಲ್, ಡಿಸೇಲ್, ತಂಬಾಕು ಪದಾರ್ಥವಷ್ಟೇ ಅಲ್ಲದೇ ಮದ್ಯ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ಮಾಡಿದರು. ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಕಿರಾಣಿ, ಚಹಾ ಮತ್ತು ಪಾನ್ ಬೀಡಾ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ, ನಿಷೇಧಿತ ವಸ್ತು ಮಾರಾಟ ಮಾಡುವುದು ಮತ್ತು ಸದ್ಯದ ಕೋವಿಡ್ 19 ಪರಿಸ್ಥಿತಿಯ ದುರ್ಲಾಬ ಪಡೆದು ದಿನಸಿ ಮತ್ತು ಜೀವನಾವಶ್ಯಕ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಸಾರ್ವಜನಿಕರು ತಾಲೂಕಾಡಳಿತಕ್ಕೆ ಮಾಹಿತಿ ನೀಡಬಹುದು. ಮಾಹಿತಿಯನ್ನು ಗುಪ್ತವಾಗಿಡಲಾಗುವುದು ಎಂದರು. ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ ಹಾಗೂ ಇತರರಿದ್ದರು.