40 ವರ್ಷದ ಹಿಂದಿನ ಕರಾಳ ನೆನಪು; ಭೀಕರ ರಸ್ತೆ ಅಪಘಾತದಲ್ಲಿ ಬದುಕಿದ್ದೇ ಪವಾಡ!
ಮೇ ತಿಂಗಳ ಅಂತ್ಯದ ದಿನ ನದಿಯ ನೀರು ಬತ್ತಿ ಹೋಗಿ ಕಲ್ಲುಗಳಿಂದ ತುಂಬಿತ್ತು.
Team Udayavani, May 21, 2020, 3:23 PM IST
ತೀರ್ಥಹಳ್ಳಿ/ಬೆಂಗಳೂರು: ಸುಮಾರು ನಲವತ್ತು ವರ್ಷಗಳ ಹಿಂದೆ ನಾನು ಮತ್ತು ನನ್ನ ಪತ್ನಿ ವತ್ಸಲಾ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಶಂಕರನಾರಾಯಣದಿಂದ ಶಿವಮೊಗ್ಗಕ್ಕೆ ಗಜಾನನ ಬಸ್ ನಲ್ಲಿ ಪ್ರಯಾಣಿಸುತ್ತಿದ್ದೇವು. ರಾತ್ರಿ 8ಗಂಟೆ ಸುಮಾರಿಗೆ ತೀರ್ಥಹಳ್ಳಿ ಪಟ್ಟಣದ ಹೊರಗಿನ ಆ ಒಂಟಿಯಾದ ರಸ್ತೆಯಲ್ಲಿ ಕತ್ತಲೆಯಾಗಿತ್ತು. ಬಸ್ ಸ್ಟ್ಯಾಂಡ್ ರೆಸ್ಟೋರೆಂಟ್ ನಲ್ಲಿ ಕಾಫಿ ಸೇವಿಸಿದ ಡ್ರೈವರ್ ತನ್ನ ಮನೆಯ ಕಡೆ ಇದ್ದ ಶಿವಮೊಗ್ಗಕ್ಕೆ ವೇಗವಾಗಿ ಓಡಿಸಲು ಸಿದ್ಧನಾಗಿದ್ದ.
ಆ ಉತ್ಸಾಹದಲ್ಲಿ ಕುಶಾವತಿ ನದಿಯ ಸೇತುವೆಯ ಪ್ರವೇಶದಲ್ಲಿದ್ದ ತೀಕ್ಷ್ಣ್ಣವಾದ ತಿರುವನ್ನು ಡ್ರೈವರ್ ಗಮನಿಸದೇ ನೇರವಾಗಿ ಹೋಗಿ ಡಿಕ್ಕಿ ಹೊಡೆದ ಪರಿಣಾಮ ಬಸ್ ನದಿಗೆ ಉರುಳಿ ಬಿದ್ದಿತ್ತು. ಮೇ ತಿಂಗಳ ಅಂತ್ಯದ ದಿನ ನದಿಯ ನೀರು ಬತ್ತಿ ಹೋಗಿ ಕಲ್ಲುಗಳಿಂದ ತುಂಬಿತ್ತು. ಬಸ್ ಬಿದ್ದ ಪರಿಣಾಮ ಇಪ್ಪತ್ತೊಂದು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು.(ಈ ಸುದ್ದಿ 1980ರ ಮೇ 22ರ ಉದಯವಾಣಿ ಪತ್ರಿಕೆಯ ಮುಖಪುಟದಲ್ಲಿ ದೊಡ್ಡ ಸುದ್ದಿಯಾಗಿ ಪ್ರಕಟವಾಗಿತ್ತು)
ನನ್ನ ಮಾವ ಸೀತಾರಾಮ ಭಟ್ ಅದೃಷ್ಟವಶಾತ್ ಹತ್ತಿರದ ಹಳ್ಳಿಯಲ್ಲಿದ್ದರು. ಅವರು ಬಂದು ನಮ್ಮಿಬ್ಬರನ್ನೂ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದರು. ಮೂಳೆ ಮುರಿತಕ್ಕೊಳಗಾಗಿದ್ದ ನನಗೆ ಮೂತ್ರಪಿಂಡ ಕೂಡಾ ಹಾನಿಯಾಗಿತ್ತು. ಪತ್ನಿಯೂ ಗಂಭೀರವಾಗಿ ಗಾಯಗೊಂಡಿದ್ದಳು. ನಾವು ಬದುಕುಳಿಯುವಿಕೆ ಬಗ್ಗೆ ತಿಳಿಸಲು ಕನಿಷ್ಠ 48 ಗಂಟೆ ಕಾಲಾವಧಿ ಬೇಕು ಎಂದು ವೈದ್ಯರು ಹೇಳಿದ್ದರು. ಈ ಹಂತದಲ್ಲಿ ಕೆನರಾ ಬ್ಯಾಂಕ್ ಸಾಕಷ್ಟು ಸಹಾಯ ಮಾಡಿತ್ತು. ಸ್ಥಳೀಯ ಸಿಂಡಿಕೇಟ್ ಬ್ಯಾಂಕ್ ನ ನೌಕರರ ಮೂಲಕ ರಕ್ತವನ್ನು ಕೊಡಿಸಿದ್ದರು.
ನಂತರ ನಾವಿಬ್ಬರೂ ಚೇತರಿಸಿಕೊಂಡೆವು. ಬಳಿಕ ಬ್ಯಾಂಕ್ ಉದ್ಯೋಗದಲ್ಲಿ ಮುಂದುವರಿದೆ. ನಂತರ ಮಣಿಪಾಲ್ ಗ್ರೂಪ್ ನ ಇನ್ಸಿಟ್ಯೂಶನ್ ಸೇರಿಕೊಂಡು ನಿವೃತ್ತಿವರೆಗೂ ಕೆಲಸ ಮಾಡಿದೆ. ಇದೀಗ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ವಿಲೀನಗೊಂಡಿದೆ. ಕುಶಾವತಿ ನದಿಗೆ ಅಡ್ಡಲಾಗಿರುವ ಹಳೆಯ ಸೇತುವೆಯನ್ನು ಆ ಅಪಾಯಕಾರಿ ತಿರುವು ಇಲ್ಲದ ಹೊಸ ಸೇತುವೆಯನ್ನಾಗಿ ಬದಲಾಯಿಸಲಾಗಿದೆ. ಈಗ ಎಲ್ಲವೂ ಒಂದು ಅಚ್ಚಳಿಯದ ನೆನಪಾಗಿ ಉಳಿದಿದೆ.
ಟಿ.ರಾಮಚಂದ್ರ ಶಾಸ್ತ್ರಿ
ಶಂಕರನಾರಾಯಣ, ಬೆಂಗಳೂರು