ನೂರಾರು ಭಕ್ತರಿಂದ ಬಿಳಿಗಿರಿ ರಂಗನ ದರ್ಶನ
Team Udayavani, Jun 14, 2020, 5:00 AM IST
ಯಳಂದೂರು: ತಾಲೂಕಿನ ಪ್ರಸಿದ್ಧ ಬಿಳಿಗಿರಿ ರಂಗನ ಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ದೇಗುಲಕ್ಕೆ ಶನಿವಾರ ಭಕ್ತರ ದಂಡೇ ಆಗಮಿಸಿತ್ತು. ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು, ಮಕ್ಕಳಿಗೆ ವೃದ್ಧರಿಗೆ ಪ್ರವೇಶವಿಲ್ಲ, ಮುಡಿ ಸೇವೆ ಇಲ್ಲ ಎಂಬುದಕ್ಕೆ ದೇಗುಲದ ಆಡಳಿತ ಮಂಡಳಿ ಜನತೆ ಭಕ್ತರು ವಾಗ್ವಾದಕ್ಕಿಳಿದರು. ಲಾಕ್ಡೌನ್ ತೆರವುಗೊಂಡ ಬಳಿಕ ದೇವಸ್ಥಾನದ ಬಾಗಿಲು ತೆರೆದಿದೆ.
ಶನಿವಾರ ಇಲ್ಲಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಕೋವಿಡ್-19ರ ನಿಯಮದಂತೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ಥರ್ಮಲ್ ಸ್ಕ್ರೀನಿಂಗ್ ಮಾಡುವಂತೆ ಕೈಗಳಿಗೆ ಸ್ಯಾನಿಟೈಸರ್ ಬಳಸಲು ದೇಗುಲದ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು.
ಮುಡಿಸೇವೆಗೆ ಪಟ್ಟು: ಸರ್ಕಾರದ ನಿಯಮಗಳ ಪ್ರಕಾರ ಮುಡಿಸೇವೆ ಸ್ಥಗಿತಗೊಳಿಸಲಾಗಿದೆ. ಆದರೆ ಭಕ್ತರು ದೇಗುಲದ ಆಡಳಿತ ಮಂಡಲಿ ಜೊತೆ ಮುಡಿಸೇವೆಗೆ ಪಟ್ಟು ಹಿಡಿದರು. 10 ವರ್ಷದೊಳಗಿನ ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ ಎಂಬ ಸೂಚನಾ ಫಲಕ ಹಾಕಿದ್ದರೂ ಮಕ್ಕಳು ವೃದ್ಧರಿಗೆ ದರ್ಶನ ನೀಡಲೇಬೇಕು ಎಂದು ಭಕ್ತರು ವಾಗ್ವಾದಕ್ಕಿಳಿದರು.
ದೇಗುಲಕ್ಕೆ ಬರುವ ಭಕ್ತರಿಗೆ ನಿಯಮಾವಳಿಗಳ ಬಗ್ಗೆ ತಿಳಿ ಹೇಳಿದರೂ ಇದಕ್ಕೆ ಸ್ಪಂದಿಸುತ್ತಿಲ್ಲ. ನಿಯಮಗಳನ್ನು ಗಾಳಿಗೆ ತೂರಿದರೆ ಸೋಂಕಿನ ಅಪಾಯ ತಪ್ಪಿದ್ದಲ್ಲ. ಇವೆ ಲ್ಲದರ ನಡುವೆಯೂ ಜನರನ್ನು ಸಂಭಾಳಿಸುವುದು ಕಷ್ಟ ವಾಗಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳು ಕ್ರಮ ವಹಿಸ ಬೇಕು ಎಂದು ಕೆಲ ಭಕ್ತರು ಆಗ್ರಹಿಸಿದರು.