ಪ್ರಿನ್ಸಿಪಾಲ್ ಆಗಿ ನೀವು ಕಸ ಗುಡಿಸ್ತೀರಾ?
Team Udayavani, Nov 18, 2020, 8:20 PM IST
ಅದೊಮ್ಮೆ, ನಮ್ಮಕಾಲೇಜಿನ ಗ್ರೂಪ್ “ಡಿ’ ನೌಕರಳಿಗೆ ಯಾವುದೋ ವಿಚಿತ್ರಕಾಯಿಲೆ ಬಂದು,ಒಂದು ವರ್ಷ ಕಾಲೇಜಿ ಗೆ ಬರದಂತಾಯಿತು. ನಮ್ಮ ವಿದ್ಯಾರ್ಥಿಗಳೇ ಕಾಲೇಜನ್ನು ಸ್ವಚ್ಛ ಮಾಡಿ, ಗಿಡಗಳಿಗೆ ನೀರು ಹಾಕುತ್ತಿದ್ದರು. ಅವರೊಂದಿಗೆ ನಾನೂ, ಉಪನ್ಯಾಸಕರೂ ಆಗಾಗಕೈ ಜೋಡಿಸುತ್ತಿದ್ದೆವು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪರೀಕ್ಷೆ ನಡೆಯುವಾಗ ಯಾರೂ ಇರಲಿಲ್ಲ. ಹಾಗಾಗಿ, ನಾನು ನನ್ನ ಚೇಂಬರ್ಕಸ ಗುಡಿಸಿ, ಗಿಡಕ್ಕೆ ನೀರು ಹಾಕಿ, ಆವರಣದಲ್ಲಿಕಸಕಡ್ಡಿಗಳು ಬಿದ್ದಿದ್ದರೆ ತೆಗೆದು ಹಾಕಿ, ಶೌಚಾಲಯಕ್ಕೆ ನೀರು ಹಾಕಿ,ಕೆಲಸ ಮಾಡಲು ಕುಳಿತುಕೊಳ್ಳುತ್ತಿದ್ದೆ.
ಒಂದು ದಿನ ಒಬ್ಬ ಹೆಂಗಸು ಮಗಳನ್ನು ಮೇ ತಿಂಗಳಲ್ಲಿ ದಾಖಲು ಮಾಡಿಸಲು ವಿವರಗಳನ್ನುಕೇಳಲು ಬಂದಿದ್ದಳು. “ಅವರಿಲ್ವಾ?’ ಎಂದಳು. “ಯಾರು?’ ಎಂದೆ. “ಅದೇ ಪ್ರಿನ್ಸಿಪಾಲರು’ ಅಂದಳು. ನನಗೆ ಅಚ್ಚರಿಯಾಯಿತು. “ನಾನೇಕಣಮ್ಮ ಪ್ರಿನ್ಸಿಪಾಲ್’ ಅಂದೆ. ನನ್ನನ್ನೇ ಒಮ್ಮೆ ವಿಚಿತ್ರವಾಗಿ ನೋಡಿ ಹೀಗೆ ಹೇಳಿದಳು. “ಅದೇ, ಮೂರು ದಿನದಿಂದ ಪ್ರಿನ್ಸಿಪಾಲ್ ಯಾಕೆ ಬಂದಿಲ್ಲ, ಇವತ್ತು ಕೇಳೇ ಬಿಡೋಣ ಅಂತ ಬಂದೆ. ಈ ಕಾಲೇಜಿನಲ್ಲಿ ಕಸ ಗುಡಿಸುವವರು ನೋಡೋದಕ್ಕೆ ಚೆನ್ನಾಗಿದ್ದಾರೆ, ಎಷ್ಟು ಚೆನ್ನಾಗಿ ಸೀರೆ ಉಟ್ಕೊಂಡಿರ್ತಾರೆ.ಕಸ ಗುಡಿಸುವವರೂ ಹೀಗಿದ್ದ ಮೇಲೆ ಕಾಲೇಜು ಚೆನ್ನಾಗಿರಬೇಕು ಅಂತ ಮಗಳಿಗೆ ಹೇಳ್ತಿದ್ದೆ. “ಅಯ್ಯೋ, ಪ್ರಿನ್ಸಿಪಾಲ್ ಆಗಿ ನೀವು ಕಸಗುಡಿಸ್ತೀರಾ? ಆ ಕೆಲಸದವಳು ಯಾಕೆಬಂದಿಲ್ಲ? ಅವಳಿಗೆ ಉಗಿದುಉಪ್ಪು ಹಾಕಬಾರದಾ? ಅವಮಾನ ಆಗಲ್ವಾ ನಿಮಗೆ?ನಾವು ಬಡವರು ಇರಬಹುದು, ಇಂಥ ದರಿದ್ರಕಾಲೇಜಿಗೆ ಮಾತ್ರ ಸೇರಿಸಲ್ಲ’ ಅಂತ ಮಗಳನ್ನು ವಾಪಸ್ ಕರೆದುಕೊಂಡುಹೋದಳು! ಸದಾ ಆಳಿಸಿಕೊಳ್ಳಲು ಇಷ್ಟಪಡುವ, ಜೀವನ ನಿರ್ವಹಣೆಗೆ ಮಾಡುವ ವೃತ್ತಿಗಳಲ್ಲಿ ಮೇಲು- ಕೀಳನ್ನು ಸೃಷ್ಟಿಸಿ ಅಗೌರವಿಸುವ ಜನರ ರೀತಿ ನನ್ನನ್ನು ದಂಗುಬಡಿಸಿತು.
– ಎಂ.ಆರ್. ಕಮಲ