ಕರಪಾವತಿಯ ಇತರೆ ಕೆಲವು ವಿಚಾರಗಳು


Team Udayavani, Aug 26, 2019, 5:28 AM IST

47

ನೀವೆಲ್ಲಾ ಈಗಾಗಲೇ ಗಮ ನಿಸಿರುವಂತೆ ಕರಹೇಳಿಕೆ ಸಲ್ಲಿಕೆಯ (ರಿಟರ್ನ್ಸ್ ಫೈಲಿಂಗ್‌) ಗಡುವನ್ನು ಜುಲೈ 31, 2019ರಿಂದ ಆಗಸ್ಟ್‌ 31, 2019ಕ್ಕೆ ವಿಸ್ತರಿಸಲಾಗಿದೆ. ಹಾಗಾಗಿ, ಈವರೆಗೂ ರಿಟರ್ನ್ ಫೈಲಿಂಗ್‌ ಮಾಡದೆ ನಿದ್ದೆ ಮಾಡುತ್ತಾ ಕುಳಿತ ಡೇರ್‌ಡೆವಿಲ್ ಕುಳವಾರುಗಳು ಇನ್ನು ಐದು ದಿನಗಳೊಳಗೆ ಕಡ್ಡಾಯವಾಗಿ ರಿಟರ್ನ್ ಫೈಲಿಂಗ್‌ ಮಾಡಲೇ ಬೇಕು.

ಆದಾಯ ಕರ ಮತ್ತು ರಿಟರ್ನ್ ಫೈಲಿಂಗ್‌ ಬಗ್ಗೆ ಕಳೆದ ಕೆಲ ವಾರಗಳಲ್ಲಿ ಸಾಕಷ್ಟು ಕೊರೆದಿದ್ದೇನೆ. ಈ ವಾರ ಕರ ಪಾವತಿ ಯಾವ ರೀತಿಯಲ್ಲಿ ಮಾಡಲ್ಪಡುತ್ತದೆ? ಅದಕ್ಕೇನಾರ ವೇಳಾಪಟ್ಟಿ ಇದೆಯೇ? ರಿಟರ್ನ್ಸ್ ಸಲ್ಲಿಕೆಯ ವೇಳಾಪಟ್ಟಿ ಏನು? ಈ ವೇಳಾಪಟ್ಟಿ ವಿಳಂಬವಾದರೆ ಏನು ಗತಿ ಇತ್ಯಾದಿ ವಿಧಿ ವಿಧಾನಗಳ ಬಗ್ಗೆ ಒಂದಿಷ್ಟು ಕೊರೆಯೋಣ.

ಕರ ಪಾವತಿಯ ವಿಧಾನಗಳು ಈ ಕೆಳಗಿನಂತೆ:

ಟಿಡಿಎಸ್‌
ಹಲವು ಬಾರಿ ನಾವು ಮೂಲದಲ್ಲಿಯೇ ಕರ ಕಡಿಸಿಕೊಳ್ಳುತ್ತೇವೆ. ಅದಕ್ಕೆ, ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್ ಸೋರ್ಸ್‌ ಅಥವಾ ಟಿಡಿಎಸ್‌ ಎಂದು ಹೆಸರು. ಸಂಬಳದ ಆದಾಯ ಇರುವವರಿಗೆ ಈ ರೀತಿ ‘ಮೂಲ’ದಲ್ಲಿ ಕಡಿಸಿಕೊಂಡ ತಿಗಣೆ ಅನುಭವ ಸಾಕಷ್ಟು ಇರುತ್ತದೆ! ಆದರೆ, ಇತರ ಎಷ್ಟೋ ನಮೂನೆಯ ಆದಾಯಗಳಲ್ಲಿ ಮೂಲದಲ್ಲಿಯೇ ಕರ ಕಡಿಯುವ ಟಿಡಿಎಸ್‌ ಸೌಲಭ್ಯ ಇರುವುದಿಲ್ಲ. ಇದ್ದರೂ ಎಷ್ಟೋ ಎಡೆಗಳಲ್ಲಿ ಅದು ಪೂರ್ತಿ ತೆರಿಗೆಯ ಪ್ರಮಾಣದಲ್ಲಿ ಇರುವುದಿಲ್ಲ. ಭಾಗಶಃ ಮಾತ್ರ ಆಗಿರುತ್ತದೆ. ಉದ್ಯೋಗಸ್ಥರ ಸಂಬಳದ ಆದಾಯದಲ್ಲಿ ಮಾತ್ರ ಅದು ಪೂರ್ತಿ ಪ್ರಮಾಣದಲ್ಲಿ ಕಡಿತವಾಗುತ್ತದೆ. ಅವರ ವಿಷಯದಲ್ಲೂ ಕೂಡಾ ಅವರ ಸಂಬಳೇತರ ಆದಾಯದ (ಬ್ಯಾಂಕ್‌ ಬಡ್ಡಿ, ಬಾಡಿಗೆ, ಇತರ ಆದಾಯ) ಮೇಲೆ ಸಂಪೂರ್ಣ ಟಿಡಿಎಸ್‌ ಕಡಿತವಾಗಿರಲಾರದು. ಒಟ್ಟಾಗಿ ನೋಡಿದರೆ ಹಲವರಿಗೆ ಟಿಡಿಎಸ್‌ ಕಡಿತವನ್ನೂ ಮೀರಿ ಕರ ಕಟ್ಟುವುದು ಬಾಕಿ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಕರ ಕಟ್ಟುವುದು ಹೇಗೆ? ಕಟ್ಟದಿದ್ದರೆ ಏನಾಗುತ್ತದೆ?

ಎಡ್ವಾನ್ಸ್‌ ಟ್ಯಾಕ್ಸ್‌
ಆದಾಯ ತೆರಿಗೆ ಕಾನೂನು ಪ್ರಕಾರ ಟಿಡಿಎಸ್‌ ಹೊರತಾಗಿ ವಾರ್ಷಿಕ ರೂ. 10,000 ಮೀರಿದ ಕರಬಾಕಿ ಇರುವವರು ವರ್ಷಾಂತ್ಯಕ್ಕೆ ಕಾಯದೆ ಆದಾಯ ಸಂಭವಿಸಿದಂತೆಲ್ಲಾ ಮುಂಗಡವಾಗಿಯೇ ತೆರಿಗೆ ಕಟ್ಟುವುದು ಕಡ್ಡಾಯ. ಟಿಡಿಎಸ್‌ ಕಡಿತ ಯಾವುದಾದರೂ ಮೂಲದಲ್ಲಿ ಆಗಿದ್ದರೆ ಒಟ್ಟು ಕರದಿಂದ ಅದನ್ನು ಕಳೆದು ಉಳಿದ ಕರವನ್ನು ಲೆಕ್ಕ ಹಾಕಿ ಮುಂಗಡ ತೆರಿಗೆಯಾಗಿ ಕಟ್ಟತಕ್ಕದ್ದು. ಆದರೂ 2012 ಬಜೆಟ್ ಅನುಸಾರ ಬಿಸಿನೆಸ್‌ ಆದಾಯ ಇಲ್ಲದ ಹಿರಿಯ ನಾಗರಿಕರಿಗೆ ಮುಂಗಡ ತೆರಿಗೆ ಕಟ್ಟುವುದರಿಂದ ಮುಕ್ತಿ ನೀಡಲಾಗಿದೆ ಎಂಬುದನ್ನು ಗಮನಿಸಿ.

ವೇಳಾಪಟ್ಟಿ

ಟಿಡಿಎಸ್‌ ಕಡಿತದ ನಂತರವೂ ಬಾಕಿ ಉಳಿದ ತೆರಿಗೆ ಮೊತ್ತವನ್ನು ಮುಂಗಡ ತೆರಿಗೆಯಾಗಿ ವರ್ಷದುದ್ದಕ್ಕೂ ಒಟ್ಟು 4 ಕಂತುಗಳಾಗಿ ಈ ಕೆಳಗಿನಂತೆ ಕಟ್ಟತಕ್ಕದ್ದು.

•15 ಜೂನ್‌ ಒಳಗೆ – ಒಟ್ಟು ತೆರಿಗೆಯ ಕನಿಷ್ಠ ಶೇ. 15

•15 ಸೆಪ್ಟೆಂಬರ್‌ ಒಳಗೆ – ಒಟ್ಟು ತೆರಿಗೆಯ ಕನಿಷ್ಠ ಶೇ. 45

•15 ಡಿಸೆಂಬರ್‌ ಒಳಗೆ – ಒಟ್ಟು ತೆರಿಗೆಯ ಕನಿಷ್ಠ ಶೇ. 75

•15 ಮಾರ್ಚ್‌ ಒಳಗೆ – ಒಟ್ಟು ತೆರಿಗೆಯ ಶೇ. 100

ಆದಾಯವನ್ನು ಮುಂಗಡವಾಗಿಯೇ ಊಹಿಸುವುದು ಹಲವು ಬಾರಿ ಕಷ್ಟವಾದ ಕಾರಣ ಈ ಲೆಕ್ಕಾಚಾರದ ಕನಿಷ್ಟ ಶೇ.90 ಆದರೂ ವೇಳಾಪಟ್ಟಿ ಪ್ರಕಾರ ಕಟ್ಟುವುದು ಕಡ್ಡಾಯ.

ಉಳಿದ ಶೇ.10 ತೆರಿಗೆಯನ್ನು ವರ್ಷ ಮುಗಿದು ಆದಾಯ ಖಚಿತವಾಗಿ ತಿಳಿದ ಬಳಿಕ ರಿಟರ್ನ್ ಸಲ್ಲಿಸುವ ಆ. 31, 2019ಕ್ಕೆ ಕಟ್ಟಿದರೂ ಸಾಕು ಬಡ್ಡಿಗಿಡ್ಡಿ ಇಲ್ಲದೆ. ಈ ಅಂತಿಮ ಕಂತಿಗೆ ‘ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್‌’ ಅನ್ನುತ್ತಾರೆ.

ಈ ರೀತಿ ಟಿಡಿಎಸ್‌, ಅಡ್ವಾನ್ಸ್‌ ಟ್ಯಾಕ್ಸ್‌ ಹಾಗೂ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್‌ – ಈ ಮೂರು ವಿಧಾನಗಳಲ್ಲಿ ನಿಮ್ಮ ಕರಭಾರ ಸಂಪೂರ್ಣವಾಗಿ ನಿವೃತ್ತಿಯಾಗಬೇಕು.

ಒಂದು ವೇಳೆ ಈ ಸಮಯಪಟ್ಟಿಗೆ ಅನುಸಾರವಾಗಿ ಕರಕಟ್ಟದಿದ್ದರೆ ಏನಾಗುತ್ತದೆ? ಇದು ನಿಮ್ಮ ಮುಂದಿನ ಪ್ರಶ್ನೆ. ಹಾಗಾಗದಿದ್ದಲ್ಲಿ ಬಡ್ಡಿಗಳ ಸರಮಾಲೆಯೇ ಇದೆ.

ವಿಳಂಬ ಬಡ್ಡಿ

ಸೆಕ್ಷನ್‌ 234ಬಿ ಅಡಿಯಲ್ಲಿ ಮುಂಗಡ ಕರದ (ಎಡ್ವಾನ್ಸ್‌ ಟ್ಯಾಕ್ಸ್‌ ) ಕನಿಷ್ಟ ಶೇ. 90 ಆದರೂ ವರ್ಷಾಂತ್ಯದ (ಮಾರ್ಚ್‌ 31, 2019) ಒಳಗೆ ಕರಪಾವತಿ ಮಾಡದಿದ್ದಲ್ಲಿ ವಿಳಂಬಾವಧಿಯ ಮೇಲೆ ಮಾಸಿಕ ಶೇ. 1 ಬಡ್ಡಿ ವಿಧಿಸಲಾಗುತ್ತದೆ. ಈ ಬಡ್ಡಿಯನ್ನು ತೆರಿಗೆ ಬಾಕಿ ಮೊತ್ತದ ಶೇ.1 ಪ್ರತಿ ತಿಂಗಳ ಅಥವಾ ಅದರ ಭಾಗದ ಲೆಕ್ಕದಲ್ಲಿ ವಿಧಿಸಲಾಗುತ್ತದೆ. ಇದು ಬಾಕಿ ಮೊತ್ತದ ಮೇಲೆ ಜುಲೈ 31ರ ವರೆಗೆ ನಾಲ್ಕು ತಿಂಗಳುಗಳಿಗೆ ಶೇ.4 ಆಗಬಹುದು. (ಈ ಬಾರಿ ಐದು ತಿಂಗಳು, ಆ. 31ರ ವರೆಗೆ ಶೇ.5) ಇದು ಸರಳ ಬಡ್ಡಿ, ಚಕ್ರಬಡ್ಡಿ ಅಲ್ಲ.

ಅದಲ್ಲದೆ ಸೆಕ್ಷನ್‌ 234ಸಿ ಅಡಿಯಲ್ಲಿ ಮೇಲ್ಕಾಣಿಸಿದ ವೇಳಾಪಟ್ಟಿಯನ್ನು ಅನುಸರಿಸದೇ ತಡವಾಗಿ ತೆರಿಗೆ ಕಟ್ಟಿದಲ್ಲಿ ವಿಳಂಬದ ಕಾಲಕ್ಕೆ ಮಾಸಿಕ ಅಥವಾ ಅದರ ಭಾಗಕ್ಕೆ ಶೇ.1 ಹೆಚ್ಚುವರಿ ಬಡ್ಡಿಯನ್ನು ಕೂಡಾ ವರ್ಷಾಂತ್ಯದ (ಮಾರ್ಚ್‌ 31) ವರೆಗೆ ವಿಧಿಸಲಾಗುತ್ತದೆ. ಈ ಲೆಕ್ಕಾಚಾರವನ್ನು ಪ್ರತಿ ಕಂತಿಗೆ ಪ್ರತ್ಯೇಕವಾಗಿ ಮಾಡಲಾಗುತ್ತದೆ.

ಅಂದರೆ ಏನೂ ಕಟ್ಟದೆ ಸುಖಾಸುಮ್ಮನೆ ಕಾಲಕಳೆದು ಜುಲೈ/ಆಗಸ್ಟಿನಲ್ಲಿ ಎಚ್ಚೆತ್ತವರಿಗೆ ಎರಡೂ ಸೆಕ್ಷನ್‌ ಅಡಿಯಲ್ಲಿ ಈ ದಂಡ ಆಗುತ್ತದೆ. ಆದರೆ ಈ ದಂಡಗಳು ಬಿಸಿನೆಸ್‌ ಆದಾಯ ಇಲ್ಲದ ಹಿರಿಯ ನಾಗರಿಕರಿಗೆ ಅನ್ವಯಿಸುವುದಿಲ್ಲ. ಹಾಗಾಗಿ 60 ದಾಟಿದ ಹಿರಿಯ ನಾಗರಿಕರು ಜುಲೈ/ಆಗಸ್ಟ್‌ 31ರ ಒಳಗೆ ಯಾವುದೇ ದಂಡ ಇಲ್ಲದೆ ಆದಾಯ ಕರ ಲೆಕ್ಕ ಹಾಕಿ ಬಾಕಿ ಮೊತ್ತ ಕಟ್ಟಿದರೆ ಸಾಕು.

ರಿಟರ್ನ್ ಸಲ್ಲಿಕೆಯಲ್ಲಿ ವಿಳಂಬ

ಕೆಲವೊಮ್ಮೆ ರಿಟರ್ನ್ ಫೈಲಿಂಗಿನ ಕೊನೆಯ ದಿನಾಂಕ ತಪ್ಪಿ ಹೋಗುತ್ತದೆ. ಈ ಬಾರಿ ಆ.31ರಂದು ಕರ ಹೇಳಿಕೆ/ರಿಟರ್ನ್ ಫೈಲಿಂಗ್‌ ಮಾಡದಿದ್ದಲ್ಲಿ ಏನಾಗುತ್ತದೆ? ಇದು ಸಹಜವಾದ ಪ್ರಶ್ನೆ. ಇದರಲ್ಲಿ ಎರಡು ವಿಚಾರಗಳಿವೆ. ಕರಪಾವತಿ ಬಾಕಿ ಇಟ್ಟುಕೊಂಡು ಹೇಳಿಕೆ ಸಲ್ಲಿಸದೆ ಇರುವುದು ಮತ್ತು ಕರ ಬಾಕಿ ಇಲ್ಲದೆ ಕೇವಲ ಹೇಳಿಕೆ ಸಲ್ಲಿಕೆ ಬಾಕಿ ಇರುವಂತದ್ದು.

•ಕರಬಾಕಿ ಇರುವವರು

ಆ.31, 2019ರ ಬಳಿಕವೂ ಕರ ಬಾಕಿಯನ್ನು ಕಟ್ಟದೇ ಇದ್ದರೆ ಪ್ರತಿ ತಿಂಗಳ ವಿಳಂಬಕ್ಕೆ ಸೆಕ್ಷನ್‌ 234ಎ ಪ್ರಕಾರ ಬಾಕಿ ಮೊತ್ತದ ಮೇಲೆ ಶೇ.1 ಬಡ್ಡಿ ಹೆಚ್ಚುವರಿಯಾಗಿ ಸೇರಿಸಲ್ಪಡುತ್ತದೆ. (ಇದು ಮೇಲಿನ ಎರಡು ಸೆಕ್ಷನ್ನುಗಳ ದಂಡದ ಹೊರತಾಗಿ) ಅದು ಮುಂದಿನ ವರ್ಷದ 2020 ಮಾರ್ಚ್‌ 31 ರವರೆಗೆ ಮುಂದುವರಿಯಬಹುದು.

•ಕರಬಾಕಿ ಇಲ್ಲದವರು

ಕರಕಟ್ಟಲು ಯಾವುದೇ ಬಾಕಿ ಇಲ್ಲದೆ ಕೇವಲ ಹೇಳಿಕೆ ಸಲ್ಲಿಕೆಯಲ್ಲಿ ಮಾತ್ರ ವಿಳಂಬವಾದರೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ. ಹಾಗೆ ಹೇಳಿದರೂ ಕೂಡಾ ಅಂತಹ ವಿಳಂಬಕ್ಕೆ ಅದರದ್ದೇ ಆದ ಅಡ್ಡ ಪರಿಣಾಮಗಳು ಇವೆ.

ಮೊತ್ತ ಮೊದಲನೆಯದಾಗಿ, ಕರ ಹೇಳಿಕೆಯಲ್ಲಿ ರಿಫ‌ಂಡ್‌ ಕೇಳಿದವರಿಗೆ ರಿಫ‌ಂಡ್‌ ಬರುವುದು ತಡವಾಗುತ್ತದೆ. ಅಷ್ಟೇ ಅಲ್ಲದೆ ನಿಮಗೆ ಬರಬೇಕಾದ ರಿಫ‌ಂಡ್‌ ಮೊತ್ತದ ಮೇಲೆ ಸಿಗುವ ಬಡ್ಡಿಯ ಮೊತ್ತದಲ್ಲಿ ಕಡಿತವಾಗುತ್ತದೆ. ಸಮಯಕ್ಕೆ ಸರಿಯಾಗಿ ಹೇಳಿಕೆ ಸಲ್ಲಿಸಿ ರಿಫ‌ಂಡ್‌ ಕೇಳಿದವರಿಗೆ 1 ಎಪ್ರಿಲ್ 2018 ರಿಂದ ಆರಂಭಗೊಂಡಂತೆ ರಿಫ‌ಂಡ್‌ ಬರುವವರೆಗಿನ ಅವಧಿಗೆ ಮಾಸಿಕ ಶೇ.0.5 ಬಡ್ಡಿ ಸಿಗುತ್ತದೆ. ಕರಹೇಳಿಕೆ ಸಲ್ಲಿಕೆಯಲ್ಲಿ ವಿಳಂಬವಾದರೆ ಆ ಬಡ್ಡಿ ಹೇಳಿಕೆ ಸಲ್ಲಿಕೆಯ ತಿಂಗಳಿನಿಂದ ಮಾತ್ರ ಸಿಗುತ್ತದೆ. ಹಾಗಾಗಿ ರಿಫ‌ಂಡ್‌ ಉಳ್ಳವರು ರಿಟರ್ನ್ ಫೈಲಿಂಗಿನಲ್ಲಿ ವಿಳಂಬ ಮಾಡಲೇಬಾರದು.

ಎರಡನೆಯದಾಗಿ, ದಿನಾಂಕ ಕಳೆದು ಮಾಡಿದ ರಿಟರ್ನ್ ಫೈಲಿಂಗನ್ನು ಪರಿಷ್ಕರಿಸುವಂತಿಲ್ಲ. ಕೆಲವು ಬಾರಿ ನಾವು ಸಲ್ಲಿಸಿದ ಹೇಳಿಕೆಯಲ್ಲಿ ತಪ್ಪುಗಳು ನುಸುಳಿವೆ ಎಂದು ನಮಗೆ ಆಮೇಲೆ ಗೋಚರಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಆ ಹೇಳಿಕೆಗಳನ್ನು ಪರಿಷ್ಕರಿಸಿ ರಿವೈಸ್ಡ್ ರಿಟರ್ನ್ ಫೈಲಿಂಗ್‌ ಮಾಡುವ ಅವಕಾಶ ಯಾವತ್ತೂ ಇರುತ್ತದೆ. ಆದರೆ ತಡವಾಗಿ ಫೈಲಿಂಗ್‌ ಮಾಡಿದ ಪ್ರಭೃತಿಗಳಿಗೆ ಆ ಅವಕಾಶ ಇರುವುದಿಲ್ಲ.

ಮೂರನೆಯದಾಗಿ, ತಡವಾಗಿ ಕರ ಹೇಳಿಕೆ ಫೈಲಿಂಗ್‌ ಮಾಡುವ ಮಹನೀಯರಿಗೆ ತಮ್ಮ ಯಾವುದೇ ನಷ್ಟಗಳನ್ನು ಮನೆಮಟ್ಟು ಆದಾಯ/ನಷ್ಟಗಳನ್ನು ಹೊರತಾಗಿ ಮುಂದೊಯ್ಯಲು (ಕ್ಯಾರಿ ಫಾರ್ವರ್ಡ್‌) ಅಥವಾ ಹೊಂದಾಣಿಕೆ (ಸೆಟ್ ಆಫ್) ಮಾಡಲು ಸಾಧ್ಯವಿಲ್ಲ. ಸಕಾಲಕ್ಕೆ ಸಲ್ಲಿಕೆ ಮಾಡಿದವರು ಸೆಟ್-ಆಫ್ ಹಾಗೂ ಮುಂದಿನ 8 ವರ್ಷಗಳ ಕಾಲ ನಷ್ಟಗಳನ್ನು ಮುಂದೊಯ್ಯಬಹುದು.

ಬಹುತೇಕ ಜನರು ಆದಾಯ ಕರದ ಬಗ್ಗೆ ಕೊನೆ ಘಳಿಗೆಯಲ್ಲಿ ಎಚ್ಚೆತ್ತುಕೊಳ್ಳುತ್ತಾರೆ. ಆವಾಗ ಕರ ಪಾವತಿಯನ್ನೂ ರಿಟರ್ನ್ ಫೈಲಿಂಗ್‌ ಅನ್ನೂ ಒಟ್ಟಾಗಿ ಮಾಡಿದರೆ ಸಾಕು ಅನ್ನುವ ಉದಾಸೀನ ಭಾವ ಹಲವರಿಗೆ. ಆದರೆ, ಮೇಲೆ ತಿಳಿಸಿದ ವೇಳಾ ಪಟ್ಟಿಯ ಪ್ರಕಾರ ಕರಪಾವತಿ ಮಾಡದೆ ಇದ್ದಲ್ಲಿ ವಿಳಂಬ ಬಡ್ಡಿ ಬರುತ್ತದೆ ಎನ್ನುವ ವಿಚಾರವನ್ನು ಮರೆಯುತ್ತಾರೆ. ಪ್ರತಿ ವರ್ಷವೂ ಅನ್ಯಾಯವಾಗಿ ಇಂತಹ ಬಡ್ಡಿಗೆ ನೂರಾರು ರುಪಾಯಿಗಳನ್ನು ಪಾವತಿ ಮಾಡುತ್ತಾರೆ. ಶಿಸ್ತುಬದ್ಧವಾಗಿ ವೇಳಾಪಟ್ಟಿಯ ಪ್ರಕಾರ ಕರ ಪಾವತಿ ಮಾಡುತ್ತಾ ಬಂದಲ್ಲಿ ಬಡ್ಡಿ ಕಟ್ಟುವ ಪ್ರಮೇಯ ಬರುವುದಿಲ್ಲ.

ಹೊಸ ಸೆಕ್ಷನ್‌ 234ಊ
ಕರ ಬಾಕಿ ಮತ್ತು ಬಡ್ಡಿಯ ವಿಚಾರ ಒತ್ತಟ್ಟಿಗಿರಲಿ. ಅದನ್ನು ಹೊರತುಪಡಿಸಿ ಕೇವಲ ರಿಟರ್ನ್ ಫೈಲಿಂಗ್‌ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಅದಕ್ಕೆ ಪ್ರತ್ಯೇಕ ವಿಳಂಬ ದಂಡ ಇದೆ. ಇದಕ್ಕೂ ಬಡ್ಡಿಗೂ ಸಂಬಂಧವಿಲ್ಲ. ಇದು ಲೇಟ್ ಫೈಲಿಂಗ್‌ ಗೆ ಸಂಬಂಧಪಟ್ಟದ್ದು ಮತ್ತು ಈ ಫೀಸ್‌ ಕರ ಬಾಕಿ ಇರದವರಿಗೂ, ಇರುವವರಿಗೂ, ರಿಫ‌ಂಡ್‌ ಇರುವವರಿಗೂ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಒಟ್ಟಾರೆ ರಿಟರ್ನ್ ಫೈಲಿಂಗ್‌ ಕಡ್ಡಾಯವಿರುವ (ಗ್ರಾಸ್‌ ಟೋಟಲ್ ಆದಾಯ ರೂ. 2.5 ಲಕ್ಷ ಮೀರಿದವರು) ಎಲ್ಲರಿಗೂ ಅನ್ವಯವಾಗುತ್ತದೆ. ಈ ವರ್ಷದವರೆಗೆ ಅಧಿಕಾರಿಗಳ ಇಚ್ಛೆಯಾನುಸಾರ ಇದ್ದ ವಿಳಂಬ ದಂಡ ಈ ವರ್ಷದಿಂದ ಕಡ್ಡಾಯವಾಗಿದೆ. ಡಿಸೆಂಬರ್‌ ಅಂತ್ಯದವರೆಗೆ ಉಂಟಾದ ರಿಟರ್ನ್ಸ್ ಫೈಲಿಂಗ್‌ನಲ್ಲಿನ ವಿಳಂಬಕ್ಕೆ ರೂ. 5,000 ಹಾಗೂ ಮುಂದಿನ ಮಾರ್ಚ್‌ 31ರವರೆಗಿನ ವಿಳಂಬಕ್ಕೆ ರೂ. 10,000 ವರೆಗೆ ದಂಡ ಕಡ್ಡಾಯವಾಗಿ ಬೀಳುತ್ತದೆ. ಆದರೂ ಟೋಟಲ್ ಇನ್ಕಂ ರೂ. 5 ಲಕ್ಷದ ಒಳಗಿರುವವರಿಗೆ ಗರಿಷ್ಟ ದಂಡ ರೂ. 1,000 ಮಾತ್ರ.

ರಿಟರ್ನ್ ಫೈಲಿಂಗ್‌ ಗೆ ಕಟ್ಟ ಕಡೆಯ ದಿನಾಂಕ

ಕರ ಬಾಕಿ ಇರಲಿ, ಇಲ್ಲದೆ ಇರಲಿ ಹೊಸ ಕಾನೂನು ಪ್ರಕಾರ ತಡವಾಗಿ ರಿಟರ್ನ್ಸ್ ಫೈಲಿಂಗ್‌ ಮಾಡಲು ಆಯಾ ಅಸೆಸ್ಮೆಂಟ್ ವರ್ಷದ ಮಾರ್ಚ್‌ 31 ಕಟ್ಟ ಕಡೆಯ ದಿನಾಂಕ. (ಹಳೆ ಕಾನೂನಿನಲ್ಲಿ ಆ ಅವಧಿ ಇನ್ನೂ ಒಂದು ವರ್ಷ ಜಾಸ್ತಿ ಇತ್ತು) ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಇದೇ ಮಾರ್ಚ್‌ 31, 2020 ವಿತ್ತ ವರ್ಷ 2018-19ಕ್ಕೆ ಕಟ್ಟ ಕಡೆಯ ದಿನಾಂಕ. ಈ ಗಡು ದಾಟಿದರೆ ತಡವಾದ ರಿಟರ್ನ್ಸ್ ಫೈಲಿಂಗ್‌ ಕೂಡಾ (ಬಿಲೇಟೆಡ್‌) ಮಾಡಲು ಬರುವುದಿಲ್ಲ. ಅಮೇಲೆ ಏನಿದ್ದರೂ ಇಲಾಖೆಯನ್ನು ಸಂಪರ್ಕಿಸುತ್ತಲೋ, ಅವರ ನೋಟೀಸಿಗೆ ಉತ್ತರಿಸುತ್ತಲೋ ಕಾನೂನನ್ನು ಎದುರಿಸುವುದು ಮಾತ್ರ ಉಳಿದ ಉಪಾಯ. ವೃಥಾ ಕಾನೂನಿನ ಕೈಗೆ ಸಿಕ್ಕಿ ಹಾಕಿಕೊಳ್ಳಬೇಡಿ. ಸಮಯಕ್ಕೆ ಸರಿಯಾಗಿ ಬಾಕಿ ಕರ ಕಟ್ಟಿ ರಿಟರ್ನ್ಸ್ ಫೈಲಿಂಗ್‌ ಮಾಡಿ.

ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.