ಶುಲ್ಕ ನಿಗದಿ: ಹೊಸ ಸರಕಾರ ವಿದ್ಯಾರ್ಥಿಗಳ ಹಿತ ಕಾಯಲಿ


Team Udayavani, Jul 4, 2018, 8:21 AM IST

higher-education.jpg

ವೃತ್ತಿಪರ ಕಾಲೇಜುಗಳ ಹಿತಾಸಕ್ತಿ ಕಾಯಲು ಬದ್ಧರಾಗಿರುವ ಕೆಲವು ಹಿರಿಯ ಅಧಿಕಾರಿಗಳು ಶುಲ್ಕ ನಿಗದಿ ಸಮಿತಿಯಿಂದ ದೂರವುಳಿಯಲು ಯತ್ನಿಸುತ್ತಿದ್ದಾರೆ. ಸಾಲದೆಂಬಂತೆ, ಶುಲ್ಕ ನಿಗದಿಗೆ ಸಂಬಂಧಿಸಿ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಸಹಮತದ ಒಪ್ಪಂದ ಮಾಡಿಕೊಳ್ಳುವಂತೆ ಪ್ರತಿಪಾದಿಸುತ್ತಿರುವುದು ಬೆರಗು ಮೂಡಿಸುತ್ತಿದೆ. ಅಂತಹ ಒಪ್ಪಂದಗಳ ಕುರಿತಾಗಿ ಸಮಿತಿಯು ನಕಾರಾತ್ಮಕ ಭಾವನೆ ತಾಳಿರುವುದನ್ನು ತಿಳಿದೂ ಅವರು ಅದನ್ನು ಮಾಡುತ್ತಿದ್ದಾರೆ.

ಶುಲ್ಕ ನಿಗದಿಗೆ ಸಂಬಂಧಿಸಿ ಕರ್ನಾಟಕ ಸರಕಾರ ಹಾಗೂ ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಗಳ ನಡುವೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲೂ ಹಗ್ಗಜಗ್ಗಾಟ ನಡೆದೇ ಇರುತ್ತದೆ. ಸ್ನೇಹಿತರ ನಡುವಿನ ಕುಸ್ತಿಯಂತೆ ಕಾಣುವ ಈ ಜಗಳದಲ್ಲಿ ಬಹುಪಾಲು ಸರಕಾರವೇ ಶರಣಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೇ ಗೆಲುವಿನ ನಗೆ ಬೀರುವುದು.

ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಸರಕಾರ ಶುಲ್ಕ ನಿಗದಿ ವಿಚಾರದಲ್ಲಿ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದೊಂದಿಗೆ ಅಥವಾ ನಿರ್ದಿಷ್ಟ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಮತದ ಒಪ್ಪಂದ ಮಾಡಿಕೊಂಡು ವ್ಯವಹರಿಸುತ್ತದೆ. ಸರಕಾರದಲ್ಲಿ ಸಚಿವರೂ ಆಗಿರುವ ಕೆಲವರು ವೃತ್ತಿಪರ ಕಾಲೇಜುಗಳ ಪರವಾದ ಲಾಬಿಯ ಭಾಗವಾಗಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಹಗ್ಗಜಗ್ಗಾಟದಲ್ಲಿ ಸೋಲುವವರು ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಅಥವಾ ಪೋಷಕರು. ಶುಲ್ಕ ಪಾವತಿಸುವವರು ಅವರೇ ಆದರೂ ಶುಲ್ಕ ನಿರ್ಧರಣೆಯ ವಿಚಾರದಲ್ಲಿ ಅವರಿಗೆ ಯಾವ ಧ್ವನಿಯೂ ಇಲ್ಲ. ಎಂಜಿನಿಯರಿಂಗ್‌, ವೈದ್ಯಕೀಯ ಅಥವಾ ಇನ್ಯಾವುದೇ ವೃತ್ತಿಪರ ಕಾಲೇಜುಗಳಿಂದ ಉತ್ತೀರ್ಣರಾಗಿ ಹೊರಬರುವ ಎಲ್ಲ ವಿದ್ಯಾರ್ಥಿಗಳೂ ಉತ್ತಮ ಉದ್ಯೋಗ ಹಾಗೂ ಆಕರ್ಷಕ ವೇತನವನ್ನು ಗಳಿಸಿ, ಶಿಕ್ಷಣಕ್ಕಾಗಿ ತಾವು ಖರ್ಚು ಮಾಡಿದ ಎಲ್ಲ ಹಣವನ್ನೂ ಬೇಗನೆ ಗಳಿಸುತ್ತಾರೆ ಎಂಬ ಭಾವನೆ ಸರಕಾರಕ್ಕೆ ಇದ್ದಂತಿದೆ. ಆದರೆ ಇದು ಭ್ರಮೆ. ವಾಸ್ತವದಿಂದ ಬಹುದೂರವಾಗಿರುವ ವಿಚಾರ.

ಈ ಸಲ ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜ| ಡಿ.ವಿ. ಶೈಲೇಂದ್ರ ಕುಮಾರ್‌ ಅವರು ಮುಖ್ಯಸ್ಥರಾಗಿರುವ ಶುಲ್ಕ ನಿಯಂತ್ರಣ ಸಮಿತಿ ಸಕ್ರಿಯ ವಾಗಿರುವುದರಿಂದ ಈ ವಿಚಾರ ಸ್ವಲ್ಪ ಭಿನ್ನವಾಗಿರುವಂತಿದೆ. ಈ ಸಮಿತಿಯನ್ನು 2006ರ ಕರ್ನಾಟಕ ವೃತ್ತಿ ಶಿಕ್ಷಣ ಕಾಯ್ದೆ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಅನುಸಾರ ರಚಿಸಲಾಗಿದೆ. ಸಮಿತಿಯಲ್ಲಿ ಅಧ್ಯಕ್ಷರ ಹೊರತಾಗಿ ಇಬ್ಬರು ಸದಸ್ಯರಿದ್ದಾರೆ. ಒಬ್ಬರು ವಿಷಯ ತಜ್ಞರಾಗಿರುವ ಎಂ.ಜಿ. ಪ್ರಭಾಕರ್‌ ಹಾಗೂ ಮತ್ತೂಬ್ಬರು ಲೆಕ್ಕ ಪರಿಶೋಧಕರಾದ ಎಚ್‌.ಎಂ. ಬಸವರಾಜ್‌. ಗಮನಾರ್ಹ ವಿಚಾರವೆಂದರೆ, ಶುಲ್ಕ ಸಮಿತಿಯ ರಚನೆಯನ್ನು ಶಾಸನವೇ ವಿಧಿಸಿದ್ದರೂ ಹಾಲಿ ಸಮಿತಿ ಹೈಕೋರ್ಟ್‌ ನಿರ್ದೇಶನದಂತೆ ರಚನೆಯಾಗಿದೆ. 

ಹೀಗಾಗಿ, ಶುಲ್ಕ ನಿಗದಿ ವಿಚಾರದಲ್ಲಿ ಈ ಸಲ ಖಾಸಗಿ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳು ಸರಕಾರ ಹಾಗೂ ವಿದ್ಯಾರ್ಥಿಗಳ ಹೆತ್ತವರಿಗೆ ನಿರ್ದೇಶನಗಳನ್ನು ನೀಡುವುದು ಸಾಧ್ಯವಾಗಲಿಕ್ಕಿಲ್ಲ ಎಂದು ನಿರೀಕ್ಷಿಸಲಾಗಿದೆ.

ಅನುದಾನರಹಿತ ಖಾಸಗಿ ವೃತ್ತಿಪರ ಕಾಲೇಜುಗಳ ಆದಾಯ ಹಾಗೂ ಖರ್ಚುಗಳ ವಿವರವಾದ ಪರಿಶೀಲನೆಯ ಬಳಿಕ ಈ ಸಮಿತಿ ಈ ಶೈಕ್ಷಣಿಕ ವರ್ಷದ ಶುಲ್ಕದಲ್ಲಿ ಶೇ. 8ರಷ್ಟು ಏರಿಕೆ ಮಾಡಲು ಶಿಫಾರಸ್ಸು ಮಾಡಿದೆ. ಆದರೆ ಈಗಿರುವ  ಶುಲ್ಕ ರಚನೆಯಲ್ಲಿ ಶೇ. 15ರಿಂದ ಶೇ. 30ರಷ್ಟು ಏರಿಕೆ ಮಾಡಬೇಕು ಎಂಬುದು ಖಾಸಗಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳ ಸಂಘದ ಬೇಡಿಕೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ. 50ರಷ್ಟು ಶುಲ್ಕ ಏರಿಕೆ ಮಾಡುವಂತೆ ಕೇಳಿದ್ದವು.

ಸಹಮತದ ಒಪ್ಪಂದದ ಸಿಂಧುತ್ವ
ನ್ಯಾಯಸಮ್ಮತವಾದ ಶುಲ್ಕ ನಿಗದಿಯನ್ನು ಶಿಫಾರಸ್ಸು ಮಾಡುವ ಜತೆಗೆ, 2006ರ ಕರ್ನಾಟಕ ವೃತ್ತಿ ಶಿಕ್ಷಣ ಕಾಯ್ದೆ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಅನುಸಾರ, ಸಹಮತದ ಒಪ್ಪಂದಗಳಲ್ಲಿ ಸರಕಾರ ಒಳಗೊಳ್ಳುವಂತಿಲ್ಲ ಎಂದು ಸೂಚಿಸಿದೆ. “ಸುಪ್ರೀಂ ಕೋರ್ಟಿನ ನಿರ್ದೇಶನದಂತೆ, ಸರಕಾರದೊಂದಿಗೆ ವ್ಯವಹರಿಸಿ, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಲಾಭ ಮಾಡಿಕೊಳ್ಳುವುದನ್ನು ತಡೆಗಟ್ಟಲು ಈ ಕಾಯ್ದೆ ರಚನೆಯಾಗಿದೆ. ವಿದ್ಯಾರ್ಥಿಗಳ ಹಿತ ಕಡೆಗಣಿಸಿ ಸರಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಯಾವುದೇ ಖಾಸಗಿ ಒಪ್ಪಂದಗಳನ್ನು ಮಾಡಿಕೊಳ್ಳುವಂತಿಲ್ಲ’ ಎಂದು ಸ್ಪಷ್ಟ ನುಡಿಗಳಲ್ಲಿ ತಿಳಿಸಿದೆ. ವಿದ್ಯಾರ್ಥಿಗಳ ಹಿತ ಹಾಗೂ ಅರ್ಹತೆಯನ್ನು ಬಲಿಗೊಟ್ಟು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಲಾಭ ಮಾಡಿಕೊಳ್ಳುವುದನ್ನು ತಡೆಯುವುದೇ ಕಾಯ್ದೆಯ ಉದ್ದೇಶ. ಇದು ಅಲ್ಪಸಂಖ್ಯಾಕ ಹಾಗೂ ಅಲ್ಪಸಂಖ್ಯಾಕವಲ್ಲದ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಹಾಗಿದ್ದರೂ, ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಶುಲ್ಕ ನಿಯಂತ್ರಣ ಸಮಿತಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಸರಕಾರ ಹಾಗೂ ಖಾಸಗಿ ಕಾಲೇಜುಗಳು ಸಹಿ ಮಾಡಿರುವ ಸಹಮತದ ಒಪ್ಪಂದದ ಸಿಂಧುತ್ವವನ್ನು ಪ್ರಶ್ನಿಸಿ ನಾಗರಿಕರೊಬ್ಬರು ಹೈಕೋರ್ಟ್‌ ಮೊರೆಹೋಗಿದ್ದು ಗಮನಾರ್ಹ.

ಮೂಲ ಕಾಯ್ದೆಗೆ ಸರಕಾರ ಹಲವು ತಿದ್ದುಪಡಿಗಳನ್ನು ತಂದಿರುವುದನ್ನು ಸಮಿತಿ ಉಲ್ಲೇಖೀಸಿದೆ. 2015ರಲ್ಲಿ ತಂದಿರುವ ಪ್ರಮುಖ ತಿದ್ದುಪಡಿಯೊಂದು ಸಹಮತದ ಒಪ್ಪಂದಕ್ಕೆ ಒಳಪಡಲು ಸರಕಾರಕ್ಕೆ ಅವಕಾಶ ನೀಡುವ ಅಂಶವನ್ನು ಒಳಗೊಂಡಿದೆ. ಮಹಾರಾಷ್ಟ್ರ ಸರಕಾರದ ವಿರುದ್ಧ ಪಿ.ಎ. ಇನಾಮ್‌ದಾರ್‌ ಹಾಗೂ ಇತರರು ಹೂಡಿರುವ 2005ರ ದಾವೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ಈ ತಿದ್ದುಪಡಿಯು ವಿರುದ್ಧವಾಗಿದೆ ಹಾಗೂ ಕಾಯ್ದೆಯ ಮೂಲ ಉದ್ದೇಶಕ್ಕೇ ವ್ಯತಿರಿಕ್ತವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪಿನಂತೆ, ಯಾವುದೇ ವೃತ್ತಿಪರ ಶಿಕ್ಷಣ ಸಂಸ್ಥೆಗೆ ಪ್ರವೇಶ, ಅದು ಅಲ್ಪಸಂಖ್ಯಾಕ ಸಂಸ್ಥೆಯಾಗಿರಲಿ ಇಲ್ಲದಿರಲಿ ಸರಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕವೇ ನಡೆಯಬೇಕು. ಅರ್ಹತೆಯ ಮಾನದಂಡದಲ್ಲಿ ಪ್ರವೇಶ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯಬೇಕು. ಶುಲ್ಕ ನಿಗದಿಯನ್ನು ನಿಯಂತ್ರಣ ಸಮಿತಿ ಮಾಡುತ್ತದೆ. ಆದರೆ, ಸಹಮತದ ಒಪ್ಪಂದದ ಮೂಲಕ ಶುಲ್ಕ ನಿಗದಿ ಮಾಡಿಕೊಳ್ಳುವ ಕುರಿತಾಗಿ ಕಾಯ್ದೆಯಲ್ಲಿ ಎಲ್ಲಿಯೂ ಏನನ್ನೂ ಹೇಳಿಲ್ಲ.

ವೃತ್ತಿಪರ ಕಾಲೇಜುಗಳ ಹಿತಾಸಕ್ತಿ ಕಾಯಲು ಬದ್ಧರಾಗಿರುವ ಕೆಲವು ಹಿರಿಯ ಅಧಿಕಾರಿಗಳು ಶುಲ್ಕ ನಿಗದಿ ಸಮಿತಿಯಿಂದ ದೂರವುಳಿಯಲು ಯತ್ನಿಸುತ್ತಿದ್ದಾರೆ. ಸಾಲದೆಂಬಂತೆ, ಶುಲ್ಕ ನಿಗದಿಗೆ ಸಂಬಂಧಿಸಿ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಸಹಮತದ ಒಪ್ಪಂದ ಮಾಡಿಕೊಳ್ಳುವಂತೆ ಪ್ರತಿಪಾದಿಸುತ್ತಿರುವುದು ಬೆರಗು ಮೂಡಿಸುತ್ತಿದೆ. ಅಂತಹ ಒಪ್ಪಂದಗಳ ಕುರಿತಾಗಿ ಸಮಿತಿಯು ನಕಾರಾತ್ಮಕ ಭಾವನೆ ತಾಳಿರುವುದನ್ನು ತಿಳಿದೂ ಅವರು ಅದನ್ನು ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೂ ಶುಲ್ಕ ನಿಗದಿ ಸಮಿತಿಯ ಶಿಫಾರಸುಗಳ ಪರವಾಗಿ ನಿಲ್ಲುವ ಬದಲು ಅದರಲ್ಲಿ ಕಾರ್ಯ ವಿಧಾನದ ಲೋಪಗಳನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸರಕಾರದ ಪ್ರಕಾರ, ಸಮಿತಿ ತನ್ನ ಶಿಫಾರಸುಗಳನ್ನು ಸರಕಾರಕ್ಕೆ ಕಳುಹಿಸಬೇಕು, ನೇರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗಲ್ಲ. ಅಷ್ಟಲ್ಲದೆ, ಶುಲ್ಕ ರಚನೆ ಕುರಿತಾಗಿ ಸಮಿತಿ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್‌ ನೀಡಿರುವುದನ್ನು ಪ್ರಶ್ನಿಸಿ ಸರಕಾರ ಹೈಕೋರ್ಟ್‌ ಮೆಟ್ಟಿಲೇರಲೂ ಪ್ರಯತ್ನಿಸುತ್ತಿದೆ.

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ನೀಡುವ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳು ಅಧಿಕ ಶುಲ್ಕ ವಿಧಿಸಿ ವಿದ್ಯಾರ್ಥಿಗಳ ಸುಲಿಗೆ ಮಾಡುವ ಸಮಸ್ಯೆ ನಿಭಾಯಿಸುವ ನಿಟ್ಟಿನಲ್ಲಿ ಸಮಿತಿಯು ಶ್ಲಾಘನೀಯ ಕೆಲಸ ಮಾಡಿದೆ. ಈ ಸಂಸ್ಥೆಗಳು ಬೋಧನಾ ಶುಲ್ಕದ ಹೆಸರಿನಲ್ಲಿ ಕ್ಯಾಪಿಟೇಶನ್‌ ಶುಲ್ಕ ಸಂಗ್ರಹಿಸಿ ಲಾಭ ಮಾಡಿಕೊಳ್ಳುತ್ತಿದ್ದವು. ಖಾಸಗಿ ದಂತ ವೈದ್ಯಕೀಯ ಕಾಲೇಜೊಂದು 2018-19ನೇ ಶೈಕ್ಷಣಿಕ ವರ್ಷಕ್ಕೆ 19.30 ಲಕ್ಷ ರೂ. ಬೋಧನಾ ಶುಲ್ಕ ನಿಗದಿಗೊಳಿಸುವಂತೆ ಸಮಿತಿಯ ಮುಂದೆ ಪ್ರಸ್ತಾವನೆಯಿಟ್ಟಿದೆ. ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ವೆಚ್ಚ ತೀವ್ರವಾಗಿ ಹೆಚ್ಚುತ್ತಿರುವುದರಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೂ ದುಬಾರಿಯಾಗುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಚಾರಿಟೆಬಲ್‌ ಆಸ್ಪತ್ರೆಗಳಲ್ಲಿ ವಾರ್ಡುಗಳ ದರ ಪಂಚತಾರಾ ಹೊಟೇಲ್‌ಗ‌ಳನ್ನೂ ಮೀರಿಸುವಂತಿದೆ. ಇಂತಹ ಆಸ್ಪತ್ರೆಗಳಿಗೆ ಸ್ಥಳೀಯ ಸಂಸ್ಥೆಗಳೂ ವಾರ್ಷಿಕ ಲೆಕ್ಕದಲ್ಲಿ ತೀರಾ ಕನಿಷ್ಠ ಬಾಡಿಗೆಗೆ ಜಾಗ ಕೊಟ್ಟಿವೆ. ಏರಿಕೆಗೆ ನಿಜವಾದ ಕಾರಣ ಏನೆಂಬುದನ್ನು ಅರಿಯಲು ಪ್ರಯತ್ನಿಸದೆ ಸರಕಾರ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚದ ಮೇಲೆ ನಿಯಂತ್ರಣ ಹೇರುವ ಕಾಯ್ದೆ ರೂಪಿಸಲು ಸಿದ್ಧತೆ ನಡೆಸಿದೆ.

ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ಗಳ ಶುಲ್ಕ
ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಶುಲ್ಕ ನಿಗದಿಪಡಿಸುವ ಅಧಿಕಾರ ತನಗಿದೆ ಎಂದು ಸಮಿತಿ ಹೇಳಿರುವುದನ್ನು ಗಮನಿಸಬೇಕು. ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ಗಳು ಸ್ನಾತಕೋತ್ತರ ಕೋರ್ಸ್‌ಗಳಿಗಿಂತ ಹೆಚ್ಚೇನೂ ಇಲ್ಲ. ಈ ಕೋರ್ಸ್‌ಗಳಿಗೆ ಶುಲ್ಕ ನಿಗದಿಪಡಿಸುವ ವಿಚಾರದಲ್ಲಿ ಖಾಸಗಿ ಸಂಸ್ಥೆಗಳು ತಮ್ಮದೇ ನೀತಿ ಅನುಸರಿಸುತ್ತಿವೆ. ಯಾವ ಸರಕಾರ ಅಥವಾ ಉನ್ನತಾಧಿಕಾರ ಸಮಿತಿ ಈ ಕೋರ್ಸುಗಳಿಗೆ ಈವರೆಗೂ ಶುಲ್ಕ ನಿಗದಿಪಡಿಸಿದ ನಿದರ್ಶನಗಳಿಲ್ಲ. ಈ ವಿಚಾರ ಆಯಾ ಸಂಸ್ಥೆಗಳಿಗೆ ಸಂಬಂಧಿಸಿದ್ದು ಎಂಬಂತಿದೆ. ತಾವೆಷ್ಟು ಶುಲ್ಕ ಸ್ವೀಕರಿಸುತ್ತೇವೆ ಎಂಬ ಕುರಿತು ಶಿಕ್ಷಣ ಸಂಸ್ಥೆಗಳು ಸರಕಾರಕ್ಕೂ ಮಾಹಿತಿ ನೀಡುತ್ತಿಲ್ಲ. ಒಂದು ಶಿಕ್ಷಣ ಸಂಸ್ಥೆಯ ವಿಚಾರದಲ್ಲಿ, ಸಮಿತಿಯು ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ಗೆ 7.6 ಲಕ್ಷ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕೆ 3.8 ಲಕ್ಷ ರೂ. ಶುಲ್ಕ ನಿಗದಿಗೊಳಿಸಿದೆ.

ಸ್ಥಳೀಯ ವಿದ್ಯಾರ್ಥಿಗಳಿಗಿಂತ ಅನಿವಾಸಿ ಭಾರತೀಯ (ಎನ್‌ಆರ್‌ಐ) ವಿದ್ಯಾರ್ಥಿಗಳಿಗೆ ಹತ್ತು ಪಟ್ಟು ಹೆಚ್ಚು ಶುಲ್ಕ ವಿಧಿಸಲು ಸಮಿತಿ ಅವಕಾಶ ಮಾಡಿಕೊಟ್ಟಿದೆ. 2006ರ ಕಾಯ್ದೆ ಪ್ರಕಾರ, ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಂದ ಸ್ವೀಕರಿಸುವ ಹೆಚ್ಚುವರಿ ಶುಲ್ಕವನ್ನು ಇಲ್ಲಿನ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲು ಬಳಸಬೇಕು ಎಂಬ ಅಂಶ ಹಲವರಿಗೆ ಗೊತ್ತಿಲ್ಲ. ಖಾಸಗಿ ಕಾಲೇಜುಗಳು ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡುತ್ತಿವೆಯೇ ಎಂಬುದನ್ನು ಹೊಸ ಸರಕಾರ ಗಮನಿಸಬೇಕು. ಇಲ್ಲದಿದ್ದರೆ, ದುರ್ಬಲ ವರ್ಗಗಳ ಹಿತ ಕಾಯುವ ಸರಕಾರದ ಹಾಗೂ ಮಂತ್ರಿಗಳ ಉದ್ದೇಶ ಈಡೇರುವುದಿಲ್ಲ. 
ಹೊಸ ಸರಕಾರ ವಿದ್ಯಾರ್ಥಿಗಳ ಪರ ನಿಲ್ಲುವುದೇ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಕೈಜೋಡಿಸುವುದೇ ಎಂಬುದನ್ನು ನೋಡಬೇಕಿದೆ. ಜಸ್ಟೀಸ್‌ ಶೈಲೇಂದ್ರ ಕುಮಾರ್‌ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲೂ ಇದು ಸಕಾಲ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.