150ರ ಟಾರ್ಗೆಟ್ ಅಷ್ಟು ಸಲೀಸಲ್ಲ; ಕಾಂಗ್ರೆಸ್-ಬಿಜೆಪಿ ನಾಯಕರಿಗೆ 150 ಟಾರ್ಗೆಟ್ ಚಿಂತೆ
Team Udayavani, Apr 5, 2022, 8:20 AM IST
ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯೂ 150 ಟಾರ್ಗೆಟ್ ಇಟ್ಟುಕೊಂಡಿದೆ. ಜೆಡಿಎಸ್ 130 ಟಾರ್ಗೆಟ್ ಹಾಕಿಕೊಂಡಿದೆ. ಇದೀಗ ರಾಹುಲ್ ಗಾಂಧಿ 150 ಟಾರ್ಗೆಟ್ ಕೊಟ್ಟಿದ್ದಾರೆ. ವಾಸ್ತವವಾಗಿ ಹೇಳಬೇಕಾದರೆ ಇವತ್ತಿನ ಸ್ಥಿತಿಯಲ್ಲಿ ಮ್ಯಾಜಿಕ್ ನಂಬರ್ ತಲುಪುವುದೇ ಮೂಲ ಗುರಿ. ವರಿಷ್ಠರು ನೀಡಿರುವ ಗುರಿ ಮುಟ್ಟಲು ಕಾಂಗ್ರೆಸ್ ಮತ್ತು ಬಿಜೆಪಿ ಬೆನ್ನಟ್ಟಿದ್ದರೆ ಜೆಡಿಎಸ್ಗೆ “ಕಿಂಗ್ಮೇಕರ್’ ಕನಸು ಚಿಗುರೊಡೆದಂತಿದೆ. ಮೂರೂ ಪಕ್ಷಗಳು ಚುನಾವಣೆಗೆ ವರ್ಷಕ್ಕೆ ಮುಂಚೆಯೇ ತಮ್ಮ ವರಸೆ ತೋರಲಾರಂಭಿಸಿವೆ.
ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲೇ ಬೇಕೆಂದು ರಾಹುಲ್ಗಾಂಧಿ ನೀಡಿರುವ “ಟಾರ್ಗೆಟ್’ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಚಿಂತೆ ಶುರುವಾಗಿದೆ.
ಏಕೆಂದರೆ ಪ್ರಸ್ತುತ ವಿದ್ಯಮಾನ ಗಮನಿಸಿದರೆ ರಾಹುಲ್ ಗಾಂಧಿ ನೀಡಿರುವ ಟಾರ್ಗೆಟ್ ರೀಚ್ ಆಗೋದು ಅಷ್ಟು ಸಲೀಸಲ್ಲ ಎಂಬುದು ರಾಜ್ಯ ನಾಯಕರಿಗೂ ಗೊತ್ತಿದೆ. ರಾಜಕೀಯವಾಗಿ ಕಾಂಗ್ರೆಸ್, ಕೇವಲ ಬಿಜೆಪಿ ವಿರುದ್ಧ ಮಾತ್ರವಲ್ಲ ಜೆಡಿಎಸ್ ಜತೆಗೂ ಸೆಣಸಾಡಬೇಕಿದೆ.
ಮೇಕೆದಾಟು ಪಾದಯಾತ್ರೆ ಹಾಗೂ 60 ಲಕ್ಷಕ್ಕೂ ಮೀರಿ ಸದಸ್ಯತ್ವ ಮಾಡಿಸಿರುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ಗೆ ಇತ್ತೀಚಿನ ಬೆಳವಣಿಗೆಗಳು ಅನಿರೀಕ್ಷಿತ “ಶಾಕ್’ ನೀಡಿದೆ. ಇದರ ನಡುವೆಯೂ ರಾಹುಲ್ಗಾಂಧಿ ನೀಡಿರುವ ಸೂಚನೆಯಂತೆ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಕಾನೂನು ಸುವ್ಯವಸ್ಥೆ ಕುಸಿತ ಮುಂದಿಟ್ಟು ಹೋರಾಟ ರೂಪಿಸಲು ಸಜ್ಜಾಗುತ್ತಿದೆ.
ರಾಜ್ಯದ 224 ಕ್ಷೇತ್ರಗಳಲ್ಲೂ ನಿರುದ್ಯೋಗಿಗಳ ಸಮೀಕ್ಷೆ ನಡೆಸುತ್ತಿದ್ದು ಅದರ ಅಂಕಿ-ಅಂಶದ ಆಧಾರದ ಮೇಲೆ ನಿರುದ್ಯೋಗ ಸಮಸ್ಯೆ ಬಗ್ಗೆ ಸಚಿವರ ವಿರುದ್ಧ ಕೇಳಿಬಂದಿ ರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಹೆಚ್ಚು ಫೋಕಸ್ ಮಾಡಲು ತೀರ್ಮಾನಿಸಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಮತ ತಂದುಕೊಡಬಲ್ಲದು ಎಂಬ ಪ್ರಶ್ನೆಯೂ ಇದೆ.
ಆರು ತಿಂಗಳ ಮುಂಚೆಯೇ ಅಭ್ಯರ್ಥಿಗಳ ಘೋಷಣೆಗೆ ರಾಹುಲ್ಗಾಂಧಿ ಸಮ್ಮತಿಸಿರುವುದರಿಂದ ಮುಂದಿನ ವಾರದಿಂದ ಜಿಲ್ಲಾವಾರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಕ್ಕೂ ರೂಪುರೇಖೆ ಸಿದ್ಧಪಡಿಸಲಾಗುತ್ತಿದೆಯಾದರೂ ಜಿಲ್ಲಾ ಮಟ್ಟದಲ್ಲಿ ಪಕ್ಷದಲ್ಲಿ ಗುಂಪುಗಾರಿಕೆ, ಒಬ್ಬರನ್ನೊಬ್ಬರು ಕಾಲೆಳೆಯುವುದು ಹೆಚ್ಚಾಗಿದ್ದು ಅದನ್ನು ಸರಿಪಡಿಸಿ ಎಲ್ಲರನ್ನೂ ಒಟ್ಟುಗೂಡಿಸುವುದು ದೊಡ್ಡ ಸವಾಲಾಗಿದೆ.
ಉದಾಹರಣೆಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಮೇಶ್ಕುಮಾರ್ ಬಣ, ಕೆ.ಎಚ್.ಮುನಿಯಪ್ಪ ಬಣ ಎಂಬಂತಾಗಿದೆ. ಬಹಿರಂಗ ವೇದಿಕೆಯಲ್ಲೇ ಕೆ.ಎಚ್.ಮುನಿಯಪ್ಪ, ಏಯ್ ರಮೇಶ್ಕುಮಾರ್ ಮುಂದಿನ ಬಾರಿ ಹೇಗೆ ಗೆಲ್ಲುತ್ತೀಯ ನೋಡ್ತೇನೆ ಎಂದು ಸವಾಲು ಹಾಕಿದ್ದಾರೆ. ಇದು ಎರಡು ಜಿಲ್ಲೆಯ ಕಥೆಯಲ್ಲ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ. ಡಿ. ಕೆ. ಶಿವ ಕುಮಾರ್ ಬಣ, ಸಿದ್ದರಾಮಯ್ಯ ಬಣ ಎಂದು ಬಿಂಬಿತವಾಗಿದೆ. ಮೊದಲು ಸ್ಥಳೀಯ ಮಟ್ಟದ ಸಮಸ್ಯೆ ಸರಿಪಡಿಸ ಬೇಕಿದೆ. ಪಂಚರಾಜ್ಯ ಗಳ ಫಲಿತಾಂಶ ಅನಂತರ ಕಾಂಗ್ರೆಸ್ನಲ್ಲಿರುವ ನಾಯಕರು, ಕಾಂಗ್ರೆಸ್ನತ್ತ ಬರಲು ಸಿದ್ಧವಾಗಿದ್ದವರೂ ಬಿಜೆಪಿ ಹಾಗೂ ಜೆಡಿಎಸ್ನತ್ತ ಕಣ್ಣು ಹಾಯಿಸುತ್ತಿ ದ್ದಾರೆ. ಟಿಕೆಟ್ ವಂಚಿತರ “ಹಾರಾಟ’ವೂ ಇದ್ದೇ ಇರುತ್ತದೆ. ಇದು ಚುನಾವಣ ಹೊಸ್ತಿ ಲಲ್ಲಿ ದೊಡ್ಡ ಹೊಡೆತವನ್ನೇ ಕೊಡಬ ಹುದು. ಇದನ್ನು ನಿಭಾಯಿಸುವುದು ನಾಯಕ ರಿಗೆ ಒಂದು ರೀತಿಯ ಅಗ್ನಿಪರೀಕ್ಷೆಯೇ ಸರಿ.
ಚರ್ಚೆಗೆ ಗ್ರಾಸ
“ನಮ್ಮ ಹೋರಾಟದ ಬಗ್ಗೆ ಸ್ಪಷ್ಟತೆ ಇರಬೇಕು. ನಮ್ಮನ್ನು ನಂಬಿದವರ ಜತೆ ನಾವು ಗಟ್ಟಿಯಾಗಿ ನಿಲ್ಲಬೇಕು. ಯಾರೋ ಏನೋ ಅಂದುಕೊಳ್ಳುತ್ತಾರೆ ಎಂದು ಹಿಂದೇಟು ಹಾಕಬಾರದು’ ಎಂದು ರಾಹುಲ್ಗಾಂಧಿ ಸಮ್ಮುಖದಲ್ಲೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಆಡಿದ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಹಿಜಾಬ್, ಹಲಾಲ್ ಕಟ್, ಮಸೀದಿಗಳಲ್ಲಿ ಮೈಕ್ ಬ್ಯಾನ್ ವಿಚಾರದಲ್ಲಿ ಕಾಂಗ್ರೆಸ್ ನಮ್ಮ ಪರ ನಿರೀಕ್ಷಿತ ಪ್ರಮಾಣದಲ್ಲಿ ಧ್ವನಿ ಎತ್ತಲಿಲ್ಲ ಎಂಬ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಮುನಿಸು ಇದೆ. ಸಮುದಾಯದ ನಾಯಕರಾದ ಜಮೀರ್ ಅಹಮದ್, ತನ್ವೀರ್ ಸೇs…, ನಸೀರ್ ಅಹಮದ್ ಅವರಿಗೂ ಇದು ಗೊತ್ತಿದೆ. ಇತ್ತೀಚೆಗೆ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ನೇರವಾಗಿಯೇ ಅವರನ್ನು ಈ ವಿಚಾರದಲ್ಲಿ ತರಾಟೆಗೂ ತೆಗೆದುಕೊಂಡಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಗೊಂದಲದಲ್ಲಿದೆ ಎಂಬಂತೆ ಕಾಣುತ್ತದೆ. ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯದ ಪರ ನೇರವಾಗಿಯೇ ಬ್ಯಾಟಿಂಗ್ ಮಾಡುವುದರಿಂದ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕೊಟ್ಟಿಕೊಳ್ಳಬೇಕಾಗಬಹುದಾ ಎಂಬ ಆತಂಕ ಕೆಲವು ನಾಯಕರಿಗಿದೆ. ಹೀಗಾಗಿಯೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ಮಟ್ಟಿಗೆ ಸಾಫ್ಟ್ ಹಿಂದುತ್ವದತ್ತ ಒಲವು ಹೊಂದಿರುವುದು ಕಂಡುಬರುತ್ತಿದೆ. ಮುಸ್ಲಿಂ ಪರ ಅತಿಯಾದ ಪ್ರೀತಿ ತೋರಿದರೆ ಹಿಂದೂ ಮತ ಕೈ ಬಿಡ ಬಹುದು ಎಂಬ ಆತಂಕ ಅವರದು. ಪ್ರತಿ ವಿಷಯದಲ್ಲೂ ಅಳೆದೂ ತೂಗಿ ಮಾತನಾಡುತ್ತಿದ್ದಾರೆ. ಇದರ ಮರ್ಮ ಅರಿತೇ ಜೆಡಿಎಸ್ನ ಎಚ್.ಡಿ.ಕುಮಾರ ಸ್ವಾಮಿ “ರಂಗ ಪ್ರವೇಶ’ ಮಾಡಿ ಕಳೆದೊಂದು ವಾರದಿಂದ ಮುಸ್ಲಿಂ ಸಮುದಾಯದ ಚಾಂಪಿಯನ್ ಆಗಿದ್ದಾರೆ. ಇದು ಕಾಂಗ್ರೆಸ್ಗೆ ಮತ್ತೂಂದು ರೀತಿಯ ತಲೆಬಿಸಿ ತಂದೊಡ್ಡಿದೆ. ಏಕೆಂದರೆ, ಜೆಡಿಎಸ್ಗೆ ಶಿಫ್ಟ್ ಆಗುವ ಒದೊಂದು ಮುಸ್ಲಿಂ
ಮತವೂ ಕಾಂಗ್ರೆಸ್ನ ಶಕ್ತಿ ಕುಸಿತಕ್ಕೆ
ಕಾರಣವಾಗುತ್ತದೆ.ಇಷ್ಟರ ನಡುವೆಯೂ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಹಾಗೂ ಬೆಲೆ ಏರಿಕೆ, ಭ್ರಷ್ಟಾಚಾರ ಆರೋಪ ನಮಗೆ ವರವಾಗಬಹುದು ಎಂಬ ಅತಿಯಾದ ಆತ್ಮವಿಶ್ವಾಸ ಕಾಂಗ್ರೆಸ್ನದು.
ಆಪರೇಷನ್ ಕಮಲ ಕಾರ್ಯಾಚರಣೆಯಡಿ ಬಿಜೆಪಿಗೆ ಹೋಗಿದ್ದ ಪೂರ್ವಾಶ್ರಮದ ಕಾಂಗ್ರೆಸ್ನವರು ಉಪ ಚುನಾವಣೆಯಲ್ಲೂ ಮುಸ್ಲಿಂ ಮತ ಪಡೆದಿದ್ದಾರೆ. ಬಿಜೆಪಿಯ ಬೆಳವಣಿಗೆ ಅವರಲ್ಲಿ ಆತಂಕ ಮೂಡಿಸಿದೆ. ಈಗ ಅವರೆಲ್ಲರೂ ಕಾಂಗ್ರೆಸ್ನತ್ತ ನೋಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಸಂಘಟನೆ ಗಟ್ಟಿಯಾಗದೆ ಬೇರೇನೋ ಕೈ ಹಿಡಿಯಬಹುದು ಎಂಬ ಕನಸು ನನಸಾಗುವುದು ಕಷ್ಟವೇ.
-ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ