ಜಾರ್ಜ್‌ರ ಗುರುವನ್ನು ನೆನೆಯುತ್ತಾ


Team Udayavani, May 14, 2017, 6:45 AM IST

Ammembala-Balappa.jpg

ಕೊನೆ ತನಕವೂ ಜನರೊಡನೇ ಬಾಳಿ ಬದುಕಿದರು
ಬಾಳಪ್ಪನವರು ಬಾಳಿ ಬದುಕಿದ ಮನೆಯ ಮುಂದೆ ಹಾದುಹೋದಾಗ, ಆ ಮನೆ ಪಾಳುಬಿದ್ದಿರುವುದನ್ನು ನೋಡಿದಾಗ ಅಮ್ಮೆಂಬಳ ಬಾಳಪ್ಪನವರ ಮೇಲೆ ಅಭಿಮಾನ ಉಕ್ಕೇರುತ್ತದೆ, ಗೌರವ ಭಾವ ಮೂಡುತ್ತದೆ. ಜತೆಗೆ ಇವು ಯಾವುವೂ ನಮ್ಮ ಆಡಳಿತಕ್ಕೆ ಅರ್ಥವಾಗಿಲ್ಲವಲ್ಲ ಎಂಬ ಬೇಸರವೂ ಕೂಡ! 

ಸುಮಾರು 40ರ ದಶಕವಿರಬಹುದು. ಮಂಗಳೂರಿನ ಮೈದಾನವೊಂದರ ಕಲ್ಲು ಬೆಂಚಿನ ಮೇಲೆ ಒಬ್ಬ ಬಾಲಕ ಮಲಗಿದ್ದ. ಮನೆಯವರು ಕ್ರೈಸ್ತ ಪಾದ್ರಿ ಆಗು ಎಂದು ಬೆಂಗಳೂರಿಗೆ ಕಳುಹಿಸಿದ್ದರೆ ಆ ಬಾಲಕ ಮಾತ್ರ ಅಲ್ಲಿನ ತಾರತಮ್ಯಕ್ಕೆ ಬೇಸತ್ತು ಅರ್ಧದಲ್ಲೇ ಅದನ್ನು ಬಿಟ್ಟು ಮಂಗಳೂರಿಗೆ ಮರಳಿದ್ದ! ತನ್ನ ವರ್ತನೆಯ ಬಗ್ಗೆ ಮನೆಮಂದಿಯ ಮೂದಲಿಕೆಯೂ ಸೇರಿದ್ದರಿಂದ ಬಾಲಕನಿಗೆ ಎಲ್ಲವನ್ನೂ ಕಳೆದುಕೊಂಡ ಅನಾಥ ಭಾವ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಒಬ್ಬ ಯುವಕ ಬಾಲಕನ ಬಳಿಗೆ ತೆರಳಿ ಅವನ ಬೆನ್ನು ತಟ್ಟಿ ಪ್ರೀತಿಯಿಂದ ಮಾತನಾಡಿಸಿದ. ಆ ಬಾಲಕನನ್ನು ಸಂತೆಸಿದ್ದೂ ಅಲ್ಲದೆ ಮುಂದೆ ತನ್ನ ಜತೆಗೆ ಸೇರಿಸಿಕೊಂಡು ತನ್ನ ರಾಜಕೀಯ ಚಟುವಟಿಕೆ, ಹೋರಾಟಗಳಲ್ಲಿ ನಿರಂತರ ಭಾಗಿಯಾಗುವಂತೆ ಮಾಡಿದ. ಆ ಯುವಕನ ಮಾರ್ಗದರ್ಶನದಿಂದ ಪ್ರಭಾವಿತಗೊಂಡ ಬಾಲಕ ಮುಂದೆ ಮುಂಬೈ ನಗರವನ್ನು ಸೇರಿ ಅಲ್ಲೂ ಬಡವರ ಧ್ವನಿಯಾಗಿ, ಕಾರ್ಮಿಕ ವರ್ಗದ ಶಕ್ತಿಯಾಗಿ ಹೋರಾಟದ ಬದುಕನ್ನೇ ಅಪ್ಪಿ ಮುಂದುವರೆದ. ಬಳಿಕದ ಹಾದಿಯಲ್ಲಿ ಮತ್ತಷ್ಟು ಬೆಳೆದು, ಸಮತಾವಾದವನ್ನು ಹಿಡಿದು ಈ ದೇಶದ ಓರ್ವ ಪ್ರಭಾವಿ ರಾಜಕಾರಣಿಯಾಗಿ ಮೂಡಿಬಂದ. ಮಾತ್ರವಲ್ಲದೆ ಮುಂದೊಂದು ದಿನ ಈ ದೇಶದ ಅತ್ಯುತ್ತಮ ರಕ್ಷಣಾ ಸಚಿವನಾಗಿಯೂ ಸೇವೆ ಸಲ್ಲಿಸಿದರು!

ಹೌದು, ನಿಮ್ಮ ಊಹೆ ಸರಿಯಾಗಿಯೇ ಇದೆ. ಆ ಬಾಲಕನೇ ನಮ್ಮ ಜಾರ್ಜ್‌ ಫ‌ರ್ನಾಂಡಿಸ್‌! ಜಾರ್ಜ್‌ ಫ‌ರ್ನಾಂಡಿಸ್‌ ಎಂಬ ಮಂಗಳೂರಿನ ಹುಡುಗ ಬೆಳೆದು ಬಂದ ದಾರಿ ನಿಜಕ್ಕೂ ಅದ್ಭುತವಾದದ್ದೇ. ಒಂದುವೇಳೆ ಅಂದು ಮಂಗಳೂರು ಮೈದಾನದ ಕಲ್ಲು ಬೆಂಚಿನ ಮೇಲೆ ಮಲಗಿದ್ದ ಬಾಲಕ ಜಾರ್ಜ್‌ ನನ್ನು ಆ ಯುವಕ ಕೈಹಿಡಿದೆತ್ತಿ, ಬೆನ್ನುತಟ್ಟಿ ರಾಜಕೀಯ ಮಾರ್ಗದರ್ಶನ ನೀಡದೇ ಹೋಗಿರುತ್ತಿದ್ದರೆ ಖಂಡಿತ ಜಾರ್ಜ್‌ ಅವರ ರಾಜಕೀಯ ಪ್ರತಿಭೆ ಲೋಕಮುಖಕ್ಕೆ ಗೋಚರಿಸುತ್ತಲೇ ಇರಲಿಲ್ಲ. ಅಂದಹಾಗೆ ಜಾರ್ಜ್‌ ಅವರನ್ನು ಅಂದು ಪ್ರೋತ್ಸಾಹಿಸಿದ, ಮಾರ್ಗದರ್ಶನ ನೀಡಿ ಮೌಲ್ಯಯುತ ರಾಜಕೀಯಕ್ಕೆ ಎಳೆತಂದ ಆ ವ್ಯಕ್ತಿ ಯಾರು ಗೊತ್ತೇ? ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಮೂಲದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸ್ವಾಭಿಮಾನಿ ಕೀರ್ತಿಶೇಷ ಡಾ. ಅಮ್ಮೆಂಬಳ ಬಾಳಪ್ಪ. 

ಸ್ವತಃ ಜಾರ್ಜ್‌ ಫ‌ರ್ನಾಂಡಿಸ್‌ ಅವರಿಂದಲೇ ತನ್ನ ರಾಜಕೀಯ ಗುರು ಎಂಬ ಹೊಗಳಿಕೆ ಗಳಿಸಿಕೊಂಡಿದ್ದ ಈ ಮಹಾನ್‌ ಚೇತನ ಹುಟ್ಟಿದ್ದು 1922ರ ಫೆಬ್ರವರಿ 23ರಂದು. ಫ‌ರ್ನಾಂಡಿಸ್‌ಅವರ ಜೀವನ ಯಾತ್ರೆ ಅದೆಷ್ಟು ಅದ್ಭುತವೋ ಅದಕ್ಕೂ ಮಿಗಿಲಾದದ್ದು ಡಾ| ಬಾಳಪ್ಪರ ಜೀವನ ಗಾಥೆ. ಕಡುಬಡತನದ ಕುಂಬಾರ ಕುಟುಂಬದಲ್ಲಿ ಹುಟ್ಟಿದ ಅವರು ಪಡೆದ ಶಿಕ್ಷಣ ಕೇವಲ ನಾಲ್ಕನೇ ತರಗತಿಯರೆಗೆ ಮಾತ್ರ. ಆ ಬಳಿಕ ಹೊಟ್ಟೆಪಾಡಿಗಾಗಿ ಅವರು ಕೆಲಸಕ್ಕೆ ಸೇರಿದ್ದು ಮಂಗಳೂರಿನ ಓರ್ವ ಬ್ರಿಟಿಷ್‌ ಅಧಿಕಾರಿಯ ಮನೆಯಲ್ಲಿ. ಸರಿಯಾಗಿ ಅಕ್ಷರಾಭ್ಯಾಸ ಇಲ್ಲದ ಬಾಳಪ್ಪನವರು ಆ ದಿನಗಳಲ್ಲಿ ಆ ಬ್ರಿಟಿಷ್‌ ಅಧಿಕಾರಿಯ ಮನೆಯಲ್ಲಿ ಇಂಗ್ಲಿಷ್‌ ಅಕ್ಷರಗಳನ್ನು ಕಲಿತರು. ಬಳಿಕ ಶಬ್ದ, ವಾಕ್ಯಗಳನ್ನು ಓದಲು ಕಲಿತರು. ಹಂತಹಂತವಾಗಿ ಇಂಗ್ಲಿಷ್‌ ಭಾಷೆಯನ್ನು ತನ್ನದಾಗಿಸಿಕೊಂಡರು. ಆ ಬ್ರಿಟಿಷ್‌ ಅಧಿಕಾರಿಯ ಪತ್ರಿಕೆ ಓದುವ ಹವ್ಯಾಸವು ಬಾಳಪ್ಪನವರಲ್ಲಿಯೂ ಪತ್ರಿಕೆ ಓದುವ ಅಭ್ಯಾಸವನ್ನು ಉಂಟುಮಾಡಿತು. ಆ ಮೂಲಕ ದೇಶದ ರಾಜಕೀಯ ಚಿತ್ರಣ, ಬ್ರಿಟಿಷ್‌ -ಭಾರತೀಯರ ಸಂಬಂಧಗಳು ಎಲ್ಲವೂ ಬಾಳಪ್ಪನವರಿಗೆ ಮನದಟ್ಟಾಗಲು ತೊಡಗಿದವು. ಒಂದೆಡೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದೆ ತತ್ವಾರ ಪಡುತ್ತಿರುವ ಮನೆಮಂದಿ.

ಆದರೂ ಬಾಳಪ್ಪನವರ ಮನಸ್ಸು ಮಿಡಿದದ್ದು ತಾಯಿ ಭಾರತಾಂಬೆಗೆ! ಪರಿಣಾಮವಾಗಿ ತಾಯಿ ಭಾರತಿ ಬ್ರಿಟಿಷರ ಬಂಧನದಲ್ಲಿರುವವರೆಗೆ ನಾವು ವಿರಮಿಸಬಾರದು ಎಂದು ಆ ಕಾಲದಲ್ಲಿ ಟೊಂಕ ಕಟ್ಟಿ ಹೋರಾಡುತ್ತಿದ್ದ ರಾಷ್ಟ್ರಪ್ರೇಮಿಗಳ ಸಾಲಿಗೆ ಸೇರಿದರು. 1942ರಲ್ಲಿ ಮಹಾತ್ಮಾ ಗಾಂಧೀಜಿಯವರು ಕ್ವಿಟ್‌ ಇಂಡಿಯಾ ಚಳುವಳಿಗೆ ಕರೆ ಕೊಟ್ಟಾಗ ಬಾಳಪ್ಪನವರಿಗೆ ಕೇವಲ 20 ವರ್ಷ ವಯಸ್ಸು. ಅತ್ತ ಮನೆಮಂದಿ ಇವರ ಮದುವೆಯ ಪ್ರಸ್ತಾವದಲ್ಲಿ ಮುಳುಗಿದ್ದರೆ ಇತ್ತ ಬಾಳಪ್ಪನವರು ಅದೆಲ್ಲವನ್ನೂ ಧಿಕ್ಕರಿಸಿ ಅವಿಭಜಿತ ದಕ್ಷಿಣಕನ್ನಡದ ಮೇರು ನಾಯಕರಾಗಿ ಕ್ವಿಟ್‌ ಇಂಡಿಯಾ ಚಳುವಳಿಗೆ ಧುಮುಕಿದ್ದರು! ಮಂಗಳೂರಿನ ಜಿಲ್ಲಾ ನ್ಯಾಯಾಲಯವನ್ನು ದ್ವಂಸಗೈಯುವ ಪ್ರಯತ್ನದಲ್ಲಿ ಪೊಲೀಸರ ಆತಿಥ್ಯ ಅನುಭವಿಸಿದರು, ದೂರದ ವೆಲ್ಲೂರು ಜೈಲಿಗೆ ರವಾನೆಯಾದರು. 18 ತಿಂಗಳ ಶಿಕ್ಷೆ ಅನುಭವಿಸಿದರು. ಆ ಸಂದರ್ಭದಲ್ಲಿ ಮುಂದೆ ದೇಶದ ಪ್ರಧಾನಿಯಾದ ಪಿ. ವಿ. ನರಸಿಂಹ ರಾವ್‌ ಕೂಡ ಅದೇ ಜೈಲಿನಲ್ಲಿ ಬಂಧಿಯಾಗಿದ್ದರು. ಅವರ ಸ್ನೇಹ ಬಾಳಪ್ಪನವರಿಗೆ ಲಭಿಸಿ, ರಾಜಕೀಯದ ಮತ್ತಷ್ಟು ಮಜಲುಗಳನ್ನು ಅರಗಿಸಿಕೊಂಡು ಇನ್ನಷ್ಟು ಬಲಿಷ್ಟಗೊಂಡರು. ಜತೆಗೆ ಹಿಂದಿ ಭಾಷೆಯನ್ನು ಕೂಡ ಅರಗಿಸಿಕೊಂಡರು. ಇದು ಮುಂದೆ ಜಯಪ್ರಕಾಶ್‌ ನಾರಾಯಣ, ಜವಾಹರ ಲಾಲ್‌ ನೆಹರೂ ಅವರಂಥ ರಾಜಕೀಯ ದಿಗ್ಗಜರ ಸಖ್ಯಕ್ಕೂ ಕಾರಣವಾಯಿತು.

ಬಾಳಪ್ಪನವರು ಮಹಾತ್ಮಾ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದರು. ತನ್ನ ಜೀವನದಲ್ಲಿ ಗಾಂಧೀ ತತ್ವಗಳನ್ನು ಅಳವಡಿಸಿಕೊಂಡದ್ದು ಮಾತ್ರವಲ್ಲದೆ ಇತರರಿಗೂ ಅದನ್ನೇ ಬೋಧಿಸುತ್ತಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಅವರ ಸ್ವಭಾವ ಅದೆಂಥವರಿಗೂ ಅವರ ಮೇಲೆ ಅಭಿಮಾನ ಮೂಡಿಸುವಂತೆ ಇತ್ತು. ಸರಳ ಸಜ್ಜನಿಕೆಯ ಬಾಳಪ್ಪನವರು ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ತನ್ನ ಮನೆಯ ಪಕ್ಕದಲ್ಲೇ ಇದ್ದ ನವಜೀವನ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯ, ಗೌರವಾಧ್ಯಕ್ಷನಾಗಿ ಕೆಲಸ ಮಾಡಿದ್ದರು. ಇಷ್ಟು ಮಾತ್ರವಲ್ಲದೆ ಅದೇ ವ್ಯಾಯಾಮ ಶಾಲೆಗೆ ಸ್ಥಳ ದಾನವನ್ನೂ ನೀಡಿ ಊರಿನ ಜನತೆಗೆ ಪ್ರಾತಃಸ್ಮರಣೀಯರೆನಿಸಿಕೊಂಡಿದ್ದಾರೆ. ಬಡವರ ಬಗೆಗೂ ಅವರಿಗಿದ್ದ ಕಾಳಜಿ ಅಷ್ಟಿಷ್ಟಲ್ಲ. ಬಂಟ್ವಾಳ ಭೂನ್ಯಾಯ ಮಂಡಳಿಯಲ್ಲಿ ಮೂರು ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಅವರಿಂದ ಪ್ರಯೋಜನ ಪಡೆದ ಬಡವರು ಅದೆಷ್ಟೋ ಮಂದಿ. ಬಡ ರೈತರ ಅರ್ಜಿಗಳನ್ನು ಬರೆಯಲು ಕಚೇರಿ ಸಿಬ್ಬಂದಿ ಅಧಿಕ ಹಣ ಪಡೆಯುತ್ತಾರೆ ಎಂದರಿವಾದಾಗ ಸ್ವತಃ ತಾನೇ ಉಚಿತವಾಗಿ ಅರ್ಜಿ ಬರೆದುಕೊಟ್ಟು ಬಡವರ ಸೇವೆಗೆ ನಿಂತವರು ಅವರು! ದೇಶ ಸೇವೆಯೇ ತನ್ನ ಪರಮ ಗುರಿಯೆಂದು ಅರಿತಿದ್ದ ಬಾಳಪ್ಪ ಆಜನ್ಮ ಬ್ರಹ್ಮಚಾರಿಯಾಗಿದ್ದರು. 

ಮನಸ್ಸು ಮಾಡಿದ್ದರೆ ಆ ಕಾಲಕ್ಕೇ ದೊಡ್ಡ ರಾಜಕಾರಣಿಯಾಗಿ ಮೆರೆಯಬಹುದಿತ್ತು. 1989ರಲ್ಲಿ ಜನತಾದಳ (ಎಸ್‌) ಬಾಳಪ್ಪನವರಿಗೆ ವಿಧಾನಸಭೆಯ ಸೀಟನ್ನು ನೀಡಿತ್ತು. ಆದರೆ ಅದಕ್ಕೆ ಅವರು ಸಮ್ಮತಿಸಲಿಲ್ಲ. ಸಮತಾ ಪಕ್ಷಕ್ಕೆ ಬರುವುದಾದರೆ ಉನ್ನತ ಹುದ್ದೆಯನ್ನು ನೀಡುವುದಾಗಿ ಜಾರ್ಜ್‌ ಹೇಳಿದಾಗಲೂ ಬಾಳಪ್ಪರದ್ದು ನಿರಾಕರಣೆಯೇ ಉತ್ತರವಾಗಿತ್ತು. ಸ್ವಾರ್ಥರಹಿತ ಬಡವರ ಸೇವೆಯೇ ಅವರ ಮುಂದಿದ್ದ ಗುರಿಯಾದ್ದರಿಂದ ಕೊನೆ ತನಕವೂ ಜನರೊಡನೇ ಬಾಳಿ ಬದುಕಿದರು. ಸಮಾಜದ ಆಗು ಹೋಗುಗಳನ್ನು ಜನತೆಗೆ ಮತ್ತಷ್ಟು ಪ್ರಖರವಾಗಿ ಮುಟ್ಟಿಸಬೇಕೆಂಬ ನಿಟ್ಟಿನಲ್ಲಿ 1970ರಲ್ಲಿ ತುಳು ಭಾಷೆಯಲ್ಲಿ ಮೊತ್ತ ಮೊದಲ “ಸಿರಿ’ ಎಂಬ ಪತ್ರಿಕೆಯನ್ನೂ ಪ್ರಕಟಿಸಿದ್ದರು. “ಮಿತ್ರ’ ಎನ್ನುವ ಕನ್ನಡ ಪತ್ರಿಕೆಯನ್ನೂ ಹೊರತಂದು ಪತ್ರಿಕಾ ರಂಗದಲ್ಲೊಂದು ಕ್ರಾಂತಿ ಮಾಡಿದ್ದರು. ಇವಿಷ್ಟೇ ಅಲ್ಲದೆ 1980ರಲ್ಲಿ ಸಮಾಜ ಸೇವಾ ಸಹಕಾರಿ ಬ್ಯಾಂಕೊಂದನ್ನು ರಚಿಸಿ ಹಲವಾರು ಮಂದಿಗೆ ಉದ್ಯೋಗವನ್ನು ದೊರಕಿಸಿಕೊಟ್ಟ ಪುಣ್ಯಾತ್ಮರಿವರು.
 
ನಿಸ್ವಾರ್ಥ ಸೇವೆಯ ಡಾ| ಬಾಳಪ್ಪನವರ ಬಗ್ಗೆ ಬರೆಯುತ್ತಾ ಹೋದರೆ ಅದು ಮುಗಿಯದ ವಿಚಾರವೇ ಸರಿ. ಅಜಾತಶತ್ರು ಎನಿಸಿದ್ದ ಬಾಳಪ್ಪನವರು 2014ರ ಮೇ 15ರಂದು ಇಹದ ಬದುಕನ್ನು ಮುಗಿಸಿದರು. ಓರ್ವ ಅಪ್ರತಿಮ ನಾಯಕ, ತನ್ನ ರಾಜಕೀಯ ಗುರು ಎಂದು ಜಾರ್ಜ್‌ ಫ‌ರ್ನಾಂಡಿಸ್‌ ಅವರಿಂದಲೇ ಕರೆಸಿಕೊಂಡಿದ್ದ ಬಾಳಪ್ಪನವರು ಕರ್ನಾಟಕದವರು, ನಮ್ಮ ದಕ್ಷಿಣಕನ್ನಡದವರು ಎಂಬುದೇ ನಮಗೆ ಹೆಮ್ಮೆ. ಆದರೆ ನಮ್ಮ ಆಡಳಿತ, ನಮ್ಮ ಸರಕಾರ ಬಾಳಪ್ಪರ ಸೇವೆಯನ್ನು ಅದೆಷ್ಟು ಗೌರವಿಸಿದೆ, ನೆನಪಿಸಿಕೊಂಡಿದೆ ಎಂದರೆ ಉತ್ತರಿಸುವುದು ತುಸು ಕಷ್ಟವೇ! ಯಾಕೆಂದರೆ ಬಾಳಪ್ಪರು ಬಾಳಿ ಬದುಕಿದ ಊರಿನಲ್ಲಿ ಇಂದು ಅವರನ್ನು ನೆನಪಿಸುವ ಯಾವ ಸ್ಮಾರಕಗಳೂ ಇಲ್ಲ! ಬಾಳಪ್ಪನವರ ಸೇವೆಯನ್ನು ಪರಿಗಣಿಸಿ ಅವರ ಪ್ರತಿಮೆಯನ್ನೋ ಅವರ ಸ್ಮಾರಕವನ್ನೋ ನಿರ್ಮಿಸಿ ಗೌರವಿಸಬೇಕಾಗಿದ್ದ ಆಡಳಿತ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಬಾಳಪ್ಪನವರು ಬಾಳಿ ಬದುಕಿದ ಮನೆಯ ಮುಂದೆ ಹಾದುಹೋದಾಗ, ಆ ಮನೆ ಪಾಳುಬಿದ್ದಿರುವುದನ್ನು ನೋಡಿದಾಗ ಅಮ್ಮೆಂಬಳ ಬಾಳಪ್ಪನವರ ಮೇಲೆ ಅಭಿಮಾನ ಉಕ್ಕೇರುತ್ತದೆ, ಗೌರವ ಭಾವ ಮೂಡುತ್ತದೆ. ಜತೆಗೆ ಇವು ಯಾವುವೂ ನಮ್ಮ ಆಡಳಿತಕ್ಕೆ ಅರ್ಥವಾಗಿಲ್ಲವಲ್ಲ ಎಂಬ ಬೇಸರವೂ ಕೂಡ! 

ಪ್ರಸಾದ್‌ ಕುಮಾರ್‌ ಮಾರ್ನಬೈಲ್‌

ಟಾಪ್ ನ್ಯೂಸ್

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.