ಕೊರೊನಾ ಕಾಳಜಿ : ತುಳಸೀ ಪತ್ರೆ
Team Udayavani, May 3, 2021, 6:10 AM IST
ಭಾರತೀಯರಿಗೆ ತುಳಸೀ ಗಿಡದ ಕುರಿತು, ಅದರ ಔಷಧೀಯ ಗುಣಗಳ ಕುರಿತು ಹೆಚ್ಚೇನು ಹೇಳುವುದು ಬೇಕಿಲ್ಲ. ಬಹುತೇಕರ ಮನೆಮುಂದೆ ತುಳಸೀಗಿಡ ನೆಟ್ಟೇ ಇರುತ್ತಾರೆ. ಪ್ರಸ್ತುತ ಕೊರೊನಾ ಹೊತ್ತಿನಲ್ಲಿ ತುಳಸಿಗೆ ಮತ್ತೂಮ್ಮೆ ಮಹತ್ವ ಬಂದಿದೆ. ಇದಕ್ಕೆ ಕಾರಣ ತುಳಸಿಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ತಾಕತ್ತು. ತುಳಸೀಯಲ್ಲಿರುವ ವಿಶಿಷ್ಟ ಶಕ್ತಿಗಳ ಸಣ್ಣ ಮೆಲುಕು ಇಲ್ಲಿದೆ.
ತುಳಸೀ ಪತ್ರೆ ತೀರಾ ಹಸಿರಾಗಿದ್ದರೆ ರಾಮತುಳಸಿ, ಕಪ್ಪು ಬಣ್ಣ ಹೊಂದಿದ್ದರೆ ಕೃಷ್ಣ ತುಳಸೀ ಎನ್ನುತ್ತಾರೆ. ಇನ್ನು ಎಲ್ಲ ಕಡೆ ಸಿಗುವುದಕ್ಕೆ ವನ ತುಳಸೀ ಎನ್ನುತ್ತಾರೆ. ಭಾರತ ಹಾಗೂ ಈಶಾನ್ಯ ಏಷ್ಯಾದಲ್ಲಿ ಜನಪ್ರಿಯ. ಹೃದಯ, ಪಿತ್ತಜನಕಾಂಗ, ಚರ್ಮ, ಮೂತ್ರಕೋಶದ ಸೋಂಕಿಗೆ ಔಷಧವೆಂದು ಆಯುರ್ವೇದ ಪರಿಗಣಿಸುತ್ತದೆ. ಆದ್ದರಿಂದಲೇ ಔಷಧಮೂಲಿಕೆಗಳ ರಾಣಿ ಎಂದೇ ಕರೆಯುತ್ತಾರೆ.
ತುಳಸಿಯಲ್ಲಿ ಮುಖ್ಯ ವಾಗಿ ಸಿ ಜೀವಸತ್ವ ಮತ್ತು ಸತುವಿನ ಅಂಶವಿರುತ್ತದೆ. ಇದರಿಂದ ರೋಗ ನಿರೋಧಕಶಕ್ತಿ ಹೆಚ್ಚುತ್ತದೆ. ಹಾಗೆಯೇ ಸೋಂಕು ವ್ಯಾಪಿಸುವುದನ್ನು ತಡೆಯುತ್ತದೆ. ಪ್ರಸ್ತುತ ಶ್ವಾಸಕೋಶದ ಸೋಂಕೇ ಕೊರೊನಾ ಬಿಗಡಾಯಿಸಲು ಕಾರಣವೆನ್ನುವುದನ್ನು ಇಲ್ಲಿ ಗಮನಿಸಬೇಕು. ವೈರಸ್ ಹರಡುವುದಕ್ಕೆ ತುಳಸಿ ತಡೆಯೂ ಹೌದು.
ವೈರಸ್, ಬ್ಯಾಕ್ಟೀರಿಯಗಳನ್ನು ತುಳಸಿಪತ್ರೆ ನಿಗ್ರಹಿಸುತ್ತದೆ. ಆದ್ದರಿಂದ ಜ್ವರವನ್ನು ನಿಯಂತ್ರಣಕ್ಕೆ ತರಬಹುದು. ತುಳಸೀ ರಸಕ್ಕೆ, ಕಾಳುಮೆಣಸಿನ ಪುಡಿಯನ್ನು ಬೆರೆಸಿ ಅದರ ಕಷಾಯ ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಏಲಕ್ಕಿ, ಸಕ್ಕರೆ, ಹಾಲನ್ನು ಹಾಕಿ ಕುದಿಸಿ ಕುಡಿದರೆ ಶರೀರದ ತಾಪ ನಿಯಂತ್ರಣಕ್ಕೆ ಬರುತ್ತದೆ.