ಸಾಲಮನ್ನಾಗೆ ಅಡ್ಡಿಪಡಿಸಿದ ಕಾಂಗ್ರೆಸ್
ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಏನೂ ಮಾಡಲಿಲ್ಲ: ಕುಮಾರಸ್ವಾಮಿ ಆರೋಪ
Team Udayavani, May 10, 2022, 10:45 AM IST
ಬಾದಾಮಿ: ಸುಮಾರು 75 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಯಾವುದೇ ಜನಪರ ಯೋಜನೆ ಜಾರಿ ಮಾಡಲಿಲ್ಲ. 2013ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಘೋಷಣೆಯೊಂದಿಗೆ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರಕಾರದ ಅವಧಿಯಲ್ಲಿ ಲಾಟರಿ ನಿಷೇಧ ಮಾಡಿದೆ. ಸಾರಾಯಿ ನಿಷೇಧಕ್ಕೆ ತೀರ್ಮಾನ ಮಾಡಿದ್ದೆ, ಕರ್ನಾಟಕ ಪಬ್ಲಿಕ್ ಶಾಲೆ ಜಾರಿಗೆ ತಂದೆ. ಆದರೆ ಬಿಜೆಪಿ ಸರಕಾರ ಅದನ್ನು ನಿಲ್ಲಿಸಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಉಚಿತ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂದರು.
ಬಡ ಕುಟುಂಬಗಳು ಉತ್ತಮ ಜೀವನ ನಡೆಸಲು ಬಡವರಿಗೆ ಸೂರು ಸೇರಿದಂತೆ ಉತ್ತಮವಾದ ಜನಪರ ಯೋಜನೆ ರೂಪಿಸಿ, ಜಾರಿ ಮಾಡಲಾಗುವುದು. ಮಕ್ಕಳ ಶಿಕ್ಷಣ ಆರೋಗ್ಯ, ವಸತಿ, ಸೇರಿದಂತೆ ಪಂಚರತ್ನ ಯೋಜನೆ ಜಾರಿ ಮಾಡುತ್ತೇನೆ. ಇದೊಂದು ಬಾರಿ ಯೋಚಿಸಿ ಮತ ನೀಡಿ ಎಂದು ಮನವಿ ಮಾಡಿದರು.
ಬಾದಾಮಿ ತಾಲೂಕಿಗೆ 100 ಕೋಟಿ ಜಿಲ್ಲೆಗೆ 1000 ಕೋಟಿ ರೈತರ ಸಾಲ ಮನ್ನಾ ಆಗಿದೆ. ಸಾಲಮನ್ನಾಗೆ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸಿತು ಎಂದು ಆರೋಪಿಸಿದರು.
ದೇವೇಗೌಡರು ಸಿಎಂ ಆಗಿದ್ದಾಗ ಯುಕೆಪಿ ನೀರಾವರಿ ಯೋಜನೆ ಅನುಷ್ಠಾನ ಮಾಡಿದರು. ಕೆರೂರ ಏತ ನೀರಾವರಿ ಯೋಜನೆಗೆ ಅನುಮತಿ ನೀಡಿದ್ದು ನಮ್ಮ ಪಕ್ಷ. ಕೃಷ್ಣಾ ಯೋಜನೆಯ ಮೂರನೇ ಹಂತ ಮತ್ತು ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಬದ್ಧವಾಗಿದ್ದು, ರೈತರ ಬಾಳು ಹಸನು ಮಾಡುತ್ತೇನೆ. ಇದೊಂದು ಬಾರಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಬೇಕೆಂದು ಮನವಿ ಮಾಡಿದರು.
ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹನಮಂತ ಮಾವಿನಮರದ, ಮುಖಂಡರಾದ ಪುಂಡಲೀಕ ಕವಡಿಮಟ್ಟಿ, ಚಂದ್ರಕಾಂತ ಶೇಖಾ, ಶೇಖರ ರಾಠೊಡ, ಪ್ರಕಾಶ ಗಾಣಿಗೇರ, ಹುಚ್ಚೇಶ ಹದ್ದನ್ನವರ, ಉಮೇಶ ಹುನಗುಂದ, ಸಿದ್ದು ಬಂಡಿ, ಎಂ.ಎಸ್.ಹಿರೇಹಾಳ, ಚಂದ್ರು ಸೂಡಿ, ಮಂಜು ಪತ್ತಾರ, ಯಲ್ಲಪ್ಪ ಕಲಾದಗಿ, ಮಹೇಶ ಕೆರೂರ, ಮಲ್ಲು ಹಡಪದ, ಮಂಜು ತೋಟದ, ಅಜೀಜ ಮುಲ್ಲಾ ಸೇರಿದಂತೆ ಕುಂಭ ಹೊತ್ತ ಮಹಿಳೆಯರು, ಕಾರ್ಯಕರ್ತರು ಹಾಜರಿದ್ದರು.