ಬೈಕ್ನಿಂದ ಬಿದ್ದು ಬಿಬಿಎಂಪಿ ಆರೋಗ್ಯಾಧಿಕಾರಿ ಸಾವು
Team Udayavani, Dec 28, 2022, 12:42 PM IST
ಬೆಂಗಳೂರು: ರಸ್ತೆ ಅಪಘಾತದಲ್ಲಿ ಬಿಬಿಎಂಪಿಯ ಆರೋಗ್ಯಾಧಿಕಾರಿ ಮೃತಪಟ್ಟಿರುವ ಘಟನೆ ಸದಾಶಿವನಗರ ಸಂಚಾರ ಠಾಣೆ ವ್ಯಾಪ್ತಿಯ ಸ್ಯಾಂಕಿ ಕೆರೆ ಸಮೀಪದ ಟಿ.ಚೌಡಯ್ಯ ರಸ್ತೆಯಲ್ಲಿ ನಡೆದಿದೆ. ಅರಕಲಗೂಡು ಮೂಲದ ಪ್ರಶಾಂತ್ ನಾಯಕ್(27) ಮೃತ ದುರ್ದೈವಿ.
ಜೆ.ಪಿ ನಗರದ ನಿವಾಸಿ ಪ್ರಶಾಂತ್ ನಾಯಕ್ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯಲ್ಲಿ(ಬಿಬಿಎಂಪಿ) ಆರೋಗ್ಯಾಧಿಕಾರಿಯಾಗಿದ್ದರು. ಸೋಮವಾರ ತಡರಾತ್ರಿ 12:40 ರ ವೇಳೆ ಸದಾಶಿವನಗರದಿಂದ ಮನೆಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಬಾಷ್ಯಂ ಸರ್ಕಲ್ ಕಡೆಯಿಂದ ಮಾರಮ್ಮ ಸರ್ಕಲ್ ಕಡೆಗೆ ಗೋಕಾಕ್ ಪಾರ್ಕ್ ಹತ್ತಿರ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಿಯಂತ್ರಣ ತಪ್ಪಿ ಬೈಕ್ ಫುಟ್ಪಾತ್ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ನೆಲಕ್ಕೆ ಬಿದ್ದ ಪ್ರಶಾಂತ್ ನಾಯಕ್ ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅತಿವೇಗ ಮತ್ತು ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.