ಮಂಜುಳಾ ನಾಯ್ಡು ಬೆಂಬಲಿಗರ ಧರಣಿ
Team Udayavani, Apr 17, 2018, 12:04 PM IST
ಬೆಂಗಳೂರು: ಕೆಪಿಸಿಸಿ ಕಚೇರಿ ಬಳಿ ಸೋಮವಾರ ಟಿಕೆಟ್ ವಂಚಿತರ ಬೆಂಬಲಿಗರು ಧರಣಿ ನಡೆಸಿ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮೇಯರ್ ಜಿ.ಪದ್ಮಾವತಿಯವರಿಗೆ ಟಿಕೆಟ್ ನೀಡಿರುವುದನ್ನು ಖಂಡಿಸಿ ಆಕಾಂಕ್ಷಿಯಾಗಿದ್ದ ಮಂಜುಳಾ ನಾಯ್ಡು ನೇತೃತ್ವದಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ನಾನು ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತೆ. ಪದ್ಮಾವತಿ ಕಳೆದ ಚುನಾವಣೆಯಲ್ಲಿ ಕೆಜೆಪಿ ಪರ ಕೆಲಸ ಮಾಡಿದ್ದರು. ಕಾರ್ಯಕರ್ತರು ಮತ್ತು ಬೆಂಬಲಿಗರು ಬಯಸಿದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧ ಎಂದು ಹೇಳಿದರು.
ಬೆಂಗಳೂರಿನಲ್ಲಿ 28 ಕ್ಷೇತ್ರಗಳಿವೆ. ಒಂದೇ ಒಂದು ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಿಲ್ಲ ಎಂದು ದೂರಿದರು. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಗಿರೀಶ್ ನಾಶಿ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.