ಸ್ವಚ್ಛತೆ ಕಾಪಾಡಿ: ಶಾಸಕ
Team Udayavani, Mar 23, 2020, 7:37 PM IST
ನೆಲಮಂಗಲ: ಕೋವಿಡ್ 19 ವೈರಸ್ ಮನುಕುಲವನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಎಲ್ಲರೂ ಜಾಗೃತಿ ವಹಿಸಿ, ಸುತ್ತ ಮುತ್ತಲ ಪ್ರದೇಶವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು ಎಂದು ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಸಲಹೆ ನೀಡಿದರು.
ತಾಲೂಕಿನ ಬಸವನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಬಿ ರಂಗನಾಥ್ ಅನುದಾನದಲ್ಲಿ ನಿರ್ಮಾಣ ಮಾಡಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಪರಿಸರ ಸ್ವಚ್ಛವಾಗಿದ್ದರೆ, ಕೋವಿಡ್ 19ದಂತಹ ಕಾಯಿಲೆ ದೂರಮಾಡಲು ಸಾಧ್ಯವಿದೆ. ಹೀಗಾಗಿ ಎಲ್ಲರೂ ಜಾಗೃತರಾಗಿ ಹರಡುತ್ತಿರುವ ಮಹಾಮಾರಿ ತಡೆಗಟ್ಟಲು ಮುಂದಾಗಿ ಶುದ್ಧ ನೀರು ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಬಿ ರಂಗನಾಥ್ ಮಾತನಾಡಿದರು. ತಾಪಂ ಸದಸ್ಯ ರುದ್ರೇಶ್, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲಿ ಮೂರ್ತಿ, ಬಸವನಹಳ್ಳಿ ಗ್ರಾಪಂ ಅಧ್ಯಕ್ಷೆ ಮಾಜಾನ್ ಬೀ, ಉಪಾಧ್ಯಕ್ಷ ಬಿಎ ವರದನಾರಾಯಣ್, ಸದಸ್ಯ ಉಮೇಶ್ಗೌಡ, ನರಸಿಂಹ ಮೂರ್ತಿ, ಮುಖಂಡ ಕನ್ನಡ ಕುಮಾರ್, ಗುತ್ತಿಗೆದಾರ ಸುರೇಶ್, ಒಬಿಸಿ ವಿಸ್ತಾರಣಾಧಿಕಾರಿ ಸುನೀತಾ, ಸಿಬ್ಬಂದಿ ಶಶಿಧರ್, ಶಾಂತಾಬಾಯಿ ಗುತ್ತಿಗೆದಾರ ಮೋಹನ್ಕುಮಾರ್ ಮತ್ತಿತರರಿದ್ದರು.