ಡಿಕೆಶಿ ನನ್ನ ತಲೆ ಮೇಲೆ ಲಕ್ಷ್ಮೀಯನ್ನು ಕೂರಿಸಲು ಮುಂದಾಗಿದ್ದರು: ರಮೇಶ್ ಜಾರಕಿಹೊಳಿ
Team Udayavani, Nov 16, 2019, 1:36 PM IST
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮಾಡಲು ಆರಂಭಿಸಿ ನನ್ನ ತಲೆ ಮೇಲೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಕೂರಿಸಲು ಯತ್ನಿಸಿದ್ದಾರೆ. ಆಗ ನಾನು ಸುಮ್ಮನಿರಲು ಸಾಧ್ಯವೇ ಎಂದು ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಡಿಕೆಶಿ ಹಾಗೂ ಹೆಬ್ಬಾಳಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಗೋಕಾಕದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಡಿ.ಕೆ. ಶಿವಕುಮಾರ್ ಮತ್ತು ನನ್ನ ಭಾಂದವ್ಯ ಉತ್ತಮವಾಗಿತ್ತು. ಬೆಳಗಾವಿ ರಾಜಕಾರಣದಲ್ಲಿ ಅವರು ಸುಖಾಸುಮ್ಮನೇ ಹಸ್ತಕ್ಷೇಪ ಮಾಡಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸೀನಿಯರ್ ಆದ ಬಳಿಕ ಮುಖ್ಯಮಂತ್ರಿ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ. ಆದರೇ ಈಗಲೇ ಅವರನ್ನು ನನ್ನ ತಲೆ ಮೇಲೆ ಕೂರಿಸಲು ಮುಂದಾದರೆ ಹೇಗೆ ಒಪ್ಪಲು ಸಾಧ್ಯ ಎಂದು ಪ್ರಶ್ನಿಸಿದರು.
ತೋಳ ಬಂತು ತೋಳ ಅಲ್ಲ, ಈಗ ಹುಲಿ ಬಂತು ಹುಲಿಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಬಂದಾಗ ಹೆಬ್ಬಾಳಕರ್ ಗೆ ಯಾವುದೇ ಸ್ಥಾನಮಾನ ನೀಡದಂತೆ ಸಿದ್ದರಾಮಯ್ಯ, ಡಿಕೆಶಿ ಹಾಗೂ ಗುಂಡೂರಾವ್ ಸಮ್ಮುಖದಲ್ಲಿಯೇ ನಿರ್ಧಾರವಾಗಿತ್ತು. ಆದರೆ ನಿಗಮ ಮಂಡಳಿ ಕೊಟ್ಟಿದ್ದರು. ಮುಂದೆ ಸಚಿವ ಸ್ಥಾನವೂ ಕೊಡಬಹುದಲ್ವೇ? ಎಂದು ಕಿಡಿಕಾರಿದರು.
ಹೆಬ್ಬಾಳಕರ್ ಸಚಿವೆಯಾದರೆ ಹೊಟ್ಟೆ ಕಿಚ್ಚುಪಡುವ ಸಣ್ಣ ಮನುಷ್ಯ ನಾನಲ್ಲ. ಆಕೆಯ ಹಣೆಬರದಲ್ಲಿ ಇದ್ದರೆ ಸಚಿವೆಯಾಗಲಿ. ಆದರೆ ಆಕೆಗಾಗಿ ದುಡಿದವರ ಬಗ್ಗೆ ಸ್ವಲ್ಪ ಚಿಂತೆ ಮಾಡಬೇಕಿತ್ತು. ಟಿಕೆಟ್ ಕೊಡಿಸಬೇಡ, ಹೆಬ್ಬಾಳಕರ್ ಕೆಟ್ಟವಳು ಎಂದು ಬಹಳಷ್ಟು ಜನ ಹೇಳಿದರೂ ನಾನು ಕೇಳದೇ ಟಿಕೆಟ್ ಕೊಡಿಸಿ ಗೆಲ್ಲಿಸಿ ತಪ್ಪು ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಡಿಕೆಶಿ ಕೈಯಲ್ಲಿದೆ, ಇನ್ನು ತನ್ನದೇ ರಾಜ್ಯಭಾರ ಎನ್ನುವ ಅಹಂಕಾರ ಹೆಬ್ಬಾಳ್ಕರ್ ಗೆ ಬಂದಿತ್ತು. ರಾಜಕಾರಣದಲ್ಲಿ ಯಾರು ದೊಡ್ಡವರು, ಯಾರು ಸಣ್ಣವರು ಎಂಬುದು ಅವರಿಗೆ ತಿಳಿಯಲಿಲ್ಲ. ಈ ಬಗ್ಗೆ ಸತೀಶ್ ಜಾರಕಿಹೊಳಿ ಕೂಡ ಹೋರಾಟ ಮಾಡಲಿಲ್ಲ. ಹೆಬ್ಬಾಳಕರ್ ಮನೆಗೆ ಸತೀಶ ಚಹಾ ಕುಡಿಯೋಕೆ ಹೋಗುತ್ತಿದ್ದರು. ಹೆಬ್ಬಾಳಕರ್ ಪ್ರಭಾವಿ ಆಗಲು ಡಿಕೆಶಿ ಅಷ್ಟೇ ಅಲ್ಲ ನಾವೂ ಕಾರಣರು ಎಂದು ರಮೇಶ ಜಾರಕಿಹೊಳಿ ಹೇಳಿದರು.