ಸಂಭ್ರಮದ ಸಿದೇಶ್ವರ ದೇವರ ಜಾತ್ರೆ
Team Udayavani, Jan 17, 2020, 3:11 PM IST
ಕಾಗವಾಡ: ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಐನಾಪೂರ ಶ್ರೀ ಸಿದ್ಧೇಶ್ವರ ದೇವರ ಜಾತ್ರೆ ಪಲ್ಲಕ್ಕಿ ಉತ್ಸವ ಮಕರ ಸಂಕ್ರಮಣದ ನಿಮಿತ್ತ ಬುಧವಾರ ಜರುಗಿತು.
ದೇವರ ಭೇಟಿಯ ಸಂದರ್ಭದಲ್ಲಿ 11 ಗ್ರಾಮಗಳ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಂಡಾರ ಹಾಗೂ ಖಾರಿಕ-ಕೊಬ್ಬರಿ, ಚಿಲ್ಲರೆ ಹಣ ದೇವರ ಪಾಲಿಕೆಗಳ ಮೇಲೆ ತೂರುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಸಾವಿರಾರು ಜನರು ಸಾಗರೋಪಾದಿಯಲ್ಲಿ ಹರಿದು ಬಂದು ತಮ್ಮ ಹರಕೆ ತೀರಿಸಿ ಭಂಡಾರದಲ್ಲಿ ಮಿಂದೆದ್ದರು. ಶ್ರೀ ಸಿದ್ಧೇಶ್ವರ ದೇವರ ಪೂಜೆ ನೆರವೇರಿಸಿ ಅಭಿಷೇಕ, ಭಂಡಾರ ಪೂಜೆ, ನೈವೇದ್ಯ ಮಾಡಿದರು. ಬೆಳಗ್ಗೆ ಶ್ರೀ ಸಿದ್ಧೇಶ್ವರನಿಗೆ ಭಂಡಾರ ಪೂಜೆ, ಮಹಾಪೂಜೆ, ಅಭಿಷೇಕ, ನೈವೇದ್ಯ ನಡೆಯಿತು.
ನಂತರ ಕೃಷ್ಣಾ ನದಿಯಲ್ಲಿ 11 ಗ್ರಾಮಗಳ ವಿವಿಧ ದೇವರ ಗಂಗಾಜಲ ಅಭಿಷೇಕ ನೆರವೇರಿತು. ರಾಜುಗೌಡಾ ಪಾಟೀಲ, ಸುಭಾಷಗೌಡಾ ಪಾಟೀಲ, ಪ್ರಶಾಂತ ಅಪರಾಜ, ಅಣ್ಣಾಸಾಬ ಡೂಗನವರ, ಬಾಹುಬಲಿ ಕುಸನಾಳೆ, ಪ್ರಕಾಶಚಿನಗಿ, ಸುರೇಶ ಅಡಿಶೇರಿ, ಹನಮಂತ ಪೂಜಾರಿ, ಸೇರಿದಂತೆ ಅನೇಕರು ಭಾಗವಹಿಸಿದರು.