ಮಕ್ಕಳಿಗೆ ಮನೆ ಬುತ್ತಿ ಊಟವೇ ಗತಿ!
Team Udayavani, Jul 7, 2022, 2:28 PM IST
ವಿಜಯಪುರ: ಶಿಕ್ಷಣ ಇಲಾಖೆ ಹಾಗೂ ಸಮಸ್ಯೆ ಒಟ್ಟೊಟ್ಟಿಗೆ ಜನ್ಮ ತಳೆದಂತಿದೆ. ಶಾಲೆ ಆರಂಭಗೊಳ್ಳುತ್ತಲೇ ಪಠ್ಯದಲ್ಲಿನ ಸಾಲು ಸಾಲು ಲೋಪಗಳು ವಿವಾದ ಹುಟ್ಟು ಹಾಕಿದ್ದು, ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಇದರ ಬೆನ್ನಲ್ಲೇ ವಿಜಯಪುರ ಜಿಲ್ಲೆಯಲ್ಲಿ ಅಕ್ಷರ ದಾಸೋಹದ ಮಧ್ಯಾಹ್ನ ಬಿಸಿಯೂಟ ಸ್ಥಗಿತಗೊಂಡಿದ್ದು, ಮಕ್ಕಳು ಮನೆಯಿಂದ ರೊಟ್ಟಿಬುತ್ತಿ ತಂದು ಊಟ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷ ಕಳೆದ ಮೇ 15ರಿಂದ ಆರಂಭಗೊಂಡಿದ್ದು, ಇದೀಗ 50 ದಿನಗಳಾದರೂ ಜಿಲ್ಲೆಯ ಸುಮಾರು 600 ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಂಡಿದೆ. ತಾಪಂ, ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳ ನಿರ್ಲಕ್ಷéದ ಪರಿಣಾಮವೇ ಇದೀಗ ಮಕ್ಕಳಿಗೆ ಶಾಲೆಗಳಲ್ಲಿ ಸರ್ಕಾರದ ಬಿಸಿಯೂಟ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿದೆ.
ವಿಜಯಪುರ ನಗರ ವಲಯದ ವ್ಯಾಪ್ತಿಯ ವಿಜಯಪುರ ತಾಲೂಕಿನ ಹಳ್ಳಿಗಳ 201 ಶಾಲೆಗಳಲ್ಲಿ ಬಹುತೇಕ ಶಾಲೆಗಳು ಹಾಗೂ ವಿಜಯಪುರ ಗ್ರಾಮೀಣ ವಲಯದ ತಿಕೋಟಾ, ಬಬಲೇಶ್ವರ ತಾಲೂಕು ವ್ಯಾಪ್ತಿಯ 490 ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಂಡಿದೆ. ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ ತಾಪಂ ಅಧೀನದಲ್ಲಿರುವ ಅಕ್ಷರ ದಾಸೋಹ ವಿಭಾಗದಿಂದ ಆಹಾರ ಧಾನ್ಯ ಪೂರೈಕೆಯಾಗಿಲ್ಲ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಉಳಿಕೆಯಾಗಿದ್ದ ಅಲ್ಪಸ್ವಲ್ಪ ಆಹಾರ ಧಾನ್ಯ ಬಳಸಿಕೊಂಡು ಕೆಲ ದಿನಗಳಿಂದ ಬಿಸಿಯೂಟ ಪೂರೈಸಿದ್ದು, ಸುಮಾರು ಒಂದು ತಿಂಗಳಿಂದ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಬಿಸಿಯೂಟಕ್ಕೆ ಬೇಕಾದ ಆಹಾರ ಧಾನ್ಯ ಪೂರೈಕೆಯೇ ಆರಂಭಗೊಂಡಿಲ್ಲ. ಇದರ ಬೆನ್ನಲ್ಲೇ ಅಕ್ಷರ ದಾಸೋಹ ಯೋಜನೆಗೆ ಗ್ಯಾಸ್ ಪೂರೈಸುತ್ತಿದ್ದ ಗ್ಯಾಸ್ ಏಜೆನ್ಸಿಯವರಿಗೆ ಕಳೆದ ವರ್ಷದ ಮಾರ್ಚ್ನಿಂದ ಬಿಲ್ ಪಾವತಿಸಿಲ್ಲ. ಪರಿಣಾಮ ಸುಮಾರು 600 ಶಾಲೆಗಳ ಗ್ಯಾಸ್ ಸಂಪರ್ಕದಿಂದ ಬಳಕೆಯಾಗುತ್ತಿದ್ದ 1 ಸಾವಿರ ಗ್ಯಾಸ್ ಸಿಲಿಂಡರ್ನ ಸುಮಾರು 20 ಲಕ್ಷ ರೂ. ಬಾಕಿ ಪಾವತಿಸಬೇಕಿದೆ. ಕಾರಣ ಮತ್ತಷ್ಟು ಆರ್ಥಿಕ ಸಮಸ್ಯೆ ಎದುರಿಸಲಾಗದ ಗ್ಯಾಸ್ ಏಜೆನ್ಸಿಯವರು ಶಾಲೆಗಳಿಗೆ ಗ್ಯಾಸ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ.
ಇಲಾಖೆ ಹಾಗೂ ಅಧಿಕಾರಿಗಳ ಆಡಳಿತ ವ್ಯವಸ್ಥೆಯಲ್ಲಿನ ಲೋಪವೇ ಇಡೀ ಸಮಸ್ಯೆಗೆ ಕಾರಣವಾಗಿದೆ. ಅಧಿಕಾರಿಗಳು ತ್ವರಿತ ಸ್ಪಂದನೆ ಮಾಡಿ ಸಮಸ್ಯೆ ಪರಿಹರಿಸುವ ಬದಲು ಯಾವುದೇ ಕಾರಣಕ್ಕೂ ಬಿಸಿಯೂಟ ಸ್ಥಗಿತಗೊಳ್ಳುವಂತಿಲ್ಲ ಎಂದು ಶಾಲೆಗಳ ಮುಖ್ಯೋಪಾಧ್ಯಾಯರಿಗೆ ತಾಕೀತು ಮಾಡುತ್ತಿದ್ದಾರೆ. ಪರಿಣಾಮ ಶಾಲೆಗಳ ಮುಖ್ಯೋಪಾಧ್ಯಾಯರು ನಗದು ಕೊಟ್ಟು ಗ್ಯಾಸ್ ಇಲ್ಲದ ಕಾರಣ ಕಟ್ಟಿಗೆ ಖರೀದಿಗೆ ಮುಂದಾಗಿದ್ದಾರೆ. ಕೆಲವು ಶಾಲೆಗಳಲ್ಲಿ ನಗದು ಕೊಟ್ಟು ಗ್ಯಾಸ್ ಪೂರೈಕೆ ಮಾಡಿಕೊಳ್ಳಲಾಗಿದೆ. ಇನ್ನು ಅಕ್ಕಿ, ಬೇಳೆಯಂಥ ಆಹಾರ ಧಾನ್ಯಗಳ ಪೂರೈಕೆಯೂ ಆರಂಭಗೊಂಡಿಲ್ಲ. ಹೀಗಾಗಿ ಶಿಕ್ಷಕರೇ ಗ್ಯಾಸ್ ಜೊತೆ ಆಹಾರ ಧಾನ್ಯ ಖರೀದಿಸಿ ಸರ್ಕಾರದ ಅಕ್ಷರ ದಾಸೋಹ ಯೋಜನೆಗೆ ಅನ್ನ ಹಾಕುತ್ತಿದ್ದಾರೆ.
ಆರ್ಥಿಕ ಶಕ್ತಿ ಇಲ್ಲದ ಶಾಲೆಗಳಲ್ಲಿ ನಗದು ವ್ಯವಹಾರ ಅಸಾಧ್ಯವಾಗಿದ್ದು, ಶಿಕ್ಷಕರು ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಯೋಜನಾಧಿಕಾರಿಗಳಿಗೆ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸುವುದಿಲ್ಲ, ಸ್ವೀಕರಿಸಿದರೂ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಸಮಸ್ಯೆಗೆ ಕಾರಣ ಕೇಳಿದರೆ ಅಕ್ಷರ ದಾಸೋವ ವಿಭಾಗದ ಅಧಿಕಾರಿಗಳು ಸಮಸ್ಯೆ ಏನೂ ಇಲ್ಲ. ಅಲ್ಲಲ್ಲಿ ಕೆಲವೆಡೆ ಸಮಸ್ಯೆ ಇದ್ದರೂ ಶಾಲಾ ಅನುದಾನ ಬಳಸಿಕೊಂಡು ಸ್ಥಳೀಯ ಮಟ್ಟದಲ್ಲಿ ಕಟ್ಟಿಗೆ, ಆಹಾರ ಧಾನ್ಯ ಖರೀದಿಸಿ ಮಧ್ಯಾಹ್ನ ಬಿಸಿಯೂಟ ಪೂರೈಕೆ ಮಾಡುವಂತೆ ಸೂಚಿಸಲಾಗಿದೆ ಎಂದು ಶಿಕ್ಷಕರ ಮೇಲೆ ಹೊರೆ ಹಾಕಿದ್ದನ್ನು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಮನೆಯಿಂದಲೇ ಮಧ್ಯಾಹ್ನದ ಬಿಸಿಯೂಟಕ್ಕೆ ಬುತ್ತಿ ಕಟ್ಟಿಕೊಂಡು ಬರುವಂತೆ ಶಿಕ್ಷಕರು ತಾಕೀತು ಮಾಡಿದ್ದರಿಂದ ಮಕ್ಕಳಿಗೆ ಅಕ್ಷರ ದಾಸೋಹಕ್ಕೆ ಮನೆಯ ರೊಟ್ಟಿಬುತ್ತಿ ಗತಿಯಾಗಿದೆ.
ಅಧಿಕಾರಿಗಳ ಆಡಳಿತದ ವೈಫಲ್ಯದಿಂದಾಗಿ ಶಿಕ್ಷಕರು ಇಲಾಖೆ ಸೂಚನೆ ಪಾಲಿಸಲೂ ಆಗದೆ, ಪಾಲಿಸದಿರಲೂ ಆಗದೇ ಅವ್ಯಕ್ತ ಸಮಸ್ಯೆ ಎದುರಿಸುತ್ತಿದ್ದಾರೆ. ಯಾರನ್ನು ದೂರಲಾಗದ ಮಕ್ಕಳು ಮಾತ್ರ ಮನೆಯಿಂದ ರೊಟ್ಟಿಬುತ್ತಿ ಹೊತ್ತು ಬರುವುದನ್ನು ರೂಢಿಸಿಕೊಂಡಿದ್ದಾರೆ. ಈ ಲೋಪಕ್ಕೆ ತ್ವರಿತ ಸ್ಪಂದನೆ ಸಿಗದಿದ್ದರೆ ಸಾರ್ವಜನಿಕರು ಬೀದಿಗಿಳಿದು ಅಕ್ಷರ ದಾಸೋಹ ಯೋಜನೆಯ ಮಧ್ಯಾಹ್ನ ಬಿಸಿಯೂಟಕ್ಕಾಗಿ ಶಾಲೆಗಳತ್ತ ದಾವಿಸುವ ದುಸ್ಥಿತಿ ಎದುರಾಗುವ ದಿನಗಳು ದೂರವಿಲ್ಲ.
ಶಾಲೆಗಳ ಬಿಸಿಯೂಟಕ್ಕೆ ಗ್ಯಾಸ್ ಪೂರೈಸುತ್ತಿದ್ದ ಮೊದಲಿನ ಏಜೆನ್ಸಿಯವರು ಮಾರ್ಚ್ ನಂತರ ಬಿಲ್ ಸಲ್ಲಿಸಿದ್ದು, ಬಜೆಟ್ ಸಮಸ್ಯೆಯಾಗಿದೆ. ಇದೀಗ ವಿಜಯಪುರ, ಬಬಲೇಶ್ವರ, ತಿಕೋಟಾ ತಾಲೂಕಿನ ಶಾಲೆಗಳಿಗೆ ಪ್ರತ್ಯೇಕ ಏಜೆನ್ಸಿಗಳ ನೇಮ ಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಾದಿಲ್ವಾರು ಬಳಸಿ ಕೊಂಡು ಬಿಸಿಯೂಟ ಯೋಜನೆ ನಡೆಸಲು ಮುಖ್ಯೋಪಾದ್ಯಯರಿಗೆ ಸೂಚಿಸಲಾಗಿದೆ. -ಎಸ್.ಎಸ್.ಮುಜಾವರ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ವಿಜಯಪುರ
-ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ